ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Recommended Video
ಮಡಿಕೇರಿ, ಆಗಸ್ಟ್ 24 : ಕೊಡಗಿನ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸುವ ವೇಳೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ರೇಷ್ಮೆ ಖಾತೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಸಿಟ್ಟಾದ ಘಟನೆ ನಡೆಯಿತು.
ಕೊಡಗಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರು, ತಮ್ಮ ಕಾರ್ಯಕ್ರಮದ ಪಟ್ಟಿಯಲ್ಲಿ ಏರು ಪೇರಾಗಿದ್ದಕ್ಕೆ ಜಿಲ್ಲಾಧಿಕಾರಿಗಳ ಮೇಲೆ ಹಾಗೂ ಕೊಡಗಿನ ಉಸ್ತುವಾರಿ ಸಚಿವರ ಮೇಲೆ ಸಿಟ್ಟಾದರು. ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಮಾಧ್ಯಮಗಳ ಎದುರೇ ತರಾಟೆಗೆ ತೆಗೆದುಕೊಂಡರು.
ನಿಮಗೆ ಪ್ರೋಟೋಕಾಲ್ ಗೊತ್ತಿದೆಯೇ, ನನ್ನ ಮಿನಟ್-ಟು-ಮಿನಟ್ ಪ್ರೋಗ್ರಾಂ ಮಾಹಿತಿ ಇದೆಯೇ, ನಾನು ನನ್ನ ಮಿನಟ್-ಟು-ಮಿನಟ್ ಕಾರ್ಯಕ್ರಮವನ್ನೇ ಫಾಲೋ ಮಾಡುತ್ತೇನೆ ಎಂದು ಎಂದು ಸಾ.ರಾ.ಮಹೇಶ್ ಅವರಿಗೆ ಕೋಪದಿಂದ ಹೇಳಿದರು.
ನಿರ್ಮಲಾ ಸೀತಾರಾಮನ್ ಅವರು ಹಾಕಿಕೊಂಡಿದ್ದ ಕಾರ್ಯಕ್ರಮದ ಬದಲು ತಮ್ಮ ಕಾರ್ಯಕ್ರಮ ಪಟ್ಟಿಯಂತೆ ಸಾರಾ ಮಹೇಶ್ ಅವರು ಬೇರೆಡೆಗೆ ಕರೆದುಕೊಂಡು ಹೋಗಿದ್ದೇ ರಕ್ಷಣಾ ಸಚಿವೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಶ್ರೀವಿದ್ಯಾ ಮತ್ತು ಸಾರಾ ಮಹೇಶ್ ಅವರು ಎಷ್ಟೇ ಸಮಜಾಯಿಷಿ ನೀಡಲು ಯತ್ನಿಸಿದರೂ ಅವರ ಆಕ್ರೋಶ ತಗ್ಗಲಿಲ್ಲ.
ಪ್ರವಾಹ ಪೀಡಿತ ಸ್ಥಳಗಳಿಗೆ ಕರೆದುಕೊಂಡು ಹೋಗಲು ಇಚ್ಚಿಸಿದ್ದ ಮಹೇಶ್
ರಕ್ಷಣಾ ಸಚಿವರು ಪೂರ್ವ ನಿರ್ಧಾರಿತ ಪಟ್ಟಿಯಂತೆ ಒಂದು ಕಡೆಗೆ ಹೋಗಬೇಕಾಗಿತ್ತು. ಆದರೆ ಪ್ರವಾಹದಿಂದ ಹೆಚ್ಚು ಹಾನಿಯಾದ ಮತ್ತೊಂದು ಕಡೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಕರೆದುಕೊಂಡು ಹೋಗುವುದು ಸಚಿವ.ಸಾ.ರಾ.ಮಹೇಶ್ ಅವರ ಬಯಕೆಯಾಗಿತ್ತು. ಹಾಗಾಗಿ ಇಬ್ಬರ ನಡುವೆ ಅಭಿಪ್ರಾಯ ಭೇದದಿಂದಾಗಿ ವಾಗ್ವಾದ ನಡೆಯಿತು.
ಕೇಂದ್ರ ಸಚಿವೆ, ಉಸ್ತುವಾರಿ ಸಚಿವರನ್ನು ಹಿಂಬಾಲಿಸುವುದೇ
ಕೇಂದ್ರ ಸಚಿವೆಯಾದ ನಾನು ಉಸ್ತುವಾರಿ ಸಚಿವರನ್ನು ಹಿಂಬಾಲಿಸಬೇಕಾ ಎಂದು ಅವರು ಸಿಟ್ಟಿನಿಂದ ಕೇಳಿದರು. ಅಷ್ಟು ಹೊತ್ತು ಸಾವಧಾನವಾಗಿದ್ದ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಉದ್ದೇಶಿಸಿ, 'ಸರಿ, ಮೇಡಂ ಎಲ್ಲಿಗೆ ಹೋಗಲು ಡಿಸೈಡ್ ಮಾಡುತ್ತಾರೊ, ಅಲ್ಲಿಗೆ ಹೋಗಲಿ' ಎಂದರು.
'ನಾನು ಡಿಸೈಡ್ ಮಾಡಲ್ಲ, ನೀವು ಮಾಡಿ'
ಇದಕ್ಕೆ ಮತ್ತೆ ಕೆರಳಿದ ಸಚಿವೆ ನಿರ್ಮಲಾ ಸೀತಾರಾಮನ್, 'ನಾನು ಡಿಸೈಡ್ ಮಾಡುವುದಲ್ಲ, ಮೊದಲು ನೀವು ಡಿಸೈಡ್ ಮಾಡಿಕೊಳ್ಳಿ, ನಿಮ್ಮಿಬ್ಬರ ನಡುವಿನ ಗೊಂದಲವನ್ನು ಮೊದಲು ಪರಿಹರಿಸಿಕೊಳ್ಳಿ', 'ನನಗೆ ಕೆಲಸ ಎಷ್ಟು ಮುಖ್ಯವೋ ಪರಿವಾರವೂ ಅಷ್ಟೆ ಮುಖ್ಯ' ಎಂದು ಅವರು ಸಿಟ್ಟಿನಿಂದ ಹೇಳಿದರು.
ಸಚಿವೆಯನ್ನು ಎಚ್ಚಿರಿಸಿದ ಸಂಸದ ಪ್ರತಾಪ್ ಸಿಂಹ
ಈ ಮಧ್ಯೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬಂದು ತಾವು ಮಾತನಾಡುತ್ತಿರುವುದೆಲ್ಲಾ ಮೈಕ್ನಲ್ಲಿ ರೆಕಾರ್ಡ್ ಆಗುತ್ತಿದೆ ಎಂದು ಸೀತಾರಾಮನ್ ಅವರಿಗೆ ಎಚ್ಚರಿಸಿದರು. ಆದರೆ ಇದಕ್ಕೂ ಬಾಗದ ಅವರು, ರೆಕಾರ್ಡ್ ಆಗಲಿ ಬಿಡಿ ಪರ್ವಾಗಿಲ್ಲ ಎಂದು ಸಿಟ್ಟಿನಿಂದಲೇ ಮೈಕ್ ಅನ್ನು ಪಕ್ಕಕ್ಕೆ ತಳ್ಳಿದರು.
ಸಮಾಧಾನದಿಂದಲೇ ಮಾತನಾಡಿದ ಸಾ.ರಾ.ಮಹೇಶ್
ಇಡೀಯ ಘಟನೆಯಲ್ಲಿ ಸಾ.ರಾ.ಮಹೇಶ್ ಹಾಗೂ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಚಿವೆ ನಿರ್ಮಲಾ ಸೀತಾರಾಮನ್ಗೆ ಸಮಾಧಾನದಿಂದಲೇ ಪರಿಸ್ಥಿತಿ ವಿವರಿಸಲು ಪ್ರಯತ್ನ ಮಾಡುತ್ತಿದ್ದುದ್ದು ಕಂಡಿತು. ಆದರೆ ನಿರ್ಮಲಾ ಸೀತಾರಾಮನ್ ಅವರು ಸಿಟ್ಟಿನಿಂದ ಸಾ.ರಾ.ಮಹೇಶ್ ಹಾಗೂ ಜಿಲ್ಲಾಧಿಕಾರಿ ಮೇಲೆ ಹರಿಹಾಯ್ದರು. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರ ಮಧ್ಯೆ ಸಿಕ್ಕು ಜಿಲ್ಲಾಧಿಕಾರಿ ಶ್ರೀವಿದ್ಯಾ ಹೈರಾಣಾದರು.