ಸಹೋದರನ ಪರ ಬಿ.ವೈ ರಾಘವೇಂದ್ರ ಬ್ಯಾಟಿಂಗ್; ಶಿಕಾರಿಪುರದಲ್ಲೇ ಬಿವೈ ವಿಜಯೇಂದ್ರ ಸ್ಪರ್ಧೆಗೆ ಪಕ್ಷಕ್ಕೆ ಮನವಿ: ಬಿ.ವೈ ರಾಘವೇಂದ್ರ
ಕೋಲಾರ, ಏಪ್ರಿಲ್ 1: ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10 ರಂದು ದಿನಾಂಕ ಪ್ರಕಟವಾಗಿದ್ದು, ರಾಜ್ಯ ವಿಧಾನಸಭಾ ಕಣ ರಂಗೇಡಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಬಿಜೆಪಿ ಮೊದಲ ಪಟ್ಟಿ ತಯಾರಿಯಲ್ಲಿದೆ.
ಈಗಾಗಲೇ ವಿಜಯೇಂದ್ರ ಸ್ವರ್ಧೆಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದು, ಶಿಕಾಇರಿಪುರ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೈಕಮಾಂಡ್ ನಾಯಕರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತುಕತೆ ನಡೆಸಿದ್ದು, ಇದೀಗ ಬಿ.ವೈ ರಾಘವೇಂದ್ರ ಸಹೋದರನ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.

ಹೌದು, ಕೋಲಾರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿಕಾರಿಪುರದಲ್ಲೇ ವಿಜಯೇಂದ್ರ ಸ್ಪರ್ಧಿಸಬೇಕೆಂದು ಎಲ್ಲಾ ಕಾರ್ಯಕರ್ತರ ಅಭಿಪ್ರಾಯ ಇದೆ. ಇಲ್ಲೇ ಸ್ಪರ್ಧೆ ಮಾಡಬೇಕು ಅಂತ ಹೇಳಿ ಪಕ್ಷಕ್ಕೆ ಕೋರಿಕೆಯನ್ನು ಸಹ ಸಲ್ಲಿಸಲಾಗಿದೆ. ಆದರೆ, ಪಕ್ಷದ ಅಧಿಕೃತ ಘೋಷಣೆಗೆ ನಾವೆಲ್ಲಾ ಕಾಯುತ್ತಾ ಇದ್ದೇವೆ ಎಂದರು.
ಇನ್ನೂ ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೈತಿಕತೆ ಇಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿದೆ. ಯಾವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಜನರಿಂದ ಮರೆಯಾಗುತ್ತಿರುವ ಕಾಂಗ್ರೆಸ್ ಪಕ್ಷ ಜನರ ಮಧ್ಯೆ ನೆನಪಿಗೋಸ್ಕರ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
2023ರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಿಸಲು ಕೋಲಾರ ಜಿಲ್ಲೆಗೆ ನನ್ನನ್ನು ನೇಮಕ ಮಾಡಿದ್ದಾರೆ. ಒಳ್ಳೆಯ ರೀತಿಯಲ್ಲಿ ತಾಲೂಕು ಮಟ್ಟದ ಸಭೆಗಳು ನಡೆದಿದ್ದು, ಒಳ್ಳೆಯ ವಾತಾವರಣ ಇದೆ. ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತಗಳಲ್ಲಿ ಒಳ್ಳೆಯ ವಾತಾವರಣ ಇದ್ದು, ಉತ್ತಮ ಪೈಪೋಟಿ ಇದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ರಾಜ್ಯ ಅಭಿವೃದ್ದಿ ಆಗ್ಬೇಕು ಎಂದರೇ ಮತ್ತೆ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಗೆ ಮುಂಬರುವ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ದೊಡ್ಡ ಕೊಡುಗೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ನಾನು ಒಬ್ಬ ಸಂಸದ ಸದಸ್ಯನಾಗಿ ಪಕ್ಷ ಕೊಟ್ಟಿರುವ ಕೆಲಸಕ್ಕೆ ಬದ್ಧನಾಗಿರುತ್ತೇನೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ತಂದೆ ಯಡಿಯೂರಪ್ಪನವರಿಗೆ ಎಲ್ಲಾ ರೀತಿಯಾದ ಆಶೀರ್ವಾದ ಮಾಡಿದಂತಹ ಕ್ಷೇತ್ರ. ನನಗೂ ಸಹ ಮೂರು ಬಾರಿ ಸಂಸದ ಸದಸ್ಯನಾಗಿ ಅಲ್ಲಿನ ಜನ ಆಶೀರ್ವಾದವನ್ನು ಮಾಡಿದ್ದಾರೆ ಎಂದರು.
ಇನ್ನು 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಸಭೆಯನ್ನು ಆಯೋಜಿಸಲಾಗಿತ್ತು. ಪ್ರತೀ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಗುಪ್ತ ಮತದಾನ ಪ್ರಕ್ರಿಯೆಯನ್ನು ಕೋಲಾರ ನಗರ ಹೊರವಲಯದ ರತ್ನ ಕನ್ವೆನ್ಷನ್ ಹಾಲ್ ನಲ್ಲಿ ನಡೆಸಲಾಯಿತು. ಆಯಾ ಕ್ಷೇತ್ರಗಳ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ವಿವಿಧ ಮೋರ್ಚಾಗಳು ತಮ್ಮ ಆಕಾಂಕ್ಷಿಗಳ ಪರವಾಗಿ ಗುಪ್ತ ಮತದಾನ ಮಾಡಿದ್ದಾರೆ ಎಂದು ಹೇಳಿದರು.












Click it and Unblock the Notifications