'ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಫಿಕ್ಸ್'
ಬೆಂಗಳೂರು, ಸೆಪ್ಟೆಂಬರ್ 24: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ತೀರ್ಮಾನವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿದ್ದು, ಯಾವಾಗಲೂ ಸತ್ಯವೇ ಗೆಲ್ಲುತ್ತದೆ. ಕಾಂಗ್ರೆಸ್ ಭ್ರಷ್ಟಾಚಾರದ ಕೂಪ ಆಗಿದೆ. ಕಳೆದ ಹದಿನೈದು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ, ಬರೀ ಲೂಟಿಗೆ ಇಳಿದಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರದ ಕೂಪಗಳು ಬಂದಿದೆ. ಸ್ವತಃ ಮುಖ್ಯಮಂತ್ರಿಗಳು ಈ ಹಗರಣದಲ್ಲಿ ಸಿಲುಕಿ ಹಾಕಿಕೊಂಡು ಈಗ ಸಿಎಂ ವಿರುದ್ಧ ತನಿಖೆಗೆ ಅನುಮತಿ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಯಾರೇ ಮುಖ್ಯಮಂತ್ರಿ ಇದ್ದರೂ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕಾಗುತ್ತದೆ. ಆ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ. ನಾವು ವಿಧಾನ ಸಭೆ ಒಳೆಗೆ ಕೂಡ ಈ ವಿಚಾರವಾಗಿ ಅಹೋರಾತ್ರಿ ಧರಣಿ ಮಾಡಿದ್ದೇವೆ. ಯಾಕೆಂದರೆ ಅಂದು ಅನುಮತಿ ಕೊಡಲಿಲ್ಲ. ಒಂದು ವೇಳೇ ಅಂದೇ ನಮಗೆ ಅನುಮತಿ ಕೊಟ್ಟಿದ್ದರೆ ಅವತ್ತೇ ಇದು ಬಯಲಾಗುತ್ತಿತ್ತು ಎಂದರು.
ಅಂದು ಅವಕಾಶ ಕೊಡದ ಕಾರಣ ನಾವು ಅಹೋರಾತ್ರಿ ಧರಣಿ ಮಾಡಿದೆವು. ಪಾದಯಾತ್ರೆ ಮಾಡಿದೆವು. ಇಂದು ಬಂದಿರುವ ತೀರ್ಪು ಬಿಜೆಪಿಗೆ ಸಂದಿರುವ ಸ್ಪಷ್ಟವಾದ ಜಯ. ವಾಲ್ಮೀಕಿ ಹಗರದಲ್ಲಿ ಒಂದು ವಿಕೆಟ್ ಈಗಾಗಲೇ ಬಿದ್ದಿದೆ. ಇದು ಎರಡನೇ ವಿಕೆಟ್. ಈ ವಿಕೆಟ್ ಕೂಡ ಬೀಳುತ್ತದೆ. ಈ ವಿಕೆಟ್ ಬಿದ್ದರೆ ರಾಜ್ಯದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಪ್ರಾರಂಭವಾಗುತ್ತದೆ ಎಂದರು.

ಈಗಾಗಲೇ ಸಿಎಂ ರೇಸ್ಗೆ ಐದಾರು ಜನ ಟವೆಲ್ ಹಾಕಿಕೊಂಡು ಕುಳಿತಿದ್ದಾರೆ. ಇನ್ನು ಅವರು ಆ್ಯಕ್ಟವಿವ್ ಆಗುತ್ತಾರೆ. ಈ ಕ್ಷಣದಿಂದ ಆ ಐದು ಜನ ಆ್ಯಕ್ಟೀವ್ ಆಗುತ್ತಾರೆ. ಎಲ್ಲರೂ ದೆಹಲಿ ಕಡೆ ಮುಖ ಮಾಡುತ್ತಾರೆ. ಅಲ್ಲಿ ಹೋಗಿ ಲಾಭಿ ಮಾಡಿ ಸಿದ್ದರಾಮಯ್ಯನನ್ನು ಹೆಂಗೆ ಇಳಿಸೋದು ಎಂದು ಕಾಂಗ್ರೆಸ್ನಲ್ಲೇ ಲಾಭಿ ಶುರುವಾಗುತ್ತದೆ ಎಂದು ನನಗೆ ಅನಿಸುತ್ತದೆ ಎಂದು ಆರ್.ಅಶೋಕ್ ಹೇಳಿದರು.
ಕಳೆದ ನಾಲ್ಕೈದು ತಿಂಗಳಿಂದ ಹಲವಾರು ದಾಖಲೆಗಳನ್ನು ಮೂಡದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಆಫೀಸ್ಗಳಲ್ಲಿ ದಾಖಲೆಗಳನ್ನು ತೆಗೆಯಲಾಗಿದೆ. ಒಬ್ಬ ರಾಜ್ಯದ ಮುಖ್ಯಮಂತ್ರಿಗೆ ಈ ದಾಖಲೆಗಳನ್ನು ತೆಗೆಸಿದವರು ಯಾರು ಅಂತಾ ಅರ್ಥನೇ ಆಗಿಲ್ಲ. ದಾಖಲೆಗಳನ್ನು ತೆಗೆಯುವವರೆಗೂ ಅಲ್ಲಿನ ಜಿಲ್ಲಾ ಮಂತ್ರಿ ಏನು ಮಾಡುತ್ತಿದ್ದರು. ಸರ್ಕಾರ ಇದ್ದಾಗ ಅವರ ಪಕ್ಷಕ್ಕೇ ದಾಖಲೆ ಬೇಗ ಸಿಗುವುದು ಹಾಗಿದ್ದಾಗ ಸಿದ್ದರಾಮಯ್ಯ ವಿರುದ್ಧ ದಾಖಲೆ ಕೊಟ್ಟವರು ಯಾರು..? ಇದು ಸಿದ್ದರಾಮಯ್ಯ ಅವರಿಗೆ ಅರ್ಥವಾಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.












Click it and Unblock the Notifications