'ನಾಳೆಯಿಂದ ಸಿದ್ದರಾಮಯ್ಯ ಅವರೇ ಹೈಕಮಾಂಡ್'
ಚಿಕ್ಕಮಗಳೂರು, ಸೆಪ್ಟೆಂಬರ್, 11 : 'ನಾಳೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಹೈಕಮಾಂಡ್. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಲೆಕ್ಕಕ್ಕಿಲ್ಲ. ಸರ್ಕಾರದ ಅವತಾರವನ್ನು ನಾಳೆಯಿಂದ ನೋಡಿ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ರೈತ ಚೈತನ್ಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಪಡೆದಿದ್ದೇವೆ ಎಂಬ ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರದ ಅವತಾರವನ್ನು ನಾಳೆಯಿಂದ ನೋಡಿ ಹೇಗಿರುತ್ತದೆ' ಎಂದು ವ್ಯಂಗ್ಯವಾಡಿದರು. [ಲೋಕಸಭೆಯಲ್ಲಿ ಯಡಿಯೂರಪ್ಪ ಮಾತು, ರಾಜ್ಯ ಸರ್ಕಾರದ ವಿರುದ್ಧ ಗರಂ]

'ಬಿಬಿಎಂಪಿಯಲ್ಲಿ ನಮಗೆ ಅಧಿಕಾರ ಸಿಕ್ಕಿದೆ, ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಅಹಂ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅವರೇ ಈಗ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇನ್ನು ಮುಂದೆ ಲೆಕ್ಕಕ್ಕಿಲ್ಲ. ಹಾಗಿರುತ್ತದೆ ಸಿದ್ದರಾಮಯ್ಯ ವರ್ತನೆ' ಎಂದು ಯಡಿಯೂರಪ್ಪ ಕುಟುಕಿದರು. [ನೂತನ ಮೇಯರ್ ಆಯ್ಕೆ : ಯಾರು, ಏನು ಹೇಳಿದ್ರು?]
ಕುಂಭಕರ್ಣ ನಿದ್ದೆ : 'ರಾಜ್ಯದಲ್ಲಿ ಭೀಕರ ಬರಗಾಲ ಬಂದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಮುಖ್ಯಮಂತ್ರಿ, ಕೃಷಿ ಸಚಿವರು ಮತ್ತು ಕಂದಾಯ ಸಚಿವರು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ರಾಜ್ಯದ ಜನರ ಜೊತೆ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ' ಎಂದು ಕಿಡಿಕಾರಿದರು.
ರಾಜ್ಯ ರಾಜಕೀಯಕ್ಕೆ ಬರ್ತಾರಾ? : ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದರು. 'ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಇನ್ನುಮುಂದೆ ನನ್ನ ಸಂಪೂರ್ಣ ಸಮಯವನ್ನು ರಾಜ್ಯದಲ್ಲಿ ಕಳೆಯುತ್ತೇನೆ' ಎಂದರು.











Click it and Unblock the Notifications