ಕೊರೊನಾ ಭೀತಿ; ನಾಗರಹೊಳೆಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ
ಬೆಂಗಳೂರು, ಮಾರ್ಚ್ 16 : ಕೊರೊನಾ ಭೀತಿ ಹಿನ್ನಲೆಯಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ರಾಜ್ಯದ 9 ಮೃಗಾಲಯಗಳನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದರು.
ನಾಗರಹೊಳೆ ಅಭಯಾರಣ್ಯಕ್ಕೆ ಪ್ರವಾಸಿಗರು ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಭಯಾರಣ್ಯದ ವ್ಯಾಪ್ತಿಯಲ್ಲಿನ ವಸತಿ ಗೃಹಗಳಲ್ಲಿಯೂ ರೂಂ ಬುಕ್ಕಿಂಗ್ ನೀಡದಂತೆ ಅರಣ್ಯ ಇಲಾಖೆ ನಿರ್ದೇಶನ ನೀಡಿದೆ. ಈ ವಾರ ಪೂರ್ತಿ ಅಭಯಾರಣ್ಯಕ್ಕೆ ಭೇಟಿ ನೀಡುವಂತಿಲ್ಲ.
ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ಬರುವ 9 ಮೃಗಾಲಯಗಳನ್ನು ಮಾರ್ಚ್ 14ರಿಂದ ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ. ಈಗ ನಾಗರಹೊಳೆಯೂ ಬಂದ್ ಆಗಿದೆ.

ಕರ್ನಾಟಕ ಸರ್ಕಾರವೇ ಕೊರೊನಾ ಹಬ್ಬುವ ಭೀತಿ ಹಿನ್ನಲೆಯಲ್ಲಿ ಮಾಲ್, ಚಿತ್ರಮಂದಿರ, ಪಬ್, ನೈಟ್ ಕ್ಲಬ್ ಬಂದ್ ಮಾಡಲು ಆದೇಶ ನೀಡಿದೆ. ಮದುವೆ, ಜಾತ್ರೆ, ನೂರಾರು ಜನರು ಸೇರುವ ಸಭೆ, ಸಮಾರಂಭ, ಸಮಾವೇಶ ನಡೆಸದಂತೆ ಆದೇಶ ನೀಡಿದೆ.
ಕರ್ನಾಟಕದಲ್ಲಿ ಕೊರೊನಾಕ್ಕೆ ಕಲಬುರಗಿಯ ವೃದ್ಧನೊಬ್ಬ ಬಲಿಯಾಗಿದ್ದ. ವೃದ್ಧನ ಕುಟುಂಬಸ್ಥರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಜನರು ಸರ್ಕಾರದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ.
ಬಂದ್ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಪ್ರತಿದಿನ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ವ್ಯಾಪಾರ ವಹಿವಾಟು ಕುಸಿದಿದ್ದು, ಸಾರಿಗೆ ಕ್ಷೇತ್ರಕ್ಕೆ ಅಪಾರವಾದ ನಷ್ಟವಾಗುತ್ತಿದೆ. ಶನಿವಾರದ ತನಕ ಅಘೋಷಿತ ಬಂದ್ ವಾತಾವರಣ ಮುಂದುವರೆಯಲಿದೆ.












Click it and Unblock the Notifications