ಸದನದಲ್ಲಿ ಕೊರೊನಾ ಚರ್ಚೆ: ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಸುಧಾಕರ್
ಕರ್ನಾಟಕ, ಮಾರ್ಚ್ 9: ಚೀನಾದಲ್ಲಿ ಹುಟ್ಟಿಕೊಂಡ ಮಾರಕ ಕೊರೊನಾ ವೈರಸ್ ಸೋಂಕು ಹಲವು ದೇಶಗಳಿಗೆ ಹರಡಿದೆ. ಭಾರತಕ್ಕೆ ಈಗಾಗಲೇ ಕಾಲಿಟ್ಟಿರುವ ಕೊರೊನಾ ವೈರಸ್ ಸೋಂಕು ಇಲ್ಲಿಯವರೆಗೆ ಕರ್ನಾಟಕದಲ್ಲಿ ಪತ್ತೆ ಆಗಿಲ್ಲ.
ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ವಿಧಾನ ಸಭೆಯ ಕಲಾಪದಲ್ಲಿಂದು ಕೊರೊನಾ ವೈರಸ್ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಕೊರೊನಾ ವೈರಸ್ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ಹಲವು ಶಾಸಕರು ಒತ್ತಾಯಿಸಿದರು. ಬಳಿಕ ಮಾತಿಗಿಳಿದ ಡಾ.ಸುಧಾಕರ್ ಹೇಳಿದಿಷ್ಟು -

ಕರ್ನಾಟಕದಲ್ಲಿ ಸೋಂಕು ಪತ್ತೆ ಆಗಿಲ್ಲ
''ಚೀನಾದ ನಗರದಿಂದ ಕೊರೊನಾ ವೈರಸ್ ಆರಂಭ ಆಯ್ತು. ಮೊದಲು 59 ಸೋಂಕು ಪತ್ತೆಯಾಗಿ ಒಂದು ಸಾವಿನ ಸುದ್ದಿಯಾಗಿತ್ತು. ಈಗ ಭಾರತದಲ್ಲಿ ಮೂವತ್ತು ಸೋಂಕು ಪ್ರಕರಣಗಳು ಪತ್ತೆ ಆಗಿವೆ. ಕೇರಳದಲ್ಲಿ ಮೂರು, ದೆಹಲಿಯಲ್ಲಿ ಒಂದು, ಹೈದರಾಬಾದ್ ನಲ್ಲಿ ಒಂದು, ಇಟಲಿ ಮೂಲದವರಿಗೆ ಸೋಂಕು ತಗುಲಿದೆ.
ಕರ್ನಾಟಕದಲ್ಲಿ ಸೋಂಕು ಪತ್ತೆ ಆಗಿಲ್ಲ'' ಎಂದು ಡಾ.ಸುಧಾಕರ್ ಹೇಳಿದರು.
ಕರ್ನಾಟಕದಲ್ಲಿ ಕೊರೊನಾ ಇಲ್ಲ
''ಇಲ್ಲಿಯವರೆಗೂ ಕರ್ನಾಟಕದಲ್ಲಿ 87066 ಪ್ರಯಾಣಿಕರನ್ನು ತಪಾಸಣೆ ಮಾಡಿದ್ದೇವೆ. ಒಬ್ಬ ವ್ಯಕ್ತಿ ಮುಂಬೈಯಿಂದ ಬೆಂಗಳೂರು ಬಂದು, ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದಾನೆ. ಅವರು ಹೈದರಾಬಾದ್ ತಲುಪಿದ ಬಳಿಕ ಸೋಂಕು ಪತ್ತೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ'' ಎಂದಿದ್ದಾರೆ ಡಾ.ಸುಧಾಕರ್.

ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ
''ವಿವಿಧ 50 ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಬೆಡ್ ಗಳ ವ್ಯವಸ್ಥೆ, ಅಗತ್ಯ ಮೆಡಿಸಿನ್ ಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯರಿಗೂ ಕೊರೊನಾ ಚಿಕಿತ್ಸೆ ಬಗ್ಗೆ ತರಬೇತಿ ಕೊಡುತ್ತಿದ್ದೇವೆ. 104 ಆರೋಗ್ಯ ಸಹಾಯವಾಣಿ, ಸೋಷಿಯಲ್ ಮಾಧ್ಯಮ, ಮೆಟ್ರೋ, ರೈಲು, ಬಸ್ ಗಳ ಮೂಲಕ ಕೊರೊನಾ ಬಗ್ಗೆ ಜಾಗೃತಿ ಕೆಲಸ ನಡೆಯುತ್ತಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರದಿಂದ ಕೈಗೊಳ್ಳಲಾಗಿದೆ'' - ಡಾ.ಸುಧಾಕರ್

ಕೊರೊನಾ ತಪಾಸಣೆ ಕೇಂದ್ರ
''ಕೊರೊನಾ ತಪಾಸಣೆ ಕೇಂದ್ರಗಳು ಎರಡೇ ಇವೆ. ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ವ್ಯವಸ್ಥೆ ಇದೆ. ಮಂಗಳೂರು ಸೇರಿ ಕಡಲ ಕಿನಾರೆ ಜಿಲ್ಲೆಗಳಲ್ಲೂ ತಪಾಸಣೆ ಕೇಂದ್ರಗಳನ್ನು ಮಾಡಿ'' ಎಂದು ಶಾಸಕ ಡಾ.ಯತೀಂದ್ರ ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಡಾ.ಸುಧಾಕರ್, ''ಹಾಸನದಲ್ಲಿ, ಮೈಸೂರು, ಶಿವಮೊಗ್ಗ, ಬೆಳಗಾವಿ, ಮಂಗಳೂರು, ಬಳ್ಳಾರಿಯಲ್ಲಿ ವಲಯವಾರು ಟೆಸ್ಟ್ ಮಾಡಲು ಲ್ಯಾಬ್ ಮಾಡ್ತೇವೆ'' ಎಂದರು.

ಎಲ್ಲರೂ ಮಾಸ್ಕ್ ಧರಿಸಬೇಡಿ
''ರೋಗದ ಲಕ್ಷಣ ಇದ್ದವರು ಮಾತ್ರ ಮಾಸ್ಕ್ ಧರಿಸಿದ್ರೆ ಸಾಕು. ಎಲ್ಲರೂ ಮಾಸ್ಕ್ ಧರಿಸುವುದು ಬೇಡ. ಹ್ಯಾಂಡ್ ಶೇಕ್ ಮಾಡೋದು ಬೇಡ. ತುಂಬಾ ಜನ ಒಟ್ಟಿಗೆ ನಿಂತು ಮಾತಾಡೋದು ಬೇಡ. ಕೊರೊನಾ ಬಗ್ಗೆ ಯಾರೂ ಆತಂಕ ಪಡೋದು ಬೇಡ'' ಎಂದು ಡಾ.ಸುಧಾಕರ್ ಹೇಳಿದ್ದಾರೆ.












Click it and Unblock the Notifications