ಮುಖ್ಯಮಂತ್ರಿ ಹುದ್ದೆ; ಸಿದ್ದರಾಮಯ್ಯ 5 ಬೇಡಿಕೆಗಳು
ಬೆಂಗಳೂರು, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸಿದೆ. ಈಗ ಸರ್ಕಾರ ರಚನೆ ಕಸರತ್ತು ಆರಂಭವಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆದಿದೆ.
ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಹೈಕಮಾಂಡ್ ನಾಯಕರು ತೀರ್ಮಾನ ಕೈಗೊಳ್ಳಬೇಕು ಎಂಬ ಒಂದು ಸಾಲಿನ ನಿರ್ಣಯ ಕೈಗೊಂಡಿದೆ. ಆದ್ದರಿಂದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಸರತ್ತು ದೆಹಲಿಗೆ ಹೋಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಬಂದಿದ್ದ ಸುಶೀಲ್ ಕುಮಾರ್ ಶಿಂಧೆ, ಜಿತೇಂದರ್ ಸಿಂಗ್, ದೀಪಕ್ ಬಾಬರಿಯಾ ಸೋಮವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಅವರು ಶಾಸಕಾಂಗ ಪಕ್ಷದ ಸಭೆಯ ತೀರ್ಮಾನ ತಿಳಿಸಲಿದ್ದಾರೆ.
ಸಿದ್ದರಾಮಯ್ಯ ಬೇಡಿಕೆಗಳು; ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಆಪ್ತ ಶಾಸಕರ ಸಭೆ ನಡೆಸಿದ್ದಾರೆ. ಅಲ್ಲದೇ ಪಕ್ಷದ ಹೈಕಮಾಂಡ್ ನಾಯಕರ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ 1.45ರ ವಿಮಾನದಲ್ಲಿ ಅವರು ದೆಹಲಿಗೆ ಹೊರಟಿದ್ದು, ಸಂಜೆಯ ವೇಳೆಗೆ ಮುಖ್ಯಮಂತ್ರಿ ಯಾರು? ಎಂಬುದು ತಿಳಿಯಲಿದೆ.
ಸಿದ್ದರಾಮಯ್ಯ ಇಟ್ಟಿರುವ ಬೇಡಿಕೆಗಳು
1. ಶಾಸಕಾಂಗ ಪಕ್ಷದ ನಾಯಕನನ್ನು ಶಾಸಕರೇ ಆಯ್ಕೆ ಮಾಡಬೇಕು; ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರೇ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡಬೇಕು ಎಂಬುದು ಮೊದಲ ಬೇಡಿಕೆಯಾಗಿದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಭಾನುವಾರ ಸಭೆ ನಡೆಸಿ ವೀಕ್ಷಕರು ಶಾಸಕರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದಾರೆ.
2. 5 ವರ್ಷದ ಪೂರ್ಣ ಅಧಿಕಾರ ನೀಡಬೇಕು; ಮುಖ್ಯಮಂತ್ರಿಯಾಗಿ ಆಯ್ಕೆಯಾದವರಿಗೆ ಪೂರ್ಣ 5 ವರ್ಷದ ಅಧಿಕಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ.
3. ಸಮೀಕ್ಷೆಯ ಅಭಿಪ್ರಾಯಕ್ಕೆ ಬೆಲೆ ನೀಡಬೇಕು; ನಾನು ಬೀದರ್ನಿಂದ ಚಾಮರಾಜನಗರದ ತನಕ ಜನಪ್ರಿಯ ನಾಯಕ. ಸಮೀಕ್ಷೆಗಳಲ್ಲಿ ನನ್ನ ಪರವಾಗಿಯೇ ಒಲವು ಹೆಚ್ಚಿದೆ. ಆದ್ದರಿಂದ ಅದಕ್ಕೆ ಬೆಲೆ ನೀಡಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂದು ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.
4. ಆಡಳಿತ ವಿರೋಧಿ ಅಲೆ; ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎಬ್ಬಿಸುವಲ್ಲಿ ನನ್ನ ಪಾತ್ರವೂ ಹೆಚ್ಚಿದೆ. ಇದರಿಂದಾಗಿಯೇ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರ ಪಡೆದಿದೆ. ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಇವುಗಳನ್ನು ಪರಿಗಣಿಸಬೇಕು ಎಂಬುದು ಮತ್ತೊಂದು ಬೇಡಿಕೆ.
5. ಹಿರಿತನ, ತ್ಯಾಗಕ್ಕೆ ಬೆಲೆ; ಹೈಕಮಾಂಡ್ ಸೂಚಿಸಿದಂತೆ ವರುಣದಲ್ಲಿ ಸ್ಪರ್ಧಿಸಿದ್ದೇನೆ. ನನ್ನ ಪುತ್ರ ಕ್ಷೇತ್ರ ತ್ಯಾಗ ಮಾಡಿದ್ದಾನೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಹಿರಿತನಕ್ಕೆ ಆದ್ಯತೆ ನೀಡಬೇಕು. ನಾನು ಸಿಎಂ ಆದರೆ 2024ರ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷಕ್ಕೆ ಲಾಭವಾಗಲಿದೆ ಎಂದು ಸಿದ್ದರಾಮಯ್ಯ ಹೈಕಮಾಂಡ್ ನಾಯಕರಿಗೆ ವಿವರಣೆ ನೀಡಿದ್ದಾರೆ.
ಮುಖ್ಯಮಂತ್ರಿ ಆಯ್ಕೆಗೆ ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರ ಸಿದ್ಧಪಡಿಸಿದೆ ಎಂಬ ಮಾಹಿತಿ ಇದೆ. ಮೊದಲ ಅವಧಿ 2 ವರ್ಷಗಳು, 2ನೇ ಅವಧಿ ಮೂರು ವರ್ಷಗಳು. ಆದರೆ ಈ ಸೂತ್ರಕ್ಕೆ ಇಬ್ಬರೂ ನಾಯಕರು ಒಪ್ಪಲಿದ್ದಾರೆಯೇ?. ಒಪ್ಪಿಗೆ ನೀಡಿದರೂ ಸಹ ಮೊದಲು ಯಾರು ಸಿಎಂ ಆಗುತ್ತಾರೆ? ಎಂಬುದು ಪ್ರಶ್ನೆಯಾಗಿದೆ.












Click it and Unblock the Notifications