ಚಿಕ್ಕಮಗಳೂರು: ಪಿಎಸ್ಐ ಕಪಾಳಮೋಕ್ಷ ಪ್ರಕರಣದಲ್ಲಿ ಮರಳು ಮಾಫಿಯಾ ಕೈವಾಡ?
ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ಮೇಲಿನ ಹಲ್ಲೆ ಪ್ರಕರಣದ ಹಿಂದೆ ಅಕ್ರಮ ಮರಳು ಮಾಫಿಯದವರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಚಿಕ್ಕಮಗಳೂರು: ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ಮೇಲಿನ ಹಲ್ಲೆ ಪ್ರಕರಣದ ಹಿಂದೆ ಅಕ್ರಮ ಮರಳು ಮಾಫಿಯದವರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣ ವಿವರ
ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರು ಗ್ರಾಮೀಣ ಠಾಣಾಧಿಕಾರಿ ಗವಿರಾಜ್ ಇಲಾಖೆಯ ಕೆಲಸ ಮುಗಿಸಿಕೊಂಡು ಮೂಗ್ತಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದರು. ಚಿಕ್ಕಮಗಳೂರು ತಾಲೂಕಿನ ಹೊರ ವಲಯದಲ್ಲಿರುವ ಈ ಮೂಗ್ತಿಹಳ್ಳಿ ಬಳಿ ಬರುವಾಗ ಅವರ ಕಾರು ನಟರಾಜ್ ಎಂಬುವವರ ಕಾರಿಗೆ ಡಿಕ್ಕಿಯಾಗಿದೆ.[ಚಿಕ್ಕಮಗಳೂರು: ಗನ್ ತೋರಿಸಿದ ಪಿಎಸ್ಐಗೆ ಕಪಾಳಕ್ಕೆ ಬಾರಿಸಿದ ಜನ]
ಆಗ ಮುಂಭಾಗದಲ್ಲಿದ್ದ ಕಾರಿನ ಮಾಲೀಕ ನಟರಾಜ್ ಏಕಾಯೇಕಿ ಪಿಎಸ್ಐ ಗವಿರಾಜ್ ಮೇಲೆ ಹಲ್ಲೆ ಮಾಡಿ ಕಪಾಳಮೋಕ್ಷ ಮಾಡಿದ್ದಾರೆ. ತಕ್ಷಣ ಅಕ್ಕಪಕ್ಕದಲ್ಲಿದ್ದ ಗ್ರಾಮಸ್ಥರು ಏನು ನಡೆಯುತ್ತಿದೆ ಎಂದು ಹತ್ತಿರ ಬಂದಾಗ ಎಲ್ಲರೂ ಸೇರಿ ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ರಿವಾಲ್ವರ್ ತೋರಿಸಿದ್ದಕ್ಕೆ ಮುಗಿಬಿದ್ದ ಜನ
ಗವಿರಾಜ್ ತಾವು ಗ್ರಾಮೀಣ ಠಾಣೆ ಪಿಎಸ್ಐ ಎಂದು ಹೇಳಿದರೆ, ಸ್ಥಳೀಯರು ಮತ್ತೂ ಹೆಚ್ಚಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಜೇಬಿನಲ್ಲಿದ್ದಂತಹ ರಿವಾಲ್ವರ್ ಹೊರ ಬಿದ್ದಿದೆ. ತಕ್ಷಣ ಕೈಗೆ ಗನ್ ತೆಗೆದುಕೊಂಡು ತಮ್ಮ ಆತ್ಮ ರಕ್ಷಣೆಗಾಗಿ ಗವಿರಾಜ್ ಮುಂದಾಗಿದ್ದಾರೆ.
ಗವಿರಾಜ್ ಗನ್ ಹಿಡಿಯುತ್ತಿದ್ದಂತೆ ಸ್ಥಳೀಯರು ಮತ್ತಷ್ಟು ಹಲ್ಲೆಮಾಡಿ ಪಿಎಸ್ಐರನ್ನು ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಕೊನೆಗೆ ಪ್ರಕರಣವನ್ನು ಗವಿರಾಜ್ ಮೇಲಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳಕ್ಕೆ ಬಂದ ಪೊಲೀಸರಿಂದ ಇವರು ಗ್ರಾಮೀಣ ಠಾಣೆಯ ಪಿಎಸ್ಐ ಅಂತ ಗೊತ್ತಾಗಿದೆ.[ಚಿಕ್ಕಮಗಳೂರು:ಸ್ವಾಮೀಜಿಯನ್ನೂ ಬಿಡದ ಕಳ್ಳರು; ಕಾರು ಅಡ್ಡಗಟ್ಟಿ ದರೋಡೆ]
ರಸ್ತೆ ತಡೆದು ಪ್ರತಿಭಟನೆ
ಪಿಎಸ್ಐ ಗವಿರಾಜ್ ಗನ್ ತೆಗೆದು ತಮ್ಮ ಆತ್ಮರಕ್ಷಣೆಗೆ ಮುಂದಾಗಿದ್ದನ್ನೇ ತಪ್ಪು ತಿಳಿದ ಗ್ರಾಮಸ್ಥರು, 2 ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಣ್ಣಾಮಲೈ ಆಗಮಿಸಬೇಕು ಎಂದು ಆಗ್ರಹಿಸಿದರು. ಕೊನೆಗೂ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಗ್ರಾಮಸ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಂಡಾಮಂಡಲರಾದ ಅಣ್ಣಾಮಲೈ
ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮುಂದುವರಿಸಿದರು. ಆಗ ಕೆಂಡಾಮಂಡಲವಾದ ಅಣ್ಣಾಮಲೈ "ನಾನು ತಂದೆ ತಾಯಿಗೆ ಹುಟ್ಟಿರೋದು. ಧೈರ್ಯವಿದ್ದರೆ ರೋಡ್ ಬ್ಲಾಕ್ ಮಾಡಿ ನೋಡೋಣ?" ಎಂದು ಕಿರುಚಾಡಿದರು.
ಇದಕ್ಕೂ ಸ್ಥಳೀಯರು ಕೇಳದಿದ್ದಾಗ ಲಾಠಿ ರುಚಿ ತೋರಿಸಿ ಸ್ಥಳೀಯರನ್ನು ಒದ್ದು ಓಡಿಸಿದರು. ಪಿಎಸ್ಐ ಮೇಲೆ ಹಲ್ಲೆ ಮಾಡಿದ ಸುಮಾರು 7ಕ್ಕೂ ಹೆಚ್ಚು ಗ್ರಾಮಸ್ಥರನ್ನೂ ಅಣ್ಣಾಮಲೈ ಬಂಧಿಸಿದ್ದಾರೆ.
ಇನ್ನೂ ಕೆಲವರ ಬಂಧನ ಸಾಧ್ಯತೆ
ಕರ್ತವ್ಯ ನಿರತ ಗ್ರಾಮೀಣ ಠಾಣಾಧಿಕಾರಿಯ ಮೇಲೆ ಹಲ್ಲೆಗೆ ಸಂಬಮಧಿಸಿದಂತೆ ಇನ್ನೂ ಹಲವರನ್ನು ಅಣ್ಣಾಮಲೈ ಬಂಧಿಸುವ ಸಾಧ್ಯತೆ ಇದೆ. ವಿಡಿಯೋ ನೋಡಿ ಅಣ್ಣಾಮಲೈ ಹಲ್ಲೆ ನಡೆಸಿದವರನ್ನು ಬಂಧಿಸಲಿದ್ದಾರೆ. ಈಗಾಗಲೇ ಬಂಧಿತರ ವಿರುದ್ದ ಸೆಕ್ಷನ್ 326, 356, 504, 506 ಗಳ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಗವಿರಾಜ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬಳಿ ದೂರು ಸ್ವೀಕರಿಸಿ ಆರೋಪಿಗಳ ವಿರುದ್ದ ಕೊಲೆ ಬೆದರಿಕೆ ಕೇಸ್ ಹಾಕುವ ಸಾಧ್ಯತೆ ಇದೆ.
ಮರಳು ಮಾಫಿಯಾ ಕೈವಾಡ
ಇನ್ನು ಪಿಎಸ್ಐ ಮೇಲಿನ ಹಲ್ಲೆ ಹಿಂದೆ ಅಕ್ರಮ ಮರಳು ಮಾಫಿಯಾದ ಕೈವಾಡ ಇದೆ ಎನ್ನಲಾಗಿದೆ. ಈ ಮೊದಲು ಪಿಎಸ್ಐ ಚಿಕ್ಕಮಗಳೂರು ತಾಲೂಕಿನಲ್ಲಿ ಅಕ್ರಮ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಿದ್ದರು. ಇದನ್ನು ವಿರೋಧಿಸಿ ಮರಳು ದಂಧೆ ನಡೆಸುವವರು ಗಲಾಟೆ ಮಾಡಿದ್ದರು. ನಂತರ ಗವಿರಾಜ್ ರನ್ನು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಎತ್ತಂಗಡಿ ಮಾಡಿಸಲು ಸಂಚು ಕೂಡಾ ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.