ಕರ್ಫ್ಯೂ; ಕರ್ನಾಟಕ ಸ್ತಬ್ಧ, ಲಾಕ್ ಡೌನ್ ವಿನಾಯಿತಿ ಇಲ್ಲ
ಬೆಂಗಳೂರು, ಮೇ 24 : ಶನಿವಾರ ಸಂಜೆ 7 ಗಂಟೆಯಿಂದ ಕರ್ಫ್ಯೂ ಜಾರಿಯಲ್ಲಿ ಇರುವ ಕಾರಣ ಭಾನುವಾರ ಕರ್ನಾಟಕ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ.
Recommended Video
ಕರ್ನಾಟಕ ಸರ್ಕಾರ 4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿ ಪ್ರಕಟಿಸುವಾಗಲೇ ಭಾನುವಾರ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಹೇಳಿತ್ತು. ಮೊದಲ ಭಾನುವಾರ ಕರ್ಫ್ಯೂ ಹಾಕಲಾಗಿದ್ದು, ರಾಜ್ಯ ಸಂಪೂರ್ಣ ಸ್ತಬ್ಧವಾಗಿದೆ.
ಬಸ್, ಆಟೋ, ರೈಲು ಸೇರಿದಂತೆ ಯಾವುದೇ ಸಾರಿಗೆ ಸಂಚಾರವಿಲ್ಲ. ಖಾಸಗಿ ವಾಹನದಲ್ಲಿಯೂ ಜನರು ಅನಗತ್ಯವಾಗಿ ತಿರುಗಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬ್ಯಾರಿಕೇಡ್ಗಳನ್ನು ಹಾಕಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಹಾಲು, ಔಷಧಿ, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 11ಗಂಟೆಯ ತನಕ ಮೀನು, ಮಾಂಸ ಮಾರಾಟಕ್ಕೂ ಅನುಮತಿ ಇದೆ. ಹೋಟೆಲ್ಗಳು ಮುಚ್ಚಿದ್ದು, ಜನರ ಸಂಚಾರ ರಸ್ತೆಯಲ್ಲಿ ವಿರಳವಾಗಿದೆ.
ಬೆಂಗಳೂರು ನಗರದಲ್ಲಿ ಬೆಳಗ್ಗಿನ ವಾಕಿಂಗ್ಗೆ ಪಾರ್ಕ್ಗೆ ಬಂದವರನ್ನು ಪೊಲೀಸರು ವಾಪಸ್ ಕಳಿಸಿದರು. ನಗರದ ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು ಅನಗತ್ಯವಾಗಿ ಓಡಾಡುವ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಬಿಎಂಟಿಸಿ ಬಸ್, ಆಟೋಗಳ ಸಂಚಾರ ಸ್ಥಗಿತಗೊಂಡಿದೆ. ಶಿವಾಜಿನಗರ, ಕೆ. ಆರ್. ಮಾರ್ಕೆಟ್ನಲ್ಲಿ ಜನರಿಲ್ಲ. ಎಲ್ಲಾ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಸೋಮವಾರ ಬೆಳಗ್ಗೆ 7ಗಂಟೆಯ ತನಕ ಕರ್ನಾಟಕದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಹುಬ್ಬಳ್ಳಿ, ಗದಗ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಕರ್ಫ್ಯೂಗೆ ಜನರು ಸಹಕಾರ ನೀಡುತ್ತಿದ್ದಾರೆ. ಅನಗತ್ಯ ಓಡಾಟಕ್ಕೆ ತಡೆ ಬಿದ್ದಿದೆ.












Click it and Unblock the Notifications