Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ?
ಬೆಂಗಳೂರು-ಮೈಸೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂಬುದು ಬಹಳ ಹಿಂದಿನ ಬೇಡಿಕೆಯಾಗಿದೆ. ಈ ಬಾರಿಯ ಬಜೆಟ್ನಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಬೆಂಗಳೂರು, ಜನವರಿ 30; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಹಣಕಾಸು ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಸಹ ವಿಲೀನಗೊಂಡಿರುತ್ತದೆ. ಆದ್ದರಿಂದ ರೈಲ್ವೆ ಇಲಾಖೆಯ ಘೋಷಣೆಗಳು ಇದರಲ್ಲಿಯೇ ಸೇರಿರುತ್ತವೆ.
ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ಬೆಂಗಳೂರು-ಮೈಸೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂಬುದು ಬಹಳ ಹಿಂದಿನ ಬೇಡಿಕೆಯಾಗಿದೆ. ಇದಕ್ಕೆ ದಕ್ಷಿಣ ಕನ್ನಡ, ಉಡುಪಿ ಭಾಗದ ಜನರ ವಿರೋಧವೂ ಇದೆ.
ಮುರುಡೇಶ್ವರ-ಬೆಂಗಳೂರು ರೈಲು ಮೇ ತನಕ ವಿಸ್ತರಣೆ
ಹಲವಾರು ಸಂಘಟನೆಗಳು ಬೆಂಗಳೂರು-ಮಂಗಳೂರು ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಮಂಡಳಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರಿಗೆ ಮನವಿ ಮಾಡಿವೆ. ಬಜೆಟ್ನಲ್ಲಿ ಈ ಕುರಿತು ಘೋಷಣೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಮುಂಬೈ-ಕನ್ಯಾಕುಮಾರಿ ವಿಶೇಷ ರೈಲು, ಕರ್ನಾಟಕಕ್ಕೂ ಅನುಕೂಲ
ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ ಮಾಡಿದರೆ ಮೈಸೂರು ಮತ್ತು ಕಾರವಾರದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಅಲ್ಲದೇ ಮೈಸೂರು ಮತ್ತು ಕಾರವಾರ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂಬುದು ಹಲವು ಸಂಘಟನೆಗಳ ವಾದವಾಗಿದೆ.
ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ
ಈಗ ರೈಲು ಮಂಗಳೂರಿನಲ್ಲಿ ನಿಲುಗಡೆಗೊಳ್ಳುತ್ತಿದೆ. ಇದರ ಬದಲು ಅದನ್ನು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವಂತೆ ವಿಸ್ತರಣೆ ಮಾಡಬಹುದಾಗಿದೆ. ಉಡುಪಿ, ಮುರ್ಡೇಶ್ವರ, ಕಾರವಾರ ತನಕ ರೈಲು ಸಂಚಾರ ನಡೆಸಿದರೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ ಎಂಬುದು ಹಲವು ಜನರ ಒತ್ತಾಯವಾಗಿದೆ.
ಹಲವಾರು ಜನರಿದ್ದಾರೆ; ಬೆಂಗಳೂರು-ಮಂಗಳೂರು ರೈಲು ಮೈಸೂರಿನ ಮೂಲಕ ಸಾಗುತ್ತದೆ. ಮೈಸೂರಿನಲ್ಲಿ ಕರಾವಳಿ ಭಾಗದ ಅನೇಕ ಜನರಿದ್ದಾರೆ. ಈ ರೈಲು ಕಾರವಾರ ತನಕ ವಿಸ್ತರಣೆಗೊಂಡರೆ ಕರಾವಳಿ ಭಾಗದ ಜನರಿಗೆ ಅನುಕೂಲವಾಗುತ್ತದೆ. ಕರಾವಳಿ ಮತ್ತು ಮೈಸೂರಿಗೆ ನೇರ ಸಂಪರ್ಕ ಅಗತ್ಯವಿದೆ ಎಂದು ಹಲವು ಸಂಘಟನೆಗಳು ರೈಲ್ವೆ ಇಲಾಖೆಗೆ ಮಾಡಿರುವ ಮನವಿಯಲ್ಲಿ ಉಲ್ಲೇಖಿಸಿವೆ.
ಮೈಸೂರು ಪ್ರಮುಖ ಪ್ರವಾಸಿ ತಾಣವಾಗಿದೆ. ಕರಾವಳಿ ಭಾಗದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಉಡುಪಿ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಿವೆ. ಕರಾವಳಿ ಮತ್ತು ಮೈಸೂರು ನಡುವೆ ರೈಲು ಸಂಚಾರ ನಡೆಸುವುದರಿಂದ ಧಾರ್ಮಿಕ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಿಗೆ ಅನುಕೂಲವಾಗಲಿದೆ.
ಇದೇ ಬೇಡಿಕೆ ಮುಂದಿಟ್ಟುಕೊಂಡು ನೈಋತ್ಯ ರೈಲ್ವೆಗೆ ಸಹ ಮನವಿ ಮಾಡಲಾಗಿತ್ತು. ಬಜೆಟ್ಗೆ ನೈಋತ್ಯ ರೈಲ್ವೆ ಹಲವು ಪ್ರಸ್ತಾಪಗಳನ್ನು ಸಲ್ಲಿಕೆ ಮಾಡಿದೆ. ಇದರಲ್ಲಿ ಇದು ಸಹ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ವಿರೋಧ ಏಕೆ?; ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಲು ದಕ್ಷಿಣ ಕನ್ನಡ, ಉಡುಪಿ ಭಾಗದ ಜನರ ವಿರೋಧವಿದೆ. ಒಂದು ವೇಳೆ ರೈಲು ಕಾರವಾರ ತನಕ ವಿಸ್ತರಣೆ ಆದರೆ ಹೆಚ್ಚಿನ ಸೀಟುಗಳನ್ನು ದೂರ ಪ್ರಯಾಣಿಕರು ಬುಕ್ ಮಾಡಿಕೊಳ್ಳುತ್ತಾರೆ. ಆದ್ದರಿಂದ ಜಿಲ್ಲೆಯ ಜನರಿಗೆ ಹೆಚ್ಚಿನ ಸೀಟು ಲಭ್ಯವಾಗುವುದಿಲ್ಲ ಎಂಬುದು ವಿರೋಧಕ್ಕೆ ಕಾರಣವಾಗಿದೆ.
ಕಾರವಾರಕ್ಕೆ ರಾಜಧಾನಿಯಿಂದ ಸಂಪರ್ಕ ಕಲ್ಪಿಸಲು ಬೇಕಾದರೆ ಹೊಸ ರೈಲನ್ನು ಓಡಿಸಲು ಆದರೆ ಇರುವ ಬೆಂಗಳೂರು-ಮಂಗಳೂರು ರೈಲು ಕಣ್ಣೂರು ತನಕ ವಿಸ್ತರಣೆಯಾಗಿದೆ. ಈಗ ಬೆಂಗಳೂರು-ಮಂಗಳೂರು ರೈಲನ್ನು ಸಹ ವಿಸ್ತರಣೆ ಮಾಡುವುದು ಬೇಡ ಎಂಬುದು ಕೆಲವರ ಒತ್ತಾಯವಾಗಿದೆ.
ಗೋವಾಕ್ಕೆ ರೈಲು ಬೇಕು; ಮೈಸೂರು-ಗೋವಾ ನಡುವೆ ರೈಲು ಸಂಚಾರ ಆರಂಭಿಸಬೇಕು ಎಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಡಲಾಗಿತ್ತು. ಈ ರೈಲಿನಿಂದ ಉಡುಪಿ, ಮಂಗಳೂರು ಮತ್ತು ಉತ್ತರ ಕನ್ನಡ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಕುರಿತು ಸಹ ಬಜೆಟ್ನಲ್ಲಿ ಘೋಷಣೆಯಾಗಲಿದೆಯೇ? ಕಾದು ನೋಡಬೇಕಿದೆ.