ಮುಖ್ಯಮಂತ್ರಿಗಳೇ ದಯಮಾಡಿ ಶೌಚಾಲಯಭಾಗ್ಯ ಕಲ್ಪಿಸಿ!
ಬೆಂಗಳೂರು, ಜ. 31 : ಕೈ ಸರ್ಕಾರದ ಭಾಗ್ಯ' ಯೋಜನೆಗಳು ಪಕ್ಷಕ್ಕೆಷ್ಟು ಪ್ರಚಾರ ತಂದುಕೊಟ್ಟಿದೆಯೋ ಗೊತ್ತಿಲ್ಲ. ಆದ್ರೆ ಜನಮಾನಸದಲ್ಲಂತೂ ಭಾಗ್ಯ ಹೆಸರು ಸಖತ್ತಾಗೇ ಬೇರೂರಿದೆ. ಯಾಕಂದ್ರೆ ಪರಿಷತ್ ನಲ್ಲಿ ಸರ್ಕಾರದ ಭಾಗ್ಯದ ಯೋಜನೆ ಸರಣಿಗೆ ಹೊಸ ಕೊಂಡಿ ಸೇರಿಸಿಕೊಟ್ರು ವೀರಯ್ಯನವರು.
ಮೊನ್ನೆ ದಿನ ಕಾನೂನು ಸುವ್ಯವಸ್ಥೆ ಮೇಲೆ ಭಾಷಣ ಮಾಡ್ತಿದ್ದ ಸಂದರ್ಭದಲ್ಲಿ ಸದಾನಂದ ಗೌಡರು ಬದುಕೋ ಭಾಗ್ಯ ಕರುಣಿಸಿ ಅಂತ ಭಾಗ್ಯ ಯೋಜನೆಗೆ ಮತ್ತೊಂದು ಭಾಗ್ಯ ಜೋಡಿಸಿದ್ರೆ, ವೀರಯ್ಯನವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ನಮಗೆ 'ಶೌಚಾಲಯ ಭಾಗ್ಯ' ಕಲ್ಪಿಸಿ ಮುಖ್ಯಮಂತ್ರಿಗಳೇ ಅಂತ ತಮ್ಮ ಕಡೆಯಿಂದ ಮತ್ತೊಬ್ಬಳು ಭಾಗ್ಯಳನ್ನು ಸರ್ಕಾರದ ಅಂಗಳಕ್ಕೆ ಹರಿಬಿಟ್ರು.
ಇಷ್ಟೆಲ್ಲಾ ಆದ್ರೂ ಜನರ ಮನಸಲ್ಲಿ ಆಗೊಮ್ಮೆ ಈಗೊಮ್ಮೆ ಒಂದು ಪ್ರಶ್ನೆ ಆಗಾಗ ಕಾಡ್ತಾ ಇದೆ. ಸಿದ್ದರಾಮಯ್ಯ ಅವರು ಪ್ರತಿಯೊಂದು ಯೋಜನೆಗೆ ಹೆಸರಿಡುವ ಈ ಭಾಗ್ಯ ಯಾರು...? ಸಿಎಂಗೆ ಪರಿಚಯದವರಾ, ಅಥವಾ ಸಂಪುಟದ ಸದಸ್ಯರು ಯಾರಾದ್ರೂ ಕೊಟ್ಟ ಹೆಸರಾ..? ಒಂದೂ ಗೊತ್ತಾಗ್ತಾ ಇಲ್ಲ. [ಸದನದಲ್ಲಿ ಜಟಾಪಟಿ]

ಎಂತ ಸಭಾಪತಿಗಳೇ ಸಣ್ಣಮಕ್ಕಳ ಹಾಗೇ...! : ವಿಧಾನಪರಿಷತ್ ಕಲಾಪದ ಕಡೇ ದಿನ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ವಿರೋಧಪಕ್ಷ ನಾಯಕ ಸದಾನಂದಗೌಡರು ಮುಖ್ಯಮಂತ್ರಿಗಳ ಭಾಷಣದ ಕುರಿತು ಮಾತನಾಡ್ತಿದ್ರು. ಈ ವೇಳೆ ಅವರು ಸರ್ಕಾರದ ಮಂತ್ರಿಗಳು ಹಾಗೂ ಆಡಳಿತ ಪಕ್ಷ ಸದಸ್ಯರ ಗೈರು ಹಾಜರಿಯನ್ನು, ಕೋರಂ ಕೊರತೆಯನ್ನು ತೋರಿಸೋ ಕೆಲ್ಸ ಮಾಡ್ತಿದ್ರು.
ಇತ್ತ ಆಡಳಿತ ಪಕ್ಷದ ಸಚೇತಕ ಆರ್.ವಿ ವೆಂಕಟೇಶ್, ಸದ್ದಿಲ್ಲದೆ ಸದಾನಂದಗೌಡರು ನನ್ನ ಬುಡಕ್ಕೇ ಕೈ ಹಾಕಿಬಿಟ್ರಲ್ಲಾ ಅಂತ ಕುಂತಲ್ಲೇ ಅವರನ್ನ ಶಪಿಸುತ್ತಾ ತಮ್ಮವರ ಲೆಕ್ಕ ಕೊಡ್ತಾ ಮುಖ್ಯಮಂತ್ರಿಗಳಿಗೆ ಅಟೆಂಡೆನ್ಸ್ ತೋರಿಸಿ ತಾವು ಮಾಡ್ತಿರೋ ಕೆಲ್ಸನ ತೋರಿಸುತ್ತಿದ್ರು.
ಆದ್ರೆ ಈ ಹೊತ್ತಿಗೆ ಸರಿಯಾಗಿ ಸದಾನಂದಗೌಡರ ಹಿಂಭಾಗದ ಸೀಟಿನಲ್ಲಿ ಕೂತಿದ್ದ ಭಾರತಿ ಶೆಟ್ರು, ಸಭಾಪತಿಗಳೇ ಎಂತ ಅವರು ಸಣ್ಣಮಕ್ಕಳ ಹಾಗೇ ಮುಖ್ಯಮಂತ್ರಿಗಳಿಗೆ ಅಟೆಂಡೆನ್ಸ್ ಪುಸ್ತಕ ತೋರಿಸ್ತಿರೋದು ಅಂತ ತಮ್ಮದೇ ಶೈಲಿಯಲ್ಲಿ ದೂರಿದ್ರು. ಇತ್ತ ಪತ್ರಕರ್ತರ ಗ್ಯಾಲರಿಯಲ್ಲಿ ಇದಕ್ಕೆ ಪೂರಕವೆನ್ನುವಂತೆ ಇವರ್ಯಾಕೆ ಮೇಷ್ಟ್ರಿಗೆ ದೂರುಕೊಡೋ ಮಕ್ಕಳ ರೀತಿ ರಾಗ ಎಳಿತಿದ್ದಾರೆ ಅನ್ನೋ ಮಾತು ತೇಲಿಬಂತು. ಕಡೆಗೆ ಯಾರು ಯಾರಿಗೆ ಸಣ್ಣಮಕ್ಕಳಂತೆ ದೂರಿದ್ರು ಅನ್ನೋ ಪ್ರಶ್ನೆ ಅಲ್ಲಿದ್ದವರನ್ನು ಕಾಡೋಕೆ ಶುರು ಮಾಡ್ತು.












Click it and Unblock the Notifications