ಸತೀಶ್ ಜಾರಕಿಹೊಳಿ-ಶ್ರೀರಾಮುಲು ಗುಪ್ತ ಮಾತುಕತೆ, ಅನುಮಾನ ಉಲ್ಬಣ
ಬೆಳಗಾವಿ, ಡಿಸೆಂಬರ್ 10: ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಬೆಚ್ಚಿಬೀಳುವಂತಾ ಘಟನೆಯೊಂದು ಸುವರ್ಣಸೌಧದಲ್ಲಿ ನಡೆಯಿತು.
ಅತೃಪ್ತ ಶಾಸಕ ಸತೀಶ್ ಜಾರಕಿಹೊಳಿ ಅವರು ಬಿಜೆಪಿಯ ಶ್ರೀರಾಮುಲು ಅವರೊಂದಿಗೆ ಸುವರ್ಣಸೌಧದಲ್ಲಿ ಗುಪ್ತ ಮಾತುಕತೆ ನಡೆಸಿದರು. ಇದು ಕಾಂಗ್ರೆಸ್ ಮುಖಂಡರಲ್ಲಿ ಅನುಮಾನ ಮೂಡಿಸಿತು.
ಬೆಳಗಾವಿ ಅಧಿವೇಶನದ ಮೊದಲ ದಿನ ಅಗಲಿದ ಹಿರಿಯ ನಾಯಕರಿಗೆ ಗೌರವ ಸಲ್ಲಿಸಲಾಯಿತು. ಈ ಸಮಯದಲ್ಲಿ ಸದನದಿಂದ ಹೊರ ಬಂದ ಸತೀಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರು ಪರಸ್ಪರ ಗುಪ್ತವಾಗಿ ಮಾತುಕತೆ ನಡೆಸಿದರು.
ಇಬ್ಬರೂ ನಾಯಕರು ಸದನದ ಹೊರಗೆ ನಿಂತು ಮಾತುಕತೆ ಮಾಡುತ್ತಿದ್ದುದನ್ನು ಗಮನಿಸಿದ ಮಾಧ್ಯಮದವರು ಅವರ ಬಳಿ ಹೋಗಲು ಯತ್ನಿಸಿದರು. ಆದರೆ ಇದನ್ನು ಗಮನಿಸಿದ ನಾಯಕರು ಅಲ್ಲಿಂದ ಕೂಡಲೇ ಕಾಲ್ಕಿತ್ತರು.

ಅನುಮಾನ ಮೂಡಿಸಿದ ಭೇಟಿ
ಆಪರೇಷನ್ ಕಮಲದ ಭೀತಿ ಮೈತ್ರಿ ಸರ್ಕಾರವನ್ನು ಬಾಧಿಸುತ್ತಿರುವ ಸಮಯದಲ್ಲಿಯೇ ಸತೀಶ್ ಜಾರಕಿಹೊಳಿ, ಆಪರೇಷನ್ ಕಮಲದ ರುವಾರಿಯಲ್ಲೊಬ್ಬರಾಗಿರುವ ರಾಮುಲು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಅನುಮಾನ ಮೂಡಿಸಿದೆ.

'ಒಂದೇ ಸಮಯದಾಯದವರು'
ಅಧಿವೇಶನದ ಬಳಿಕ ಈ ಬಗ್ಗೆ ಮಾಧ್ಯಮಗಳು ಸತೀಶ್ ಜಾರಕಿಹೊಳಿ ಅವರನ್ನು ಪ್ರಶ್ನೆ ಮಾಡಿದಾಗ, 'ನಾವಿಬ್ಬರೂ ಒಂದೇ ಸಮುದಾಯದವರು, ಸಮುದಾಯದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದೆವು ಎಂದು ಉತ್ತರಿಸಿ ಜಾರಿಕೊಂಡರು'.

'ಭೇಟಿಗೆ ವಿಶೇಷ ಅರ್ಥ ಬೇಡ'
ಮತ್ತೆ-ಮತ್ತೆ ಇದೇ ವಿಷಯಗಳ ಬಗ್ಗೆ ಪ್ರಶ್ನೆ ಎದುರಾದಾಗ ಕೆರಳಿದ ಸತೀಶ್ ಜಾರಕಿಹೊಳಿ. ಸದನದಲ್ಲಿ ಎಲ್ಲಾ ಪಕ್ಷಗಳು ಶಾಸಕರು, ಮುಖಂಡರು ಸಿಗುತ್ತಾರೆ. ಎಲ್ಲರ ಜೊತೆ ಮಾತುಕತೆಗಳು ಆಗುತ್ತವೆ ಎಲ್ಲದಕ್ಕೂ ವಿಶೇಷ ಅರ್ಥ ಕಲ್ಪಿಸುವುದು ಸರಿ ಅಲ್ಲ ಎಂದು ಹೇಳಿದರು.

ಅಸಮಾಧಾನ ಹೊಂದಿರುವ ಸತೀಶ್
ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಸಿಗದೇ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿಷಯದಲ್ಲಿ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದಾರೆ. ಹಲವು ಬಾರಿ ನೇರವಾಗಿ ಪಕ್ಷದ ಮುಖಂಡರ ವಿರುದ್ಧ ಮತ್ತು ಮೈತ್ರಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಹಾಗಾಗಿ ಅವರು ಪಕ್ಷ ಬಿಡುತ್ತಾರೆಂಬ ಸುದ್ದಿ ಇದೆ. ಇದೇ ಸಮಯದಲ್ಲಿ ರಾಮುಲು ಅವರ ಜೊತೆ ಮಾತನಾಡಿರುವುದು ಅನುಮಾನ ಮೂಡಿಸಿದೆ.

ಪುಷ್ಠಿ ನೀಡಿದ ರಮೇಶ್ ಜಾರಕಿಹೊಳಿ ಹೇಳಿಕೆ
ಇದೇ ಸಮಯದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಸಹ ಅನುಮಾನ ಹೆಚ್ಚಾಗುವಂತೆ ಮಾಡಿದೆ. ಬಿಜೆಪಿಯ ಪ್ರತಿಭಟನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ. ಪ್ರತಿಭಟನೆ ಮಾಡುತ್ತಿರುವುದಕ್ಕೆ ನಾನು ಬಿಜೆಪಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ಇದು ಮಾಧ್ಯಮದವರಲ್ಲೂ ಗೊಂದಲ ಮೂಡಿಸಿದೆ.












Click it and Unblock the Notifications