ಕೇಂದ್ರ ಬಜೆಟ್ ಸಂಪೂರ್ಣ ತೃಪ್ತಿ ತಂದಿಲ್ಲ : ಆರ್.ವಿ.ದೇಶಪಾಂಡೆ
ಬೆಂಗಳೂರು, ಫೆಬ್ರವರಿ 02: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಮತ್ತು ನೀತಿ ಆಯೋಗದ ಸಭೆಯಲ್ಲಿ ತಾವು ಪ್ರಧಾನವಾಗಿ ಚರ್ಚಿಸಿದ್ದ ಬೆಂಗಳೂರು ಸಬ್ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ತನ್ನ ಬಜೆಟ್ನಲ್ಲಿ ಸ್ಪಂದಿಸಿರುವುದು ಸ್ವಾಗತಾರ್ಹ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಕೇಂದ್ರ ಸರಕಾರವು 2018-19ರ ಬಜೆಟ್ನಲ್ಲಿ 160 ಕಿ.ಮೀ. ವ್ಯಾಪ್ತಿಯ ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆಗೆ 17,000 ಕೋಟಿ ರೂ.ಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೇಂದ್ರ ಸರಕಾರ ನಿನ್ನೆ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಬೆಂಗಳೂರಿಗೆ ಸಬ್ಅರ್ಬನ್ ರೈಲು ಅತ್ಯಗತ್ಯವಾಗಿದೆ. ಇದು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಗ್ಗಿಸುವುದಲ್ಲದೆ, ಬೆಂಗಳೂರಿನ ಸುತ್ತಮುತ್ತ ಇರುವ ಊರುಗಳ ಜನರಿಗೆ ಕೂಡ ಇದರಿಂದ ಅನುಕೂಲವಾಗಲಿದೆ,'' ಎಂದಿದ್ದಾರೆ.

ಈ ಯೋಜನೆ ಕುರಿತು ತಾವು ನಿರಂತರವಾಗಿ ಗಮನ ಸೆಳೆಯುತ್ತಿದ್ದುದಾಗಿ ಹೇಳಿರುವ ಸಚಿವರು, ಇತ್ತೀಚೆಗೆ ಹೊಸದೆಹಲಿಯಲ್ಲಿ ನಡೆದ ನೀತಿ ಆಯೋಗದ ಮಹತ್ವದ ಸಭೆಯಲ್ಲಿ ಈ ವಿಚಾರವನ್ನು ಪ್ರಧಾನವಾಗಿ ಚರ್ಚಿಸಿ, ಮನದಟ್ಟು ಮಾಡಿಕೊಡಲಾಗಿತ್ತು ಎಂದು ನುಡಿದಿದ್ದಾರೆ.
ಆದರೆ ಕೇಂದ್ರದ ಒಟ್ಟಾರೆ ಬಜೆಟ್ ಸಂಪೂರ್ಣ ತೃಪ್ತಿ ನೀಡುವಂತಿಲ್ಲ. ಕೇಂದ್ರ ಸರಕಾರವು ಕೃಷಿಕರು ಮತ್ತು ಕೃಷಿ ಕಾರ್ಮಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಹೇಳುತ್ತಲೇ ಬಂದಿದೆ. ಆದರೆ, ಇದನ್ನು ನನಸು ಮಾಡುವಂಥ ಯಾವುದೇ ಉಪಕ್ರಮಗಳು ಬಜೆಟ್ನಲ್ಲಿ ಕಾಣಿಸುತ್ತಿಲ್ಲ,'' ಎಂದು ದೇಶಪಾಂಡೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಇನ್ನಷ್ಟು ಸಹಾಯ ನೀಡಬೇಕಾಗಿತ್ತು. ಏಕೆಂದರೆ, ಈ ಸ್ತರದ ಕೈಗಾರಿಕೆಗಳೇ ಉದ್ಯೋಗಸೃಷ್ಟಿಗೆ ಜೀವನಾಡಿಗಳಾಗಿವೆ. ಜೊತೆಗೆ, ಕೇವಲ ವಾರ್ಷಿಕ 250 ಕೋಟಿ ರೂ. ಮೊತ್ತದ ವಹಿವಾಟು ನಡೆಸುವ ಉದ್ದಿಮೆಗಳಿಗೆ ಮಾತ್ರ ಅನ್ವಯವಾಗುವಂತೆ ಕಾರ್ಪೊರೇಟ್ ತೆರಿಗೆಯನ್ನು ಶೇಕಡ 25ಕ್ಕೆ ಇಳಿಸುವ ಬದಲು ಎಲ್ಲ ಉದ್ದಿಮೆಗಳಿಗೂ ಈ ಅನುಕೂಲವನ್ನು ವಿಸ್ತರಿಸಬೇಕಾಗಿತ್ತು,'' ಎಂದು ಅವರು ಹೇಳಿದ್ದಾರೆ.
ಹಿರಿಯ ನಾಗರಿಕರಿಗೆ ಕೆಲವು ರಿಯಾಯಿತಿಗಳನ್ನು ನೀಡಿರುವುದು ಸ್ವಾಗತಾರ್ಹವಾಗಿದೆ. ಆದರೆ, ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಅನುಕೂಲ ಮಾಡಿಕೊಡಬೇಕಾಗಿತ್ತು. ಈ ವಿಚಾರದಲ್ಲಿ ಜನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ,'' ಎಂದು ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications