ಕೊನೆ ಕ್ಷಣದಲ್ಲಿ ಪಟ್ಟಿ ಬದಲು, 5 ಹೆಸರು ಕೈ ಬಿಟ್ಟ ಯಡಿಯೂರಪ್ಪ!
Recommended Video
ಬೆಂಗಳೂರು, ಆಗಸ್ಟ್ 21 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಸಚಿವರ ಆಯ್ಕೆ ಮಾತ್ರ ಯಡಿಯೂರಪ್ಪಗೆ ಕಗ್ಗಂಟಾಗಿತ್ತು.
ಸಚಿವ ಸಂಪುಟ ವಿಸ್ತರಣೆ ವೇಳೆ ಯಡಿಯೂರಪ್ಪ ಆಪ್ತರಾಗಿದ್ದ ಹಲವು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದು ಗಮನಿಸಬೇಕಾದ ಅಂಶ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡದಿರುವುದು ಕಾರಣವಾಗಿದೆ. ಕೊನೆ ಕ್ಷಣದಲ್ಲಿ ಅವರು ಸಚಿವರ ಪಟ್ಟಿಯಲ್ಲಿ ಹಲವು ಬದಲಾವಣೆ ಮಾಡಿದ್ದಾರೆ.
ಸಚಿವರ ಪಟ್ಟಿಯನ್ನು ಸಿದ್ಧಪಡಿಸುವಾಗ ಯಡಿಯೂರಪ್ಪ ತಮ್ಮ ಆಪ್ತರಿಗೆ ಹೆಚ್ಚು ಆದ್ಯತೆ ನೀಡಿದ್ದರು. ಆದರೆ, ಹೈಕಮಾಂಡ್ ಈ ಪಟ್ಟಿಗೆ ಒಪ್ಪಿಗೆ ಕೊಟ್ಟಿಲ್ಲ. ಬಿ. ಎಲ್. ಸಂತೋಷ್ ಅವರಿಂದ ಮತ್ತೊಂದು ಪಟ್ಟಿಯನ್ನು ತರಿಸಿಕೊಂಡಿದ್ದರು.
ಒಟ್ಟು ಮೂರು ಪಟ್ಟಿಗಳನ್ನು ಮುಂದಿಟ್ಟುಕೊಂಡು 17 ಶಾಸಕರನ್ನು ಸಚಿವರಾಗಿ ಆಯ್ಕೆ ಮಾಡಲಾಗಿದೆ. 25 ದಿನಗಳ ಬಳಿಕ ಯಡಿಯೂರಪ್ಪ ಸಂಪುಟ ವಿಸ್ತರಣೆಯಾಗಿದೆ. ಆದರೆ, ಸೋಮವಾರ ಸಿದ್ಧವಾಗಿದ್ದ 16 ಜನರ ಪಟ್ಟಿಗೆ ಮಂಗಳವಾರ ಬೆಳಗ್ಗೆ ಮತ್ತೊಂದು ಹೆಸರು ಸೇರಿದೆ. ಅದು ಯಡಿಯೂರಪ್ಪ ಪರಮಾಪ್ತರದ್ದು ಎಂಬುದು ಕುತೂಹಲ ನಡೆಯಾಗಿದೆ...

12 ಶಾಸಕರ ಯಡಿಯೂರಪ್ಪ ಪಟ್ಟಿ
ದೆಹಲಿಗೆ ತೆರಳುವಾಗ ಯಡಿಯೂರಪ್ಪ 12 ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಪಟ್ಟಿಯೊಂದನ್ನು ಹಿಡಿದುಕೊಂಡು ಹೋಗಿದ್ದರು. ಆದರೆ, ಹೈಕಮಾಂಡ್ ಈ ಪಟ್ಟಿಗೆ ಒಪ್ಪಿಗೆ ನೀಡಿಲಿಲ್ಲ. 12 ಮಂದಿಯ ಪಟ್ಟಿಯಲ್ಲಿ 11 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಕೈ ತಪ್ಪಿದೆ.

5 ಹೆಸರನ್ನು ಹೇಳಲೇ ಇಲ್ಲ
ಹೈಕಮಾಂಡ್ ಖಡಕ್ ಸೂಚನೆ ಬಳಿಕ ಯಡಿಯೂರಪ್ಪ ಮೌನವಾದರು. ಮೂವರು ಲಿಂಗಾಯತರು, ಇಬ್ಬರು ಒಕ್ಕಲಿಗರು ಸೇರಿದಂತೆ ಒಟ್ಟು 5 ಶಾಸಕರ ಹೆಸರನ್ನು ಪಟ್ಟಿಯಿಂದ ಅವರು ಕೈ ಬಿಟ್ಟರು. ಈ ಹೆಸರುಗಳನ್ನು ಸೇರಿಸಿದರೂ ಅದಕ್ಕೆ ಹೈಕಮಾಂಡ್ ಒಪ್ಪಿಗೆ ಕೊಡುತ್ತಿರಲಿಲ್ಲ.

ಐವರು ಶಾಸಕರು ಯಾರು?
ಎಂ. ಪಿ. ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಸಿ. ಪಿ. ಯೋಗೇಶ್ವರ, ಕೆ. ಜಿ. ಬೋಪಯ್ಯ ಹೆಸರನ್ನು ಯಡಿಯೂರಪ್ಪ ಪಟ್ಟಿಯಿಂದ ಕೈ ಬಿಟ್ಟರು ಎಂಬ ಮಾಹಿತಿ ಇದೆ. ಈ 5 ಶಾಸಕರ ಬದಲು ಹೈಕಮಾಂಡ್ ಸೂಚಿಸಿದ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ.

ಮಂಗಳವಾರ ಬೆಳಗ್ಗೆ 1 ಹೆಸರು ಸೇರ್ಪಡೆ
ಸೋಮವಾರ ರಾತ್ರಿ ದೆಹಲಿಯಿಂದ ಬಂದ ಪಟ್ಟಿಯಲ್ಲಿ 16 ಶಾಸಕರ ಹೆಸರು ಇತ್ತು. ಮಂಗಳವಾರ ಬೆಳಗ್ಗೆ ಯಡಿಯೂರಪ್ಪ ಜೆ. ಪಿ. ನಡ್ಡಾ ಅವರಿಗೆ ಕರೆ ಮಾಡಿ ಮತ್ತೊಂದು ಹೆಸರು ಸೇರ್ಪಡೆಗೊಳಿಸಿದರು ಎಂಬದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ ಬೊಮ್ಮಾಯಿ ಹೆಸರನ್ನು ಯಡಿಯೂರಪ್ಪ ಸೇರಿಸಿದ್ದಾರೆ ಎಂಬುದು ಸುದ್ದಿ.












Click it and Unblock the Notifications