Lok Sabha Elections 2024: ಬಿಜೆಪಿಯಲ್ಲಿ ಬಹಿರಂಗ ಕಿತ್ತಾಟ; ಲೋಕಸಭಾ ಚುನಾವಣೆಯ ಮೇಲಾಗುತ್ತಾ ಎಫೆಕ್ಟ್?
ಬೆಂಗಳೂರು, ಜೂನ್ 30: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋಲನ್ನ ಅನುಭವಿಸಿದ್ದು, ಸೋಲಿನ ಬೆನ್ನಲ್ಲೇ ಕಮಲ ಪಾಳಯದಲ್ಲಿ ಬಣ ರಾಜಕೀಯ ಜೋರಾಗಿ ಸದ್ದು ಮಾಡುತ್ತಿದೆ.
ಮೂರು ವರ್ಷಗಳ ಕಾಲ ಅಧಿಕಾರವನ್ನ ನಡೆಸಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸುವುದಾಗಿ ಹೆಚ್ಚು ಆತ್ಮವಿಶ್ವಾಸವನ್ನ ಇಟ್ಟುಕೊಂಡಿತ್ತು, ಆದರೆ ಕಾಂಗ್ರೆಸ್ ನ ತಂತ್ರಗಾರಿಕೆಯಿಂದ ಹಾಗೂ ಬಿಜೆಪಿ ಸರ್ಕಾರದ ಮೇಲಿನ ಹಲವು ಆರೋಪಿದಿಂದಾಗಿ ಸೋಲಾಗಿದೆ ಎಂದು ಬಿಜೆಪಿ ಪಾಳಯದಲ್ಲಿ ಸೋಲಿನ ಕಾರಣಗಳ ವಿಮರ್ಶೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

ಇನ್ನೂ ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಬಹಿರಂಗವಾಗಿ ಮಾಡುತ್ತಾ ಬಂದಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಕಾಂಗ್ರೆಸ್ ಜೊತೆಗಿನ ಒಳ ಒಪ್ಪಂದದಿಂದ ಸೋಲಾಗಿದೆ ಎಂದು ಚರ್ಚೆಗಳು ನಡೆಯುತ್ತಿದ್ದು, ಮುರುಗೇಶ್ ನಿರಾಣಿ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ನಡುವೆ ಮತ್ತೆ ವಾಕ್ಸಮರ ಮುಂದುವರೆದಿದ್ದು, ಬಿಜೆಪಿ ಹೈಕಮಾಂಡ್ ಸೈಲೆಂಟಾಗಿದೆ.
ಈಗಾಗಲೇ ಕಳೆದ ಒಂದು ವಾರದಿಂದ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಸ್ವಪಕ್ಷದ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದು, ಸೋಲಿಗೆ ಹತ್ತು ಹಲವು ಕಾರಣಗಳನ್ನ ಹೇಳಿ ತಮ್ಮ ನಾಯಕರ ವಿರುದ್ದ ಕಿಡಿಕಾರಿದ್ರು. ಈ ನಡುವೆ ಬಿಜೆಪಿ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಮಾಜಿ ಶಾಸಕರಿಗೆ ರೇಣುಕಾಚಾರ್ಯ ಅವರಿಗೆ ನೋಟಿಸ್ ಕೂಡಾ ನೀಡಲಾಗಿದೆ.
ಇನ್ನೂ ಸೋಲಿನ ಬಳಿಕ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿರುವ ಕಮಲ ಪಾಳಯದಲ್ಲಿ ಸೃಷ್ಟಿಯಾದ ಈ ಭಿನ್ನಮತದ ಎಫೆಕ್ಟ್ ಮುಂಬರುವ ಲೋಕಸಭಾ ಚುನಾವಣೆಯ ಮೇಲಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಇತ್ತ ಬಿಜೆಪಿಯಲ್ಲಿನ ಹಲವು ಭಿನ್ನಮತಗಳ ವಿರುದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಟೀಕೆಯನ್ನ ನಡೆಸುತ್ತಿದ್ದಾರೆ.
ಇತ್ತ ಜುಲೈ ಮೊದಲ ವಾರದಲ್ಲಿ ನಡೆಯುವ ಅಧಿವೇಶನಕ್ಕೂ ಮೊದಲೇ ಮೊದಲೇ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗುವುದು ಎಂದು ತಿಳಿದು ಬಂದಿದ್ದು, ವಿಪಕ್ಷ ನಾಯಕನ ಆಯ್ಕೆ ಕುರಿತು ಹಲವು ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ.
ಇತ್ತ ಬಿಜೆಪಿಯಲ್ಲಿ ಎರಡು ಬಣಗಳು ಸ್ಪಷ್ಟವಾಗಿ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದ್ದದು, ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಬಣ ಒಂದು ಕಡೆಯಾದರೆ ಇನ್ನೊಂದು ಬಣವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ) ಬಿಎಲ್ ಸಂತೋಷ್ ಕಂಡು ಬಂದಿದೆ. ಸೋಲಿಗೆ ಏನು ಕಾರಣ ಎಂಬುವುದ ಬಗ್ಗೆ ಪರಸ್ಪರ ಎರಡು ಬಣಗಳು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು, ಪಕ್ಷದಲ್ಲೇ ಕಿಚ್ಚಾಟ ಹೆಚ್ಚಾಗುವಂತೆ ಮಾಡಿದೆ.
ಇನ್ನೂ ವಿಧಾನಸಭಾ ಚುನಾವಣಾ ಸೋಲಿಗೆ ಒಳಒಪ್ಪಂದಗಳು ಕಾರಣ ಎಂದು ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಸಂಸದ ಪ್ರತಾಪ ಸಿಂಹ, ಸಿ.ಟಿ ರವಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಈ ಆರೋಪದಲ್ಲಿ ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ವಿರುದ್ಧನೂ ಅಸಮಾಧಾನ ವ್ಯಕ್ತವಾಗಿತ್ತು.
ಇದಕ್ಕೆ ಟಾಂಗ್ ಕೊಡಲು ಬಿ ಎಸ್ ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಹಲವು ನಾಯಕರು,, ಮಾಜಿ ಸಿಎಂ ಬಿಎಸ್ವೈ ಅವರನ್ನು ಕಡೆಗಣಿಸಿರುವುದು, ಟಿಕೆಟ್ ಹಂಚಿಕೆಯಲ್ಲಾದ ಗೊಂದಲ, ಹಲವು ಹಿರಿಯರಿಗೆ ಟಿಕೆಟ್ ನೀಡದೆ ಇರುವುದು, ಕಾಂಗ್ರೆಸ್ ಆರೋಪಗಳಿಗೆ ಸಮಪರ್ಕವಾದ ಉತ್ತರ ನೀಡದೇ ಇರುವುದು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸ್ವಪಕ್ಷದ ನಾಯಕರ ವಿರುದ್ದ ಹಾಗೂ ಹೈಕಮಾಂಡ್ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಹಲವು ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತ ಬಿಜೆಪಿಯ ಒಳಬೇಗುದಿ ಬೀದಿಗೆ ಬಂದಿದ್ದು, ರಾಜ್ಯ ಬಿಜೆಪಿಯಲ್ಲಿನ ಕಚ್ಚಾಟಗಳು ನಡೆದರೂ ಬಿಜೆಪಿ ಹೈಕಮಾಂಡ್ ಸೈಲೆಂಟಾಗಿದೆ. ಇನ್ನೂ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಕರ್ನಾಟಕ ಮಹತ್ವದ ರಾಜ್ಯಗಳ ಪೈಕಿ ಒಂದಾಗಿದ್ದು ಬಿಜೆಪಿಯಲ್ಲಿನ ಭಿನ್ನಮತ ಲೋಕಸಭಾ ಚುನಾವಣೆಗೆ ಏಫೆಕ್ಟ್ ಆಗಲಿದೆ ಎನ್ನಲಾಗಿದೆ.












Click it and Unblock the Notifications