ಕಾಂಗ್ರೆಸ್ಸಿನಿಂದ ಸಿ.ಎಂ.ಇಬ್ರಾಹಿಂ ಮುಂದಿನ ಸಿಎಂ ಆದರೆ, ನನ್ನ ಬೆಂಬಲ ಅವರಿಗೆ!
ಬೆಂಗಳೂರು, ಜೂನ್ 28: ಕಾಂಗ್ರೆಸ್ಸಿನಲ್ಲಿ ಆರಂಭವಾಗಿರುವ ಮುಂದಿನ ಮುಖ್ಯಮಂತ್ರಿ ಎನ್ನುವ ಒಳ ಸಮರದ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
Recommended Video
"ಕಾಂಗ್ರೆಸ್ಸಿನಲ್ಲಿ ಮುಂದಿನ ಮುಖ್ಯಮಂತ್ರಿಯಾಗುವ ಅರ್ಹತೆ ಇರುವುದು ಅಲ್ಪಸಂಖ್ಯಾತ ಸಮುದಾಯದವರಿಗೆ. ತಾವು ಆ ಸಮುದಾಯದ ಪರ ಎಂದು ಇಷ್ಟು ದಿನ ವೋಟ್ ಗಿಟ್ಟಿಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿನವರು ಈಗಲಾದರೂ ಆ ಸಮುದಾಯದವರನ್ನು ಸಿಎಂ ಮಾಡಲಿ"ಎಂದು ಸಿ.ಟಿ.ರವಿ ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರ ಹೆಸರಿನಲ್ಲೇ ಸಿಎಂ ಇದೆ. ಅವರೇ ಹೇಳಿದಂತೆ, ಈ ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ದೇವೇಗೌಡ್ರು, ಸಿದ್ದರಾಮಯ್ಯನವರು ಸಿಎಂ ಆಗಲು ಪೌರೋಹಿತ್ಯ ವಹಿಸಿದ್ದರಿಂದ, ಅಲ್ಪಸಂಖ್ಯಾತ ಸಮುದಾಯದವರೇ ಸಿಎಂ ಎಂದು ಕಾಂಗ್ರೆಸ್ ಘೋಷಿಸಲಿ"ಎಂದು ಸಿ.ಟಿ.ರವಿ ಸವಾಲೆಸೆದರು.

"ಅಲ್ಪ ಸಂಖ್ಯಾತರು ಮೆಜಾರಿಟಿ ಇರುವ ಜಾಗದಲ್ಲಿ ಮಾತ್ರ ಕಾಂಗ್ರೆಸ್ ಗೆಲುವನ್ನು ಸಾಧಿಸುತ್ತದೆ. ರಾಹುಲ್ ಗಾಂಧಿಯವರು ವಯನಾಡ್ ನಲ್ಲಿ ಸ್ಪರ್ಧಿಸಿದ್ದೂ ಇದೇ ಕಾರಣಕ್ಕೆ. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಸ್ಪರ್ಧಿಸಲಿದ್ದೇನೆ ಎನ್ನುವ ಧೈರ್ಯವನ್ನು ಅವರು ತೋರಿದರೇ'ಎಂದು ರವಿ ಲೇವಡಿ ಮಾಡಿದ್ದಾರೆ.
"ಕಾಂಗ್ರೆಸ್ಸಿನವರು ಗೆಲ್ಲುವ ಹತ್ತು ಕ್ಷೇತ್ರದಲ್ಲಿ ಎಂಟು ಕ್ಷೇತ್ರ, ಅಲ್ಪಸಂಖ್ಯಾತರು ಜಾಸ್ತಿ ಇರುವ ಕ್ಷೇತ್ರವಾಗಿರುತ್ತದೆ. ಹಾಗಾಗಿ, ಅಲ್ಪಸಂಖ್ಯಾತರೇ ಮುಂದಿನ ಸಿಎಂ ಆಗಬೇಕು ಎನ್ನುವ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆ ಸರಿಯಾಗಿಯೇ ಇದೆ"ಎಂದು ಸಿ.ಟಿ.ರವಿ ಹೇಳಿದ್ದಾರೆ.
"ಕಾಂಗ್ರೆಸ್ಸಿನಿಂದ ಸಿ.ಎಂ.ಇಬ್ರಾಹಿಂ ಅವರು ಮುಂದಿನ ಮುಖ್ಯಮಂತ್ರಿಯಾದರೆ, ನನ್ನ ಬೆಂಬಲ ಅವರಿಗಿರಲಿದೆ. ಬಿಜೆಪಿಯಲ್ಲಿ ಈಗ ಸಿಎಂ ಸ್ಥಾನ ಖಾಲಿಯಿಲ್ಲ"ಎಂದು ಸಿ.ಟಿ.ರವಿ ಹೇಳಿದರು.












Click it and Unblock the Notifications