ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿರುವುದೇಕೆ? ನಾಯಕರು ಎಡವುತ್ತಿರುವುದೆಲ್ಲಿ?
ಬೆಂಗಳೂರು, ಏಪ್ರಿಲ್ 21: ಸುಮಾರು ಎಪ್ಪತ್ತು ವರ್ಷಗಳ ಕಾಲ ದೇಶವನ್ನು ಆಳಿದ ರಾಷ್ಟ್ರೀಯ ಪಕ್ಷ ಇವತ್ತು ಪಕ್ಷ ಸಂಘಟನೆ ವಿಚಾರದಲ್ಲಿ ವಿಫಲತೆ ಹೊಂದಿ ಚುನಾವಣೆಗಳಲ್ಲಿ ಸೋಲನ್ನು ಅನುಭವಿಸುತ್ತಾ ಸಂಕಷ್ಟದಲ್ಲಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷದ ತುಂಬಾ ಹಿರಿಯ ನಾಯಕರು ತುಂಬಿದ್ದರೂ ಪಕ್ಷ ಸಂಘಟಿಸಿ ತಾವು ಗೆಲ್ಲುವುದಲ್ಲದೆ, ತಮ್ಮ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ನಾಯಕರನ್ನು ಗೆಲ್ಲಿಸಿಕೊಂಡು ಬರುವ ಶಕ್ತಿಯಿರುವ ನಾಯಕರ ಕೊರತೆ ಎದ್ದು ಕಾಣಿಸುತ್ತಿದೆ. ಇಲ್ಲಿ ನಾಯಕರೆನಿಸಿಕೊಂಡವರಿಗೆ ಬೇರೆಯವರನ್ನು ಗೆಲ್ಲಿಸಿಕೊಂಡು ಬರುವುದಿರಲಿ, ತಾವು ಗೆದ್ದು ಬರುವುದೇ ಪ್ರಯಾಸ ಎನ್ನುವಂತಾಗಿದೆ.
ಇವತ್ತು ಕಾಂಗ್ರೆಸ್ನಲ್ಲಿ ಸ್ಟಾರ್ ಪ್ರಚಾರಕ ನಾಯಕರ ಕೊರತೆಯಿದೆ. ರಾಷ್ಟ್ರಮಟ್ಟದಲ್ಲಿ ರಾಜಕೀಯ ಮಾಡಿಕೊಂಡು ಬಂದ ನಾಯಕರು ರಾಜ್ಯಮಟ್ಟದಲ್ಲಿ ಸೋಲುತ್ತಾರೆ ಎನ್ನುವುದಾದರೆ ಅವರ ವರ್ಚಸ್ಸಿಗೇನು ಬೆಲೆ ಬಂತು? ಇದೆಲ್ಲದರ ನಡುವೆ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಆಡಳಿತದಲ್ಲಿ ಆಗಿರುವ ವಿಫಲತೆ, ದೇಶಕ್ಕೆ ಆಗಿರುವ ಕೆಲವೊಂದು ಅನ್ಯಾಯಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ, ಕಾಂಗ್ರೆಸ್ ನ್ನು ಖಳನಾಯಕನನ್ನಾಗಿ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್ ಸಾಮಾಜಿಕ ಜಾಲವನ್ನು ಬಳಸಿಕೊಳ್ಳುವ ಮುನ್ನವೇ ಅದನ್ನು ಪ್ರಭಾವಶಾಲಿಯಾಗಿ ಮಾಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಕಾಂಗ್ರೆಸ್ ಇವತ್ತು ಏನೇ ಹೇಳಿದರೂ ಅದಕ್ಕೆ ಟಕ್ಕರ್ ಕೊಡಲು ಬಿಜೆಪಿ ನಾಯಕರು ಸದಾ ಸಿದ್ಧತೆ ನಡೆಸಿರುತ್ತಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಗಂಭೀರ ವಿಚಾರವಾಗಿ ಜನರನ್ನು ತಲುಪುವ ಮುನ್ನವೇ ಅದನ್ನು ಟ್ರೋಲ್ ಮಾಡಿ ಜನ ಅದನ್ನು ಗಂಭೀರವಾಗಿ ಪರಿಗಣಿಸದಂತೆ ಮಾಡುವಲ್ಲಿ ಬಿಜೆಪಿ ಪಡೆ ಸದಾ ತಯಾರಾಗಿರುತ್ತದೆ. ಕಾಂಗ್ರೆಸ್ ಸತತ ಸೋಲು ಕಾಣುತ್ತಿರುವುದಕ್ಕೆ ಕಾರ್ಯಕರ್ತರ ಪಡೆಯಿಲ್ಲದರಿರುವುದೇ ಕಾರಣ ಒಂದು ಕಡೆಯಾದರೆ, ತಮ್ಮ ವಿರುದ್ಧವೇ ಹುಟ್ಟಿಕೊಂಡಂತಹ ಪ್ರಾದೇಶಿಕ ಪಕ್ಷಗಳೊಂದಿಗೆ ಮೇಲ್ಮಟ್ಟದಲ್ಲಿ ಮೈತ್ರಿ ಮಾಡಿಕೊಂಡು ತಳಮಟ್ಟದಲ್ಲಿ ಕಾರ್ಯಕರ್ತರು ವಿರೋಧಿಗಳಾಗಿಯೇ ಉಳಿಯುವಂತಾಗಿದೆ.
ಪಕ್ಷದ ನೇತೃತ್ವ ವಹಿಸುವ ಧೈರ್ಯ ಮಾಡುತ್ತಿಲ್ಲ
ತಳಮಟ್ಟದಲ್ಲಿ ಕೆಲಸ ಮಾಡುವ ನಿಷ್ಠಾವಂತ ಕಾರ್ಯಕರ್ತರು ಇದೀಗ ಬೇರೆ, ಬೇರೆ ಪಕ್ಷಗಳಲ್ಲಿ ಹಂಚಿಹೋಗಿರುವುದು, ಕಾಂಗ್ರೆಸ್ ನಾಯಕರ ಕೆಲವೊಂದು ನಿಲುವುಗಳು ಕಾರ್ಯಕರ್ತರಲ್ಲಿ ನಿರಾಸಕ್ತಿ ತಂದಿದ್ದು, ಇದು ಪಕ್ಷದ ಬೆಳವಣಿಗೆಗೆ ಅಡ್ಡಗಾಲಾಗುತ್ತಿದೆ. ಕೆಲವು ನಾಯಕರು ಕೇವಲ ಹೇಳಿಕೆ ನೀಡಲಷ್ಟೆ ಸೀಮಿತರಾಗುತ್ತಿದ್ದಾರೆ. ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಮುನ್ನಡೆಸಲು, ಇಡೀ ದೇಶ ಸುತ್ತಿ ಪಕ್ಷದ ಸಂಘಟನೆ ಮಾಡಲು ಅವರು ತಯಾರಿಲ್ಲ.

ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡರೂ ಅವರ ಆಡಳಿತಾವಧಿಯಲ್ಲಿ ಹೇಳಿಕೊಳ್ಳುವ ಸಾಧನೆಯಾಗಿಲ್ಲ. ವಯಸ್ಸಿನ ಸಮಸ್ಯೆಗಳು ಅವರ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ. ಇಡೀ ಪಕ್ಷದ ನೇತೃತ್ವ ವಹಿಸಿ ಸೋಲು ಗೆಲುವು ಎಲ್ಲದರ ಹೊಣೆ ಹೊರುತ್ತೇನೆ ಎಂಬ ಧೈರ್ಯವನ್ನು ರಾಹುಲ್ ಗಾಂಧಿ ತೋರುತ್ತಿಲ್ಲ. 2019ಕ್ಕೆ ಹೋಲಿಸಿದರೆ 2024ರಲ್ಲಿ ಕಾಂಗ್ರೆಸ್ ಗೆ ಅಧಿಕ ಸ್ಥಾನಗಳು ಬಂದರೂ ಎಪ್ಪತ್ತು ವರ್ಷ ದೇಶವನ್ನಾಳಿದ ರಾಷ್ಟ್ರೀಯ ಪಕ್ಷ ನೂರರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಚುನಾವಣೆ ನಂತರ ಮೌನವಾದ ಇಂಡಿಕೂಟ
ಹಾಗೆಯೇ ಅದಾದ ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಅವರಿಗೆ ಮುಜುಗರ ತಂದಿದೆ. ಈ ಸೋಲಿಗೆ ಆಯಾಯ ರಾಜ್ಯದ ನಾಯಕರನ್ನು ಹೊಣೆ ಮಾಡಿದನ್ನು ಬಿಟ್ಟರೆ ವಿನಃ ರಾಷ್ಟ್ರಮಟ್ಟದ ನಾಯಕರು ಯಾರೂ ಸೋಲಿನ ಹೊಣೆ ಹೊತ್ತುಕೊಳ್ಳಲಿಲ್ಲ. ಜತೆಗೆ ಸೋಲನ್ನು ಮತಯಂತ್ರದ ಮೇಲೆ ಹಾಕಿ ಕೈತೊಳೆದುಕೊಂಡು ಬಿಟ್ಟರು. ಇವತ್ತಿಗೂ ಕಾಂಗ್ರೆಸ್ ಮತಯಂತ್ರದ ಮೇಲೆ ರಾಷ್ಟ್ರಮಟ್ಟದಲ್ಲಿ ಅನುಮಾನ ವ್ಯಕ್ತಪಡಿಸುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಹಿರಿಯ ನಾಯಕರೆಲ್ಲರೂ ತಮ್ಮ, ತಮ್ಮ ಕ್ಷೇತ್ರಕ್ಕೆ ಹೋಗಿ ಒಂದಷ್ಟು ಸಮಯ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಕಾರ್ಯಕರ್ತರನ್ನು ಒಟ್ಟಾಗಿ ಸೇರಿಸಿ ಅವರ ಕುಂದು ಕೊರತೆಗಳನ್ನು ಆಲಿಸಿ ಅದಕ್ಕೆ ಪರಿಹಾರ ರೂಪಿಸುವ ಕೆಲಸ ಮಾಡಿ ತಳಮಟ್ಟದಿಂದಲೇ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗುತ್ತದೆ. ಆದರೆ ಆ ಕೆಲಸ ಆದಂತೆ ಕಾಣಿಸುತ್ತಿಲ್ಲ.

ಇನ್ನು 2024ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಇಂಡಿಕೂಟದ ಸಾರಥ್ಯ ವಹಿಸಿದ್ದ ಕಾಂಗ್ರೆಸ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಸಭೆ ಕರೆದು ಮುಂದಿನ ತೀರ್ಮಾನಗಳ ಬಗ್ಗೆ ಚರ್ಚೆ ನಡೆಸಿಲ್ಲ. ಈಗಾಗಲೇ ಇಂಡಿಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ನಿಂದ ಅಂತರ ಕಾಪಾಡಲು ಆರಂಭಿಸಿವೆ. ಮುಂಬರುವ ವಿಧಾನಸಭಾ ಚುನಾವಣೆಗೆ ಅವು ಸ್ವಂತ ಬಲದಲ್ಲಿ ಗೆಲುವು ಕಾಣುವ ಪ್ರಯತ್ನದಲ್ಲಿವೆ. ಹೀಗಾಗಿ ಅವು ಕಾಂಗ್ರೆಸ್ ಜತೆಗೆ ಚುನಾವಣೆಗೆ ಹೋಗಲು ತಯಾರಿದ್ದಂತೆ ಕಾಣಿಸುತ್ತಿಲ್ಲ.
ಹಿರಿಯರು ಕಿರಿಯರಿಗೆ ಅವಕಾಶ ಕೊಡ್ತಾರಾ?
ಇಂಡಿ ಒಕ್ಕೂಟವನ್ನು ಕಟ್ಟಿಕೊಂಡು ಲೋಕಸಭಾ ಚುನಾವಣೆಗಳನ್ನು ಎದುರಿಸಿದಷ್ಟು ಸುಲಭ ಮುಂದೆ ಬರಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯಿಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹೀಗಾಗಿಯೇ ನಾಯಕರಿಗೆ ಆತಂಕ ಶುರುವಾಗಿದೆ. ಚುನಾವಣೆ ಎನ್ನುವುದು ಬರೀ ಭಾಷಣವಲ್ಲ ಅದರಾಚೆಗೆ ಬಹುದೊಡ್ಡ ಶ್ರಮವಿದೆ. ಪಕ್ಷದ ಕಾರ್ಯಕರ್ತರ ಪಡೆಯನ್ನು ಬೆಳೆಸುವುದು ಸುಲಭವೇನಲ್ಲ. ಆ ಕೆಲಸವನ್ನು ಕೇಂದ್ರದ ಕಾಂಗ್ರೆಸ್ ನಾಯಕರು ಮಾಡಲಿಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಇಲ್ಲಿ ಕಾರ್ಯಕರ್ತರು ಮತ್ತು ನಾಯಕರ ದೊಡ್ಡದೊಂದು ಪಡೆಯಿದೆ. ಆದರೆ ಬೇರೆ ರಾಜ್ಯಗಳಲ್ಲಿ ಅಂತಹ ಯಾವ ವಾತಾವರಣವೂ ಇಲ್ಲದಾಗಿದೆ.
ಟೀಕೆ ಮಾಡುತ್ತಾ, ಕೇವಲ ವಿರೋಧಿಸ ಬೇಕೆನ್ನುವ ಕಾರಣಕ್ಕೆ ವಿರೋಧ ಮಾಡುತ್ತಿದ್ದರೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಮಾಡುವ ಟೀಕೆಗಳು ಸತ್ಯಕ್ಕೆ ಹತ್ತಿರವಾಗಿರಬೇಕು, ಅವು ತೂಕ ಹೊಂದಿರಬೇಕು. ಅದು ಬಿಟ್ಟು ಏನೇನೋ ಹೇಳಿ ಜನರ ಮುಂದೆ ನಗೆಪಾಟಲಿಗೀಡಾಗುವುದು ಎಷ್ಟು ಸರಿ? ಇದೆಲ್ಲದರ ನಡುವೆ ಹಿರಿಯ ನಾಯಕರು ತಮ್ಮ ಕುರ್ಚಿಗೆ ಅಂಟಿಕೊಂಡು ಕೂರುವ ಬದಲಿಗೆ ಅದನ್ನು ಯುವ ಪೀಳಿಗೆಗೆ ಬಿಟ್ಟುಕೊಟ್ಟು ಅವರಿಗ ಸಲಹೆ ಸೂಚನೆಗಳನ್ನು ನೀಡುತ್ತಾ ಯುವ ನಾಯಕರನ್ನು ಬೆಳೆಸಿ, ಪಕ್ಷ ಸಂಘಟನೆಯ ಜವಬ್ದಾರಿ ಅವರಿಗೆ ನೀಡಿದರೆ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಭವಿಷ್ಯದಲ್ಲಿ ಸಂಕಷ್ಟ ತಪ್ಪಿದಲ್ಲ.












Click it and Unblock the Notifications