ತೇಜಸ್ವಿ ಸೂರ್ಯ ಸೇರಿ 22 ಸೀಟು ಗೆಲ್ಲುತ್ತೇವೆ : ಯಡಿಯೂರಪ್ಪ
Recommended Video

ಬೆಂಗಳೂರು, ಏಪ್ರಿಲ್ 05 : 'ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಒಂದು ಸುತ್ತು ಹೋಗಿ ಬಂದಿದ್ದೇನೆ.
2014ರ ಚುನಾವಣೆಗಗಿಂತ ಉತ್ತಮವಾದ ವಾತಾವರಣ ಈ ಬಾರಿ ಬಿಜೆಪಿಗೆ ಇದೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶುಕ್ರವಾರ ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಯಡಿಯೂರಪ್ಪ ಅವರ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. 'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಲಾಭವಾಗಲಿದೆ' ಎಂದು ತಿಳಿಸಿದರು.
'ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ನಾವು ಕಳಿಸಿದ್ದೇವು.
ಆದರೆ, ಹೈಕಮಾಂಡ್ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿದೆ. ಎರಡು ಲಕ್ಷ ಮತಗಳ ಅಂತರದಿಂದ ತೇಜಸ್ವಿ ಸೂರ್ಯ ಗೆಲ್ಲುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಪ್ರಚಾರಕ್ಕೆ ಹೋಗುವುದು ಅನುಮಾನ. ನನಗೆ ರಾಜ್ಯಾದ್ಯಂತ ಓಡಾಡಬೇಕಿದೆ. ಸುಮಲತಾ ಅಂಬರೀಶ್ಗೆ ಬೆಂಬಲ ನೀಡಬೇಕು ಎಂಬುದು ವರಿಷ್ಠರ ನಿರ್ಧಾರ' ಎಂದು ಯಡಿಯೂರಪ್ಪ ಹೇಳಿದರು.

ಹಲವು ಕಾರ್ಯಕ್ರಮಗಳ ಜಾರಿ
'30 ಕೋಟಿ ಜನಧನ್ ಬ್ಯಾಂಕ್ ಖಾತೆ ತೆರೆದಿದ್ದೇವೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದೆ. ವಿದೇಶಿ ನೇರ ಬಂಡವಾಳ 2014 ರಲ್ಲಿ 30 ಮಿಲಿಯನ್ ಡಾಲರ್ ಇತ್ತು. ಈಗ 68 ಮಿಲಿಯನ್ ಡಾಲರ್ ಆಗಿದೆ.
12.5 ಕೋಟಿ ರೈತರಿಗೆ 6000 ಹಣ ಕೊಡುವ ಕಾಲ ಬಂದಿದೆ. ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಲಾಗಿದೆ' ಎಂದು ಯಡಿಯೂರಪ್ಪ ಹೇಳಿದರು.

ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ
'ರೈತರು, ಬಡವರಿಗಾಗಿ ಹಲವಾರು ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಆರ್ಥಿಕ ಸ್ಥಿತಿ 11 ರಿಂದ 5 ಕ್ಕೆ ಏರಿಕೆಯಾಗಿದೆ. ತಲಾ ಆದಾಯದಲ್ಲಿ ಏರಿಕೆಯಾಗಿದೆ. 7.3 ರಷ್ಟು ಆರ್ಥಿಕ ಬೆಳವಣಿಗೆಯಾಗಿದೆ. ಸೆನ್ ಸೆಕ್ಸ್ ಸೂಚ್ಯಂಕ 39,000 ಗಡಿ ದಾಟಿ ಇದೇ ಮೊದಲ ಬಾರಿ ಹೋಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದ ಅರ್ಥಿಕ ಸ್ಥಿತಿ ಮೇಲೆ ವಿಶ್ವಾಸ ವಿಡುತ್ತಿದ್ದಾರೆ' ಎಂದು ತಿಳಿಸಿದರು.

ಅವರ ಕಚ್ಚಾಟವೇ ನಮಗೆ ಲಾಭ
'ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಇಂದಾಗಿ ಬಿಜೆಪಿಗೆ ಲಾಭವಾಗಲಿದೆ. ಅವರ ಕಚ್ಚಾಟವೇ ನಮಗೆ ಲಾಭ ತಂದುಕೊಡಲಿದೆ' ಎಂದು ಯಡಿಯೂರಪ್ಪ ಹೇಳಿದರು.
'ತೇಜಸ್ವಿನಿ ಅನಂತ್ ಕುಮಾರ್ ಅವರವ ಹೆಸರನ್ನು ಮಾತ್ರ ನಾವು ಕಳಿಸಿದ್ದೆವು. ಆದರೆ, ಹೈಕಮಾಂಡ್ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿದೆ. ಅವರು ಎರಡು ಲಕ್ಷ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಕ್ತ ಭಾರತ
'ಕಾಂಗ್ರೆಸ್ ಮುಕ್ತ ಭಾರತ ಆಗಬೇಕು ಎಂದು ಹೇಳಿದವರು ನರೇಂದ್ರ ಮೋದಿ ಅವರಲ್ಲ. ಆ ಮಾತನ್ನು ಹೇಳಿದವರು ಮಹಾತ್ಮಾಗಾಂಧಿ. ಸ್ವಾತಂತ್ರ್ಯ ಸಿಕ್ಕಮೇಲೆ ಕಾಂಗ್ರೆಸ್ ವಿಸರ್ಜಿಸಿ ಎಂದು ಮಹಾತ್ಮಾಗಾಂಧಿ ಹೇಳಿದ್ದರು' ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಸೇರುವಂತೆ ಆಹ್ವಾನ ನೀಡಿಲ್ಲ
'ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕು ಎಂಬ ತೀರ್ಮಾನವನ್ನು ಮಾಡಿದ್ದು ವರಿಷ್ಠರು' ಎಂದು ಯಡಿಯೂರಪ್ಪ ಹೇಳಿದರು.

ಪಕ್ಷ ಬಲಪಡಿಸುವ ಕೆಲಸ ಮಾಡುವೆ
'ರಾಷ್ಟ್ರೀಯ ಪಕ್ಷದಲ್ಲಿ ಇರುವವನು ನಾನು. ಸ್ಥಾನಮಾನ ಇಲ್ಲದಿದ್ದಾಗಲೂ ರಾಜ್ಯದಲ್ಲಿ ಕೆಲಸ ಮಾಡಿದ್ದೇನೆ.ಮುಂದೆಯೂ ಮತ್ತೆ ನಾನು ಅಧಿಕಾರ ಇಲ್ಲದಿದ್ದರೂ ಪಕ್ಷ ಬಲಪಡಿಸುವ ಕೆಲಸ ಮಾಡ್ತೇನೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆ. ಈ ಸರ್ಕಾರ ಬಿದ್ದು ಹೋಗತ್ತೆ ಎನ್ನುವ ಭಾವನೆ ಜನಸಾಮಾನ್ಯರಿಗೆ ಬಂದಿದೆ' ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications