ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಮೂರು ಪ್ರಮುಖ ಹೆಸರುಗಳು
Recommended Video
ಬೆಂಗಳೂರು, ಆಗಸ್ಟ್ 19: ಯಡಿಯೂರಪ್ಪ ಅವರು ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಲು ಹೈಕಮಾಂಡ್ ತಯಾರಿ ನಡೆಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಮೂವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಸಿಟಿ ರವಿ, ಅರವಿಂದ ಲಿಂಬಾವಳಿ, ಆರ್.ಅಶೋಕ್ ಹೆಸರುಗಳು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿವೆ. ಇದರಲ್ಲಿ ಸಿಟಿ.ರವಿ ಹೆಸರು ಮೊದಲಿಗಿದೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ ರವಿ ಆಯ್ಕೆ ಖಚಿತ!
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಚರ್ಚೆ ನಡೆಯಿತಾದರೂ, ಅವರ ಆಯ್ಕೆಯ ಬಗ್ಗೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಅವರ ಹೆಸರನ್ನು ಕೈಬಿಡಲಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.
ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ಹೆಸರು ಮುಂಚೂಣಿಯಲ್ಲಿದ್ದು, ಹಿಂದೂ ಪರ ಆಲೋಚನೆಯ, ಉತ್ತಮ ವಾಗ್ಮಿಯೂ ಆಗಿರುವ ಸಿಟಿ ರವಿ ಅವರು ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬಲ್ಲರು ಎಂಬ ಆಲೋಚನೆ ಹೈಕಮಾಂಡ್ ಇದೆ.
ಚುನಾವಣೆಗಳಲ್ಲಿ ಚೆನ್ನಾಗಿ ಕೆಲಸ ಮಾಡಿರುವ ಸಿಟಿ ರವಿ
ಈ ಹಿಂದೆ ಸಿಟಿ ರವಿ ಅವರು ತಮಿಳುನಾಡು ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದರು. ಅಷ್ಟೆ ಅಲ್ಲದೆ ಲೋಕಸಭೆ ಚುನಾವಣೆ ಸಮಯದಲ್ಲಿ ಗುಜರಾತ್ಗೆ ಹೋಗಿ ಮೋದಿ ಅವರ ಪರ ಪ್ರಚಾರ ಮಾಡಿದ್ದರು. ಲೋಕಸಭೆ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿಯೂ ಅವರು ಸಕ್ರಿಯರಾಗಿ ಕೆಲಸ ಮಾಡಿದ್ದರು. ಸಿ.ಟಿ.ರವಿ ಆಯ್ಕೆಗೆ ಆರ್ಎಸ್ಎಸ್ ಬೆಂಬಲ ಇದೆ ಎಂದೂ ಹೇಳಲಾಗುತ್ತಿದೆ.
ಅರವಿಂದ ಲಿಂಬಾವಳಿ ಆಯ್ಕೆ ಬಗ್ಗೆ ಪರಿಶೀಲನೆ
ಅರವಿಂದ ಲಿಂಬಾವಳಿ ಆಯ್ಕೆಯ ಬಗ್ಗೆಯೂ ಹೈಕಮಾಂಡ್ ಪರಿಶೀಲನೆ ನಡೆಸಿದ್ದು, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ದಲಿತರನ್ನು ಪಕ್ಷದತ್ತ ಕರೆದುಕೊಂಡು ಬರಲು ಲಿಂಬಾವಳಿ ಆಯ್ಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ಹಿಂದೆ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅವರಿಗೆ ಪಕ್ಷ ಸಂಘಟನೆಯ ಅನುಭವ ಅಷ್ಟಾಗಿ ಇಲ್ಲ ಎಂಬ ಕೊರತೆಯೊಂದು ಇದೆ.
ಸಚಿವರ ಪಟ್ಟಿ ಇಂದು ಅಂತಿಮ; ಆಕಾಂಕ್ಷಿಗಳಲ್ಲಿ ಢವ ಢವ!
ಆರ್.ಅಶೋಕ್ ಹೆಸರೂ ಮುಂಚೂಣಿಯಲ್ಲಿ
ಆರ್.ಅಶೋಕ್ ಹೆಸರು ಸಹ ಪ್ರಬಲವಾಗಿ ಕೇಳಿಬರುತ್ತಿದೆ. ಬಿಜೆಪಿಯು ಮೈತ್ರಿ ಸರ್ಕಾರವನ್ನು ಬೀಳಿಸಿ ಸರ್ಕಾರ ರಚಿಸುವ ಹಿಂದೆ ಆರ್.ಅಶೋಕ್ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅಷ್ಟೆ ಅಲ್ಲದೆ, ಲೋಕಸಭೆ ಚುನಾವಣೆ ಸಮಯದಲ್ಲಿ ಆರ್.ಅಶೋಕ್ ಮಾಡಿದ ಪ್ರಚಾರ ಕಾರ್ಯ ಹೈಕಮಾಂಡ್ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲದೆ ಆರ್.ಅಶೋಕ್ ಅವರು ಯಡಿಯೂರಪ್ಪ ಅವರ ಆಪ್ತರೂ ಆಗಿದ್ದಾರೆ.
ಬೇಡ ಎಂದಿದ್ದಾರೆ ಆರ್.ಅಶೋಕ್?
ಆದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಆರ್.ಅಶೋಕ್ ಅವರಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಆರ್.ಅಶೋಕ್ ಅವರು ರಾಜ್ಯಾಧ್ಯಕ್ಷ ಸ್ಥಾನ ಒಲ್ಲೆ ಎಂದಿದ್ದಾರಂತೆ. ಆರ್.ಅಶೋಕ್ ಡಿಸಿಎಂ ಹುದ್ದೆ ಅಥವಾ ಗೃಹ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ.