ಸಂಪುಟ ವಿಸ್ತರಣೆ : ಅಸಮಾಧಾನ ಬಗೆಹರಿಸಲು 3+3+2 ಸೂತ್ರ!
ಬೆಂಗಳೂರು, ಜೂನ್ 13 : ಸಚಿವ ಸಂಪುಟ ರಚನೆ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ವಂಚಿತರಾದ ಹಲವು ಶಾಸಕರು ಪಕ್ಷದ ನಾಯಕರ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿನ ಅಸಮಾಧಾನ ಶಮನಗೊಳಿಸಲು 3+3+2 ಸೂತ್ರವನ್ನು ಮುಂದಿಡಲಾಗಿದೆ.
ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ನಿವಾಸದಲ್ಲಿ ಮಂಗಳವಾರ ಸಭೆ ನಡೆಸಿದರು. ಸಭೆಯಲ್ಲಿ 3+3+2 ಸೂತ್ರವನ್ನು ಪಕ್ಷದ ಹೈಕಮಾಂಡ್ ಮುಂದಿಡಲಾಗಿದೆ.
ಸಂಪುಟ ರಚನೆ ಮಾಡುವಾಗ ಪಾದೇಶಿಕ, ಜಾತಿ, ಸಮುದಾಯದ ಮಾನದಂಡಗಳನ್ನು ಪರಿಗಣಿಸಿಲ್ಲ. ಇವುಗಳನ್ನು ಸರಿಪಡಿಸದಿದ್ದರೆ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟವಾಗಲಿದೆ ಎಂಬುದು ಅತೃಪ್ತ ಶಾಸಕರು ವಾದವಾಗಿದೆ.

3+3+2 ಸೂತ್ರವೇನು? : ಈ ಸೂತ್ರದ ಅನ್ವಯ ಮೂರು ಸಚಿವ ಸ್ಥಾನ + ಮೂರು ನಿಗಮ ಮಂಡಳಿ ಸ್ಥಾನ + 2 ನಿಗಮ ಮಂಡಳಿ ಸ್ಥಾನಗಳನ್ನು ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ನೀಡಿ ಎಂದು ಬೇಡಿಕೆ ಮುಂದಿಡಲಾಗಿದೆ.
ಲಂಬಾಣಿ ಜನಾಂಗದ ಒಬ್ಬ ಶಾಸಕರಿಗೆ ಸಚಿವ ಸ್ಥಾನ, ಮೂರು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ, ಇಬ್ಬರು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ. ಇದಕ್ಕೆ ಪಕ್ಷ ಒಪ್ಪಲಿದೆಯೇ? ಕಾದು ನೋಡಬೇಕು.
ಎಚ್.ಕೆ.ಪಾಟೀಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಮೇಶ್ ಜಾಧವ್, ಎಸ್.ಎನ್.ಸುಬ್ಬಾರೆಡ್ಡಿ, ಈಶ್ವರ ಖಂಡ್ರೆ, ರಹೀಂಖಾನ್, ಶರಣ ಬಸಪ್ಪ ದರ್ಶನಾಪುರ ಸೇರಿದಂತೆ ಹಲವು ಶಾಸಕರು ಪಾಲ್ಗೊಂಡಿದ್ದರು.
ಅಮರೇಗೌಡ ಬಯ್ಯಾಪುರ, ಪರಮೇಶ್ವರ ನಾಯಕ್, ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ಮುಂತಾದ ಶಾಸಕರ ಬೆಂಬಲ ಸಿಗುವ ನಿರೀಕ್ಷೆಯಲ್ಲಿ ಅತೃಪ್ತ ಶಾಸಕರು ಇದ್ದಾರೆ.











Click it and Unblock the Notifications