ಇಂದಿರಾ ಕ್ಯಾಂಟೀನ್ಗೆ ಹೊಸ ಹೆಸರು ಸೂಚಿಸಿದ ಸಿ.ಟಿ. ರವಿ
ಬೆಂಗಳೂರು, ಆಗಸ್ಟ್ 07; ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂಬತ್ತು ದಿನಗಳು ಕಳೆದಿವೆ. ರಾಜ್ಯಕ್ಕೆ ಪೂರಕವಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದು, ಮುಖ್ಯಮಂತ್ರಿಗಳ ಮುಂದೆ ಹಲವು ಪ್ರಸ್ತಾಪಗಳು ಬರುತ್ತಿವೆ.
ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೊಸ ಬೇಡಿಕೆಯೊಂದನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಾಜ್ಯಾದ್ಯಂತ ಆರಂಭಿಸಲಾದ "ಇಂದಿರಾ ಕ್ಯಾಂಟೀನ್" ಹೆಸರನ್ನು "ಅನ್ನಪೂರ್ಣೇಶ್ವರಿ ಕ್ಯಾಂಟೀನ್" ಎಂದು ಬದಲಿಸಬೇಕಾಗಿ ಸಿ.ಟಿ. ರವಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಕರ್ನಾಟಕದಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಶೀಘ್ರವೇ ಅನ್ನಪೂರ್ಣೇಶ್ವರಿ ಕ್ಯಾಂಟೀನ್" ಎಂದು ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
Request Chief Minister Sri @BSBommai to rename Indira Canteens across Karnataka as "Annapoorneshwari Canteen" at the earliest.
— C T Ravi 🇮🇳 ಸ ಟಿ ರವಿ (@CTRavi_BJP) August 7, 2021
Don't see any reason why Kannadigas should be reminded of the dark days of Emergency while they are having food.
"ಆಹಾರ ಸೇವಿಸುವಾಗ, ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಕನ್ನಡಿಗರು ನೆನಪಿಸಿಕೊಳ್ಳಬೇಕಾದ ಯಾವುದೇ ಕಾರಣ ಇಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದಾಗಿತ್ತು. ತಮಿಳುನಾಡಿನ ಅಮ್ಮಾ ಕ್ಯಾಂಟೀನ್ನಿಂದ ಪ್ರೇರೇಪಣೆಗೊಂಡು ಅಂದಿನ ಸಿಎಂ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಬಡಜನರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಾಗಿತ್ತು. ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿತ್ತು.
2017ರಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್: 2017ರ ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್ಗೆ ಅಧೀಕೃತವಾಗಿ ಚಾಲನೆ ನೀಡಲಾಗಿತ್ತು. ಕ್ಯಾಂಟೀನ್ ಆರಂಭವಾದ ಮೊದಲ 2017-18ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ಗೆ 100 ಕೋಟಿ ಹಣವನ್ನು ಬಜೆಟ್ನಲ್ಲಿ ಮೀಸಲಿಟ್ಟಿದ್ದರು. ನಂತರ ರಾಜ್ಯ ಸರ್ಕಾರ 145 ಕೋಟಿ ರೂ ಮೀಸಲಿಟ್ಟು, ನಂತರ 115 ಕೋಟಿ ರೂ ಬಿಡುಗಡೆ ಮಾಡಿತ್ತು. ನಂತರ ಇಂದಿರಾ ಕ್ಯಾಂಟೀನ್ಗೆ ಹಣ ಬಿಡುಗಡೆ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ 173 ವಾರ್ಡ್ಗಳಲ್ಲಿ ಮೊದಲು ಇಂದಿರಾ ಕ್ಯಾಂಟೀನ್ ಕಾರ್ಯಾಚರಣೆ ಆರಂಭಿಸಿದ್ದವು. ಜಾಗದ ಕೊರತೆ ಇರುವ ಕಡೆ ಮೊಬೈಲ್ ಕ್ಯಾಂಟೀನ್ ಅನ್ನೂ ತೆರೆಯಲಾಗಿತ್ತು. ಬೆಂಗಳೂರಿನ ಜೊತೆಗೆ ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಕೊಡಗಿನಲ್ಲಿ ನಂತರ ಆರಂಭಿಸಲಾಗಿತ್ತು. ಆನಂತರ ಹಲವು ಜಿಲ್ಲೆಗಳಲ್ಲಿ ಕ್ಯಾಂಟೀನ್ಗಳನ್ನು ತೆರೆಯಲಾಗಿತ್ತು. ಮೂರು ಹೊತ್ತು ಆಹಾರ ಒದಗಿಸುವ ಈ ಯೋಜನೆಗೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆಯೂ ದೊರಕಿತ್ತು.
ಆದರೆ ಆನಂತರ ಕ್ಯಾಂಟೀನ್ ನಿರ್ವಹಣೆ ಸಂಬಂಧ ದೂರುಗಳು ಕೇಳಿಬಂದಿದ್ದವು. ಹತ್ತಾರು ಆಕ್ಷೇಪ, ವಿರೋಧ, ಆರೋಪಗಳ ನಡುವೆಯೂ ಕಾಂಗ್ರೆಸ್ ಸರ್ಕಾರದ ಯಶಸ್ವಿ ಯೋಜನೆಯಾಗಿ ಗುರುತಿಸಿಕೊಂಡಿದ್ದ ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ ಹಲವು ಬಾರಿ ಕೇಳಿಬಂದಿದ್ದವು. ಇದರೊಂದಿಗೆ, ನಂತರ ಬಂದ ಬಿಜೆಪಿ ಸರ್ಕಾರ ಈ ಯೋಜನೆಗೆ ಹಣ ವಿನಿಯೋಗಿಸಲು ಹಿಂದೇಟು ಹಾಕುತ್ತಿರುವ ಮಾತುಗಳು ಕೇಳಿಬಂದಿದ್ದವು. ಇಂದಿರಾ ಕ್ಯಾಂಟೀನ್ ಯೋಜನೆಗೆ ಬೇಕಾದ ಅನುದಾನದ ಜೊತೆಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕು ಎನ್ನುವ ಪ್ರಸ್ತಾಪವೂ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಮನವಿಯನ್ನು ಮತ್ತೊಮ್ಮೆ ನೂತನ ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದಾರೆ. "ಅನ್ನಪೂರ್ಣೇಶ್ವರಿ ಕ್ಯಾಂಟೀನ್" ಎಂದು ಮರುನಾಮಕಾರಣ ಮಾಡಿ ಎಂದು ಹೆಸರನ್ನೂ ಸೂಚಿಸಿ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications