ಸ್ಪೀಕರ್ ಭೇಟಿಗೆ ಹೋಗಿದ್ದ ಬಿಜೆಪಿ ಶಾಸಕರ ನಿಯೋಗ ವಾಪಸ್
ಬೆಂಗಳೂರು, ಜುಲೈ 09 : ಸ್ಪೀಕರ್ ರಮೇಶ್ ಕುಮಾರ್ ಭೇಟಿಗೆ ತೆರಳಿದ್ದ ಬಿಜೆಪಿ ಶಾಸಕರ ನಿಯೋಗ ಬರಿಗೈಯಲ್ಲಿ ವಾಪಸ್ ಆಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ನಿಯೋಗ ಸ್ಪೀಕರ್ ಭೇಟಿಗೆ ತೆರಳಿತ್ತು.
ಅರವಿಂದ್ ಲಿಂಬಾವಳಿ, ಬಸವರಾಜ್ ಬೊಮ್ಮಾಯಿ, ಕುಮಾರ್ ಬಂಗಾರಪ್ಪ, ಎಸ್.ಆರ್.ವಿಶ್ವನಾಥ್, ಕೆ.ಜಿ.ಬೋಪಯ್ಯ, ಸುನೀಲ್ ಕುಮಾರ್ ಸೇರಿದಂತೆ ಇತರ ಶಾಸಕರ ನಿಯೋಗ ಸ್ಪೀಕರ್ ಭೇಟಿಗೆ ವಿಧಾನಸೌಧದ ಕಚೇರಿಗೆ ತೆರಳಿತ್ತು.
ಆದರೆ, ಕೆ.ಆರ್.ರಮೇಶ್ ಕುಮಾರ್ ಅವರು ಕಚೇರಿಯಲ್ಲಿರಲಿಲ್ಲ. ಸ್ಪೀಕರ್ ಕಚೇರಿ ಕಾರ್ಯದರ್ಶಿಗಳನ್ನು ಭೇಟಿಯಾದ ನಿಯೋಗ ವಾಪಸ್ ಆಯಿತು. ಸ್ಪೀಕರ್ ಅವರು ಇಂದು ಕಚೇರಿಗೆ ಮತ್ತೆ ಬರುವುದಿಲ್ಲ ಎಂದು ಕಾರ್ಯದರ್ಶಿಗಳು ನಿಯೋಗಕ್ಕೆ ಮಾಹಿತಿ ನೀಡಿದರು.

ಮಂಗಳವಾರ ಬೆಳಗ್ಗೆ ಕಚೇರಿಗೆ ಬಂದಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು 13 ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲನೆ ನಡೆಸಿದರು. ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಿವಾಜಿ ನಗರ ಶಾಸಕ ರೋಷನ್ ಬೇಗ್ ಭೇಟಿ ಮಾಡಿದ್ದರು.
13 ಶಾಸಕರ ರಾಜೀನಾಮೆ ಕುರಿತು ಮಧ್ಯಾಹ್ನ 2 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ರಮೇಶ್ ಕುಮಾರ್ ಅವರು ಬಳಿಕ ಕಚೇರಿಯಿಂದ ತೆರಳಿದ್ದರು. ಬಿಜೆಪಿ ನಾಯಕರ ನಿಯೋಗ ಬರುವ ಹೊತ್ತಿಗೆ ಅವರು ಕಚೇರಿಯಲ್ಲಿರಲಿಲ್ಲ.
ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ನಾಯಕರ ನಿಯೋಗ ತೆರಳಿತ್ತು. ಬುಧವಾರ ಬೆಳಗ್ಗೆ ನಿಯೋಗ ಮತ್ತೊಮ್ಮೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಬುಧವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಿದೆ.












Click it and Unblock the Notifications