ಬಿಜೆಪಿ ಸರ್ಕಾರ : ರಮೇಶ್ ಕುಮಾರ್ ನಡೆ ಮೇಲೆ ಪಕ್ಷದ ತೀರ್ಮಾನ
ಬೆಂಗಳೂರು, ಜುಲೈ 25 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ಬಿಜೆಪಿ ಸರ್ಕಾರ ರಚನೆ ಮಾಡಲಿದೆಯೇ? ಎಂಬುದು ಸದ್ಯದ ಪ್ರಶ್ನೆ. ಆದರೆ, ದೆಹಲಿ ಬಿಜೆಪಿ ನಾಯಕರು ಕಾದು ನೋಡಿ ಎನ್ನುವ ಒಂದು ಸಾಲಿನ ಸಂದೇಶ ಕಳಿಸಿದ್ದಾರೆ.
ವಿಶ್ವಾಸಮತದಲ್ಲಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಸೋಲು ಕಂಡಿತು. ಎರಡು ದಿನದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಬೆಳವಣಿಗೆಗಳು ಇದಕ್ಕೆ ಪೂರಕವಾಗಿಲ್ಲ.
ಜುಲೈ 30 ರ ಒಳಗೆ ಬಿಜೆಪಿ ಸರ್ಕಾರ ರಚಿಸದಿದ್ದರೆ ಮಧ್ಯಂತರ ಚುನಾವಣೆ: ಸಿದ್ದರಾಮಯ್ಯ
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕುರಿತು ಸ್ಪೀಕರ್ ರಮೇಶ್ ಕುಮಾರ್ ಇನ್ನೂ ಅಂತಿಮ ತೀರ್ಮಾವನ್ನು ಕೈಗೊಂಡಿಲ್ಲ. ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುವ ತನಕ ಬಿಜೆಪಿ ಸರ್ಕಾರ ರಚನೆಯಾಗುವುದು ಬೇಡ ಎಂದು ಹೈಕಮಾಂಡ್ ಹೇಳಿದೆ.
ಆಪರೇಷನ್ ಗೆ ಹೆಸರಾದ ಬಿಜೆಪಿಗೆ, ಕಾಂಗ್ರೆಸ್ ಹಾಕಿದ ರಿವರ್ಸ್ ಸ್ವಿಂಗ್
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಲು ರಾಜ್ಯ ಬಿಜೆಪಿ ನಾಯಕರ ನಿಯೋಗ ದೆಹಲಿಯಲ್ಲಿದೆ. ಗುರುವಾರ ಬೆಳಗ್ಗೆ ನಿಯೋಗದ ಜೊತೆ ಒಮ್ಮೆ ಅವರು ಸಭೆ ನಡೆಸಿದರು. ಮಧ್ಯಾಹ್ನದ ಬಳಿಕ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ....
ಶಾಸಕರ ರಾಜೀನಾಮೆ; ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?
ಹಂಗಾಮಿ ಸಿಎಂ ಆಗಿ ಕಾರ್ಯ
ಮಂಗಳವಾರ ವಿಶ್ವಾಸಮತದಲ್ಲಿ ಸೋತ ಬಳಿಕ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಅವರು ಹಂಗಾಮಿ ಸಿಎಂ ಆಗಿದ್ದಾರೆ. ಆದರೆ, ಹಂಗಾಮಿ ಸಿಎಂ 15 ದಿನ ಮಾತ್ರ ಕಾರ್ಯ ನಿರ್ವಹಣೆ ಮಾಡಬಹುದು. ಅಷ್ಟರೊಳಗೆ ಹೊಸ ಸರ್ಕಾರ ಬಂದು ಮುಖ್ಯಮಂತ್ರಿಗಳ ಪ್ರಮಾಣವಚನ ನಡೆಯಬೇಕಿದೆ.
ರಾಷ್ಟ್ರಪತಿ ಆಡಳಿತ ಜಾರಿ?
ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ. ಆಗ 6 ತಿಂಗಳ ಬಳಿಕ ಚುನಾವಣೆ ನಡೆಸಬೇಕಾಗುತ್ತದೆ. ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಿದ ಬಿಜೆಪಿ ಸರ್ಕಾರ ರಚನೆ ಮಾಡುವುದಿಲ್ಲವೇ? ಎಂಬುದು ಸದ್ಯ ಎದ್ದಿರುವ ಪ್ರಶ್ನೆ.
ಸಂಖ್ಯಾಬಲವಿಲ್ಲ
ಈಗ ಬಿಜೆಪಿ ಸರ್ಕಾರ ರಚನೆಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಸದನದಲ್ಲಿ ಬಹುಮತ ಸಾಬೀತು ಮಾಡಬೇಕು. ಆಗ ವಿಧಾನಸಭೆಯಲ್ಲಿ ಪಕ್ಷಕ್ಕೆ 113 ಸದಸ್ಯರ ಬಲ ಬೇಕಾಗುತ್ತದೆ. ಈಗ 105 ಶಾಸಕರ ಬಲ ಮಾತ್ರ ಇದೆ. ರಾಜೀನಾಮೆ ನೀಡಿರುವ ಶಾಸಕರ ಬಗ್ಗೆ ಸ್ಪೀಕರ್ ಅಂತಿಮ ತೀರ್ಮಾನ ಕೈಗೊಳ್ಳುವ ತನಕ ಬಿಜೆಪಿ ಕಾದು ನೋಡುವುದು ಅನಿವಾರ್ಯವಾಗಿದೆ.
ಎರಡು ದಿನದಲ್ಲಿ ತೀರ್ಮಾನ
ಸೋಮವಾರದ ನಂತರ ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ. ಸ್ಪೀಕರ್ ಎರಡು ದಿನದಲ್ಲಿ ರಾಜೀನಾಮೆ ಕುರಿತು ಅಂತಿಮ ತೀರ್ಮಾನ ಕೈಗೊಂಡರೆ ಮುಂದಿನ ಎಲ್ಲಾ ಬೆಳವಣಿಗೆಗಳಿಗೆ ಚಾಲನೆ ಸಿಗಲಿದೆ.