3ನೇ ವ್ಯಕ್ತಿ ದೂರಿನ ಹಿನ್ನೆಲೆ ಪಿಂಚಣಿ ತಡೆಹಿಡಿಯುವಂತಿಲ್ಲ; ಹೈಕೋರ್ಟ್
ಬೆಂಗಳೂರು, ನವೆಂಬರ್ 28: ಸರ್ಕಾರಿ ನೌಕರನ ವಿರುದ್ಧದ ಮೂರನೇ ವ್ಯಕ್ತಿ ಭ್ರಷ್ಟಾಚಾರ ತಡೆ ಕಾಯಿದೆಯ ವಿರುದ್ಧ ದೂರು ನೀಡಿದ್ದರೆ ಅದಕ್ಕಾಗಿ ನಿವೃತ್ತ ಸರ್ಕಾರಿ ನೌಕರನ ಪಿಂಚಣಿ ತಡೆಹಿಡಿಯುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಆ ನೌಕಕರ ನಿವೃತ್ತಿಯ ಬಳಿಕ ಪಿಂಚಣಿ ಸೇರಿದಂತೆ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯುವುದು ನ್ಯಾಯಾಂಗ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ ಎಂಬುದಾಗಿ ಅರ್ಥೈಸಲಾಗದು ಎಂದು ತಿಳಿಸಿದೆ.
ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ಪಟ್ಟಿದೆ. ಭ್ರಷ್ಟಾಚಾರ ಆರೋಪದಲ್ಲಿ ದೂರು ದಾಖಲಾಗಿದ್ದ ನಿವೃತ್ತ ನೌಕರನಿಗೆ ಪಿಂಚಣಿ ತಡೆಹಿಡಿದಿದ್ದ ಕ್ರಮವನ್ನು ರದ್ದು ಪಡಿಸಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಕೋರ್ಟ್ ಆದೇಶವೇನು?; ನಿವೃತ್ತ ನೌಕರನಿಗೆ ಆದಷ್ಟು ಶೀಘ್ರದಲ್ಲಿ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಮೂರನೇ ವ್ಯಕ್ತಿ ದಾಖಲಿಸಿರುವ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳ ನಿಯಮಾವಳಿ 171ರ ಕ್ರಮಕ್ಕೆ ಮುಂದಾಗುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣದಲ್ಲಿ ನಿವೃತ್ತರಾದ ನೌಕರನ ಪಿಂಚಣಿಯನ್ನು ತಡೆಹಿಡಿಯಲು ಅವಕಾಶಗಳಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ಉದ್ಯೋಗದಾತರಿಗೆ ಯಾವುದೇ ಸಮಸ್ಯೆ ಮಾಡಿಲ್ಲ ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಜತೆಗೆ, ಅವರು 2022ರ ಮೇ 32ರಂದು ನಿವೃತ್ತಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಪ್ರಕ್ರಿಯೆ ಪ್ರಾರಂಭಿಸಿರಲಿಲ್ಲ.
ಆದರೆ, 2022ರ ಜೂನ್ 1 ರಂದು ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರೋಸಿಡಿಂಗ್ಸ್ಗೆ ಮುಂದಾಗಿದ್ದರು. ಜತೆಗೆ, ತನಿಖೆ 2022ರ ಆಗಸ್ಟ್ 6 ರಂದು ಆರೋಪ ಪಟ್ಟಿ ದಾಖಲಿಸಿದ್ದರು. ಹಾಗಾಗಿ ನಿವೃತ್ತಿಯಾದ ಮೇಲೆ ಕ್ರಿಮಿನಲ್ ಪ್ರೋಸಿಡಿಂಗ್ಸ್ ಪ್ರಾರಂಭಿಸಿರುವುದರಿಂದ ಅವರ ನಿವೃತ್ತಿ ಬಾಕಿ ವೇತನವನ್ನು ತಡೆಯುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ; ಪ್ರಕರಣದ ಅರ್ಜಿದಾರರಾದ ಮಲ್ಲಿಕಾರ್ಜುನ ಸವಣೂರ ಕೆಪಿಟಿಸಿಎಲ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ 2018ರ ಏಪ್ರಿಲ್ 9 ರಂದು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅನಾಮದೇಯ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದ ಎಸಿಬಿ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದೇ ಕಾರಣದಿಂದ ಅರ್ಜಿದಾರರು ಅಮಾನತ್ತುಗೊಂಡಿದ್ದರು. ಬಳಿಕ ಸೇವೆ ಮುಂದುವರೆಸಿದ್ದರು. ಈ ನಡುವೆ ವಯೋಸಹಜ ಕಾರಣದಿಂದ 2022ರ ಮೇ 31ರಂದು ಸೇವೆಯಿಂದ ನಿವೃತ್ತರಾಗಿದ್ದರು.
ನಿವೃತ್ತರಾದ ಬಳಿಕ ಪಿಂಚಣಿ ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ 2022ರ ಜೂನ್ 28ರಂದು ಕೆಪಿಟಿಸಿಎಲ್ ಹಿಂಬರ ನೀಡಿತ್ತು. ಅಲ್ಲದೆ, ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಶೇ.50 ರಷ್ಟು ನಿವೃತ್ತ ವೇತನ ಮತ್ತು ಪಿಂಚಣಿ ಸಿಗಲಿದೆ ಎಂದು ತಿಳಿಸಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯಪೀಠ, ಕೆಪಿಟಿಸಿಎಲ್ ಹಿಂಬರವನ್ನು ರದ್ದುಪಡಿಸಿ, ಸಂಪೂರ್ಣ ಪಿಂಚಣಿ ಪಾವತಿಸುವಂತೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಪಿಟಿಸಿಎಲ್ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.












Click it and Unblock the Notifications