ರಮೇಶ್ ಜಾರಕಿಹೊಳಿ, ಆರ್.ಶಂಕರ್ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 22: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅರಣ್ಯ ಖಾತೆ ಸಚಿವ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರಣ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಪುಟದಿಂದ ಇಬ್ಬರು ಸಚಿವರನ್ನು ಕೈಬಿಟ್ಟಿದ್ದಕ್ಕೆ ಕಾರಣ ನೀಡಿದರು. ಅಲ್ಲದೆ ಕೈಬಿಟ್ಟ ಕ್ರಮವನ್ನ ಸಮರ್ಥಿಸಿಕೊಂಡರು.
ಕಳೆದ ಮೂರು ತಿಂಗಳಿಂದ ರಮೇಶ್ ಜಾರಕಿಹೊಳಿ ಅವರು ಸಂಪುಟ ಸಭೆಗಳಿಗೆ ಹಾಗೂ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ , ಅಲ್ಲದೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಹ ನೆನಗುದಿಗೆ ಬಿದ್ದಿದ್ದವು. ಈ ಅಶಿಸ್ತಿನ ನಡೆಯಿಂದಾಗಿಯೇ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆರ್.ಶಂಕರ್ ಸಂಪುಟದಿಂದ ವಜಾ
ಅರಣ್ಯ ಖಾತೆಯಿಂದ ಆರ್.ಶಂಕರ್ ಅವರನ್ನು ತೆಗೆದಿದ್ದಕ್ಕೂ ಇದೇ ಮಾದರಿಯ ಉತ್ತರ ನೀಡಿದ ದಿನೇಶ್, ಇಲಾಖೆಯ ಕೆಲಸಗಳು ತೃಪ್ತಿ ನೀಡಿಲ್ಲ ಹಾಗಾಗಿ ಅವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ ಎಂದರು.

ಕಾಂಗ್ರೆಸ್ಗೆ ಬಲ ಬಂದಿದೆ
ಈ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ಗೆ ಹೆಚ್ಚಿನ ಬಲ ಬಂದಿದೆ. ಎಂಟು ಶಾಸಕರು, 18 ನಿಗಮ ಮಂಡಳಿ ಅಧ್ಯಕ್ಷರುಗಳು, 7 ಸಂಸದೀಯ ಕಾರ್ಯದರ್ಶಿಗಳು, ಒಬ್ಬರು ಯೋಜನಾ ಆಯೋಗದ ಉಪಾಧ್ಯಕ್ಷರು, ದೆಹಲಿಯ ವಿಶೇಷ ಪ್ರತಿನಿಧಿ ಒಬ್ಬರು, ರಾಜಕೀಯ ಕಾರ್ಯದರ್ಶಿ ಒಬ್ಬರು, ಒಟ್ಟು 28 ಕಾಂಗ್ರೆಸ್ ಶಾಸಕರಿಗೆ ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದೇವೆ ಎಂದು ಅವರು ಹೇಳಿದರು.

ಎಲ್ಲ ಸಮಸ್ಯೆ ಎದುರಿಸುತ್ತೇವೆ
ಸಂಪುಟ ವಿಸ್ತರಣೆ ಬಳಿಕ ಉದ್ಭವವಾಗುವ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ಎದುರಿಸಲು ಕಾಂಗ್ರೆಸ್ ಸಶಕ್ತವಾಗಿದೆ. ಸಂಪುಟ ವಿಸ್ತರಣೆ ಸಮಯದಲ್ಲಿ ಅಸಮಾಧಾನಗಳು ಸಾಮಾನ್ಯ ಅದನ್ನು ನಾವು ಶಮನ ಮಾಡುತ್ತೇವೆ ಎಂದು ಅವರು ಹೇಳಿದರು.

ಅಶಿಸ್ತನ್ನು ಕಾಂಗ್ರೆಸ್ ಸಹಿಸದು
ರಮೇಶ್ ಜಾರಕಿಹೊಳಿ, ಆರ್.ಶಂಕರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು, ಉಳಿದ ಶಾಸಕರಿಗೆ ಸಚಿವರಿಗೆ ಎಚ್ಚರಿಕೆ ಪಾಠವಾಗಿದೆ. ಅಶಿಸ್ತನ್ನು ಕಾಂಗ್ರೆಸ್ ಪಕ್ಷವು ಸಹಿಸುವುದಿಲ್ಲ ಎಂದು ಅವರು ಹೇಳಿದರು.












Click it and Unblock the Notifications