ಇನ್ನೂ 15 ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ: ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 04: ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಆಪರೇಷನ್ ಕಮಲ ಬಿಟ್ಟಿಲ್ಲ. ಹೀಗೆಂದು ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಹೇಳಿದ್ದಾರೆ.
ಇನ್ನೂ ಹದಿನೈದು-ಇಪ್ಪತ್ತು ಮಂದಿ ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ ಎಂದು ಕುಮಾರಸ್ವಾಮಿ ಅವರು ಇಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಿಪಕ್ಷಗಳ ಶಾಸಕರಿಗೆ ಬಿಜೆಪಿಯು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಮೀಷ ಒಡ್ಡಿ ಪಕ್ಷಕ್ಕೆ ಸೆಳೆಯುವ ಯತ್ನ ಮಾಡುತ್ತಿದೆ' ಎಂದು ಅವರು ಆರೋಪಿಸಿದರು.

'ಅಧಿಕಾರಕ್ಕೆ ಬರುವ ಮುನ್ನಾ ಬಿಜೆಪಿ ಪಕ್ಷ ಏನು ಮಾಡುತ್ತಿದ್ದರು, ಈಗ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ' ಎಂದ ಕುಮಾರಸ್ವಾಮಿ, 'ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು, ಆದರೆ ಈಗ ಏನು ಮಾಡುತ್ತಿದ್ದಾರೆ?' ಎಂದು ಅವರು ಪ್ರಶ್ನೆ ಮಾಡಿದರು.
'ಪಕ್ಷದ ವಿರುದ್ಧ ನಿಂತವರನ್ನೆಲ್ಲಾ ಬಂಧಿಸುವ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ಯಾರೂ ಕಿವಿಗೆ ಹೂವು ಮುಡಿದುಕೊಂಡಿಲ್ಲ, ಯಡಿಯೂರಪ್ಪ ಮಹಾದಾಯಿ ಚರ್ಚೆ ಮಾಡಲು ಮಹಾರಾಷ್ಟ್ರಕ್ಕೆ ಹೋಗಿಲ್ಲ, ಅವರ ಉದ್ದೇಶ ಬೇರೆಯೇ ಇದೆ' ಎಂದು ಅವರು ಹೇಳಿದರು.
'ಉಪ್ಪು ತಿಂದವರು ನೀರು ಕುಡಿಯಲೇ ಬೇಕು' ಎಂದಿದ್ದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, 'ಅಶ್ವತ್ಥನಾರಾಯಣ್ ಅವರಿಂದ ನಾನು ಕಲಿಯಬೇಕಿಲ್ಲ, ಅವರ ವಿಷಯ ನನಗೆ ಗೊತ್ತಿದೆ, ಮಲ್ಲೇಶ್ವರದಲ್ಲಿ ಏನೇನು ಹಗರಣ ಮಾಡಿಟ್ಟಿದ್ದಾರೆಂದು' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications