ಸಿ ಪಿ ಯೋಗೇಶ್ವರ್ ಗೆ ಎಲ್ಲ ಪಕ್ಷಗಳಲ್ಲೂ ವಿಶೇಷ ಸಂಪರ್ಕ: ಅಚ್ಚರಿ ಹೇಳಿಕೆ ನೀಡಿದ ವಿಜಯೇಂದ್ರ
ಬೆಂಗಳೂರು, ಅಕ್ಟೋಬರ್24: ಸಿ ಪಿ ಯೋಗೇಶ್ವರ್ ಗೆ ಎಲ್ಲ ಪಕ್ಷಗಳಲ್ಲೂ ವಿಶೇಷ ಸಂಪರ್ಕ ಇದೆ. ಮೊಲಿನಿಂದಲೂ ಕಾಂಗ್ರೆಸ್ಸಿನಲ್ಲೂ ಅವರಿಗೆ ನಿಕಟ ಸಂಪರ್ಕ ಇತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಇವತ್ತಿನ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ; ಎಲ್ಲವೂ ಕೂಡ ನಿರೀಕ್ಷಿತವೇ ಎಂದ ಅವರು, ಕಾಂಗ್ರೆಸ್ಸಿನಲ್ಲೂ ಅವರಿಗೆ ನಿಕಟ ಸಂಪರ್ಕ ಇತ್ತು. ಹಾಗಾಗಿ ಒಂದು ರಾಜಕೀಯ ನಿರ್ಧಾರವನ್ನು ಅಂತಿಮವಾಗಿ ತೆಗೆದುಕೊಂಡಿದ್ದಾರೆ. ಯೋಗೇಶ್ವರ್ಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಈ ಉಪ ಚುನಾವಣೆಯ ಸಂಬಂಧ ಇವತ್ತು ನಾನು, ನಮ್ಮ ಪಕ್ಷದ ಕೆಲವು ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಮುಖಂಡರು, ಕುಮಾರಸ್ವಾಮಿಯವರು ಇವತ್ತು ಕುಳಿತು ಚರ್ಚೆ ಮಾಡುತ್ತೇವೆ. ಚನ್ನಪಟ್ಟಣದಲ್ಲಿ ಯಾರು ಅಭ್ಯರ್ಥಿ ಎಂದು ಜೆಡಿಎಸ್ನವರು ತೀರ್ಮಾನ ಮಾಡಬೇಕಾಗುತ್ತದೆ. ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ, ಒಂದಾಗಿ ಈ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದರು.
ಎನ್ಡಿಎ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ನಾವು ಸಂಪೂರ್ಣವಾಗಿ ಶ್ರಮಿಸುತ್ತೇವೆ ಮತ್ತು ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಇದೆ ಎಂದರು. ಯೋಗೇಶ್ವರ್ ಪಕ್ಷ ತೊರೆದುದರಿಂದ ಪಕ್ಷದ ಸಂಘಟನೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಯೋಗೇಶ್ವರ್ ಅವರು ಚನ್ನಪಟ್ಟಣದಿಂದ ಈ ಹಿಂದೆ ಕಾಂಗ್ರೆಸ್ ಪಕ್ಷ, ಪಕ್ಷೇತರರಾಗಿ ಗೆದ್ದಿದ್ದರು. ಅದು ಬೇರೆ ಪ್ರಶ್ನೆ. ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಸಂಘಟನೆಯನ್ನು ಹೆಚ್ಚು ವೃದ್ಧಿಸುವುದು ನಮ್ಮ ಗುರಿ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಅದನ್ನು ಯಶಸ್ವಿಯಾಗಿ ಮಾಡುತ್ತೇವೆ ಎಂದರು.
ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಯೋಗೇಶ್ವರ್ ಮೇಲೆ ಅವಲಂಬನೆ ಇಲ್ಲ. ಕಾರ್ಯಕರ್ತರ ಪಡೆ ಇದೆ. ಪಕ್ಷ ಗಟ್ಟಿಗೊಳಿಸುವ ಕಡೆ ಮುಂದಿನ ದಿನಗಳಲ್ಲಿ ಗಮನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ನಮ್ಮ ಮುಂದಿನ ಕಾರ್ಯತಂತ್ರಗಳೇನು, ಅದನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಇದ್ದರೆ ಏನು ಲಾಭ ಇರುತ್ತಿತ್ತು, ಕಾಂಗ್ರೆಸ್ಗೆ ಹೋಗಿ ಏನು ನಷ್ಟ ಆಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಕಾಲವೇ ಎಲ್ಲವನ್ನೂ ತೀರ್ಮಾನ ಮಾಡಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅವರು ಬಿಟ್ಟು ಹೋದಕಾರಣ ನಮ್ಮ ಸಂಘಟನೆ ಕುಂಠಿತವಾಗುವುದಿಲ್ಲ. ಹಳೆ ಮೈಸೂರು ಭಾಗ ನಮಗೆ ಗೊತ್ತಿದೆ. ಕಾರ್ಯಕರ್ತರ ಪಡೆ ಇದೆ. ಹೇಗೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು. ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆಗೆ ಇದೇ 25 ಕೊನೆಯ ದಿನ. ಸಭೆ ನಡೆಸಿ ಇವತ್ತು ರಾತ್ರಿ, ನಾಳೆ ಬೆಳಿಗ್ಗೆಯೊಳಗೆ ಅಭ್ಯರ್ಥಿಯನ್ನು ತೀರ್ಮಾನಿಸುತ್ತೇವೆ ಎಂದರು.
ಯೋಗೇಶ್ವರ್ ಅವರು ಸಾಕಷ್ಟು ವಿಚಾರಗಳನ್ನು ಹೇಳಬಹುದು, ಹೇಳಲಿ. ಆದರೆ, ಇವತ್ತು ಅವರೊಂದು ತೀರ್ಮಾನ ತೆಗೆದುಕೊಂಡಿದ್ದಾರೆ. ನಾವೇನು ಮಾಡಬೇಕೋ, ನಮ್ಮ ಕಾರ್ಯತಂತ್ರವನ್ನು ನಾವು ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಚನ್ನಪಟ್ಟಣ ಕುಮಾರಸ್ವಾಮಿಯವರು ಗೆದ್ದಿರುವ ಕ್ಷೇತ್ರ. ಅಭ್ಯರ್ಥಿ ಯಾರಾಗಬೇಕೆಂದು ಜೆಡಿಎಸ್ನವರು ತೀರ್ಮಾನಿಸಬೇಕೆಂದು ನಮ್ಮ ರಾಷ್ಟ್ರೀಯ ನಾಯಕರೂ ಹೇಳಿದ್ದಾರೆ. ಅದೇರೀತಿ ಯಡಿಯೂರಪ್ಪನವರೂ ಹೇಳಿದ್ದಾರೆ ಎಂದರು.
ಮಳೆ ಜಾಸ್ತಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ವ್ಯವಧಾನ ಈ ರಾಜ್ಯ ಸರಕಾರಕ್ಕೆ ಇಲ್ಲ. ಬೆಂಗಳೂರು ನಗರದಲ್ಲಿ ಇವತ್ತು ಕಾರುಗಳನ್ನು ಬಿಟ್ಟು ದೋಣಿಗಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿದರು. ರಾಜ್ಯದ ಜನರ ಪಾಲಿಗೆ ಸರಕಾರ ಬದುಕಿದೆಯೋ ಸತ್ತಿದೆಯೋ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದರು.
ಬೆಂಗಳೂರು ಮಹಾನಗರದಲ್ಲಿ ಸಿಂಗಾಪುರ ಮಾಡುವ ಸಚಿವರು ಎಲ್ಲಿ ಹೋಗಿದ್ದಾರೆ? ಹೊಸ ರಸ್ತೆ, ಅಂಡರ್ ಗ್ರೌಂಡ್ ಟನೆಲ್ ಕುರಿತು ಮಾತನಾಡುತ್ತಾರೆ. ಇವತ್ತು ಬೆಂಗಳೂರಲ್ಲೂ ಜನರ ಸಂಕಷ್ಟಕ್ಕೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಸರಕಾರ ಭ್ರಮೆಯಲ್ಲಿದೆ. ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಿಂದ ಈಚೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಸರಕಾರ ರಿಯಲ್ ಎಸ್ಟೇಟ್ ದಂಧೆಯಲ್ಲಿದೆಯೇ ಹೊರತು ನಾಡಿನ ಜನರ ಸಂಕಷ್ಟಕ್ಕೆ ಸ್ಪಂದನೆಯಂತೂ ಖಂಡಿತವಾಗಿ ಮಾಡುತ್ತಿಲ್ಲ ಎಂದು ಹೇಳಿದರು.












Click it and Unblock the Notifications