CT Ravi Case: ಸಿಟಿ ರವಿ ಕೆಟ್ಟ ಪದ ಬಳಸಿದ್ದಕ್ಕೆ ಸಾಕ್ಷಿ ಇದೆ ಎಂದ ಸಿ.ಎಂ ಸಿದ್ದರಾಮಯ್ಯ, ಏನದು ?
ಕರ್ನಾಟಕದಲ್ಲಿ ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿರುವ ಎಂಎಸ್ಸಿ ಸಿಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೆಟ್ಟ ಪದಗಳನ್ನು ಬಳಸಿ ಬೈದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಿಟಿ ರವಿ ಕೆಟ್ಟ ಪದ ಬಳಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇದೆ. ರವಿ ಕೆಟ್ಟ ಪದಗಳನ್ನು ಬಳಸಿರುವುದಕ್ಕೆ ಆಡಿಯೋ ಹಾಗೂ ವಿಡಿಯೋ ಕ್ಲಿಪ್ಪಿಂಗ್ ಇದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೆ ಆತ ಕೆಟ್ಟ ಪದವನ್ನು ಬಳಸಿರುವುದನ್ನು ಹಲವು ಪರಿಷತ್ ಸದಸ್ಯರು ಕೇಳಿದ್ದಾರೆ ಎಂದಿದ್ದಾರೆ.
ಸಿಟಿ ರವಿ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ನಾನು ಆ ಪದವನ್ನು ಬಳಸಿಯೇ ಇಲ್ಲ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಟಿ ರವಿ ಹೇಳಿದ್ದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ವಿಧಾನಪರಿಷತ್ (ಕಾಂಗ್ರೆಸ್) ಸದಸ್ಯರು ಸಿಟಿ ರವಿ ಪದ ಬಳಸಿದ್ದಾರೆ ಎನ್ನುವ ಆರೋಪ ಮಾಡಿದ್ದರು. ಈ ಸಂಬಂಧ ಸಿಟಿ ರವಿ ಬಂಧನ ಸಹ ಆಗಿತ್ತು. ಬಂಧನದ ನಂತರ ಬೃಹತ್ ರಾಜಕೀಯ ಹೈಡ್ರಾಮಾಗಳು ಸಹ ನಡೆದಿದ್ದವು.

ಇದೀಗ ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮೌನ ಮುರಿದಿದ್ದಾರೆ. ಸಚಿವೆ ಬಗ್ಗೆ ಸಿಟಿ ರವಿ ಮಾತನಾಡಿರುವುದು ಅತ್ಯಂತ ಕೆಟ್ಟ ಬೆಳವಣಿಗೆ ಹಾಗೂ ಅನಾಗರಿಕತೆ, ಕ್ರಿಮಿನಲ್ ಅಪರಾಧ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾಕೆ ನ್ಯಾಯಾಂಗ ತನಿಖೆಯ ಬೇಡಿಕೆ ಇರಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಹಲವರ ಆಕ್ರೋಶ: ಸಿಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ - ವಿವಾದ ಮುಂದುವರಿದಿದೆ. ಕಾಂಗ್ರೆಸ್ ಪಕ್ಷದ ಹಲವು ನಾಯಕರು ಈ ವಿಚಾರವಾಗಿ ರಿಯಾಕ್ಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ಮುಖಂಡ ಡಿ.ಕೆ ಸುರೇಶ್ ಅವರು ಮಾತನಾಡಿ, ಸಿಟಿ ರವಿ ಅವರು ಆರೋಪ ಮಾಡುವುದರಲ್ಲಿ ಹಾಗೂ ಮಾತುಗಳನ್ನು ತಿರುಚುವುದರಲ್ಲಿ ಫೇಮಸ್ ಇದ್ದಾರೆ. ಅವರು ಮಾಡಿರುವ ತಪ್ಪಿಗಾಗಿ ಅವರು ಕರ್ನಾಟಕದ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ನನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಈ ಸರ್ಕಾರದ ಸಚಿವರೇ ಕಾರಣ ಎನ್ನುವ ಸಿಟಿ ರವಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ ಸುರೇಶ್ ಅವರು, ಸಿಟಿ ರವಿ ಬೇಕಾದರೆ, ಕೇಂದ್ರದಿಂದ ಎಸ್ಪಿಜಿ ಭದ್ರತೆ ತೆಗೆದುಕೊಳ್ಳಲಿ ಎಂದಿದ್ದಾರೆ.
ಇನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಸಿಟಿ ರವಿ ಅವರನ್ನು ನಕಲಿ ಎನ್ಕೌಂಟರ್ ಮಾಡುವ ಉದ್ದೇಶವಿದ್ದಿರಬಹುದು ಎಂದಿದ್ದಾರೆ. ಅವರನ್ನು ಈ ರೀತಿ ತರಾತುರಿಯಲ್ಲಿ ಬಂಧಿಸಿದ್ದರ ಉದ್ದೇಶ ಇದೇ ಇರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಹ್ಲಾದ ಜೋಶಿ ಅವರ ಈ ಹೇಳಿಕೆಗೂ ಇದೀಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಲಾಗಿದೆ.












Click it and Unblock the Notifications