ಬಿಜೆಪಿಯಲ್ಲಿನ ಭಿನ್ನಮತ ಶೀಘ್ರವೇ ಶಮನ: ಶಾಸಕ ಓಲೇಕಾರ್ ಆರೋಪಕ್ಕೆ ದಾಖಲೆ ನೀಡಲಿ: ಬೊಮ್ಮಾಯಿ ಸವಾಲ್
ಮಂಗಳೂರು, ಏಪ್ರಿಲ್ 13: ಟಿಕೆಟ್ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅಂತಹ ಅಸಮಾಧಾನಗೊಂಡ ನಾಯಕರ ಜೊತೆ ಪಕ್ಷದ ಹಿರಿಯ ನಾಯಕರು ಚರ್ಚಿಸುತ್ತಿದ್ದಾರೆ. ಭಿನ್ನಮತ ಎಲ್ಲವು ಶಮನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನೆನ್ನೆಯಷ್ಟೇ (ಬುಧವಾರ) ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 12 ವಿಧಾನಸಭಾ ಕ್ಷೇತ್ರಗಳು ಹೆಸರು ಘೋಷಣೆ ಬಾಕಿ ಇದೆ. ಕೆಲವೆಡೆ ಆಕಾಂಕ್ಷಿಗಳು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ರಾಜಕಾರಣ ಪಕ್ಷಾಂತರ ಸಹಜ ಎಂದ ಸಿಎಂ
ರಾಜಕೀಯ ಜೀವನದಲ್ಲಿ ಪಕ್ಷ ಬದಲಿಸುವುದು ಸಹಜವಾದದ್ದು. ಆಗಾಗ ಆಗುತ್ತಲೇ ಇರುತ್ತದೆ. ಅಸಮಾಧಾನಗೊಂಡ ನಾಯಕರ ಮನವೊಲಿಕೆ ಮಾಡುತ್ತೇವೆ. ಪಕ್ಷದಲ್ಲಿ ಎದ್ದಿರುವ ಅಸಮಾಧಾನವನ್ನು ಶೀಘ್ರವೇ ಸರಿಪಡಿಸಲಾಗುತ್ತದೆ. ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಹೀಗಾಗಿ ಪಕ್ಷದಲ್ಲಿ ಯಾವುದೇ ಹಾನಿಯಾಗುವುದಿಲ್ಲ. ಬಹುತೇಕ ಕಡೆ ಪಕ್ಷದ ಭಿನ್ನಮತ ಶಮನ ಆಗಲಿದೆ ಎಂದು ಅವರು ವಿವರಿಸಿದರು.
ಪಕ್ಷದ ಹಿರಿಯ ಜೊತೆಗೆ ನಾನು ಹಾಗೂ ಬಿಜೆಪಿ ಹೈಕಮಾಂಡ್ ಜೊತೆಗೆ ಮಾತಾಡುತ್ತಿದ್ದೇವೆ. ಮಾಜಿ ಸಚಿವ ಲಕ್ಷ್ಮಣ ಸವದಿ ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಶಾಸಕರು ಆರೋಪ ಸಾಬೀತು ಮಾಡಲಿ: ಸಿಎಂ ಸವಾಲ್
ಬಿಜೆಪಿಯಲ್ಲಿನ ಅಸಮಾಧಾನಿತರ ಜತೆ ಹೈಕಮಾಂಡ್ ನಾಯಕರು ಸಹ ಮಾತನಾಡುತ್ತಿದ್ದಾರೆ. ನಾನು ಹಲವು ನಾಯಕರ ಜೊತೆಗೆ ಸಂಪರ್ಕದಲ್ಲಿದ್ದೇನೆ. ಭಿನ್ನಮತ ಹೀಗೆ ಉಳಿಯುವುದಿಲ್ಲ ಎಲ್ಲವೂ ಬಗೆಹರಿಯುತ್ತದೆ.
ಲಕ್ಷ್ಮಣ ಸವದಿ ಹಿರಿಯರು, ಸುಧೀರ್ಘ ರಾಜಕೀಯದಲ್ಲಿದ್ದಾರೆ. ಸವದಿಗೆ ಜನರಿಂದಲೂ ಒತ್ತಡ ಇದೆ ಎಂಬುದ ನನಗೆ ಗೊತ್ತು. ಸ್ವಲ್ಪ ಸಮಯ ಬೇಕಾಗಬಹುದು ಎಂದು ತಿಳಿಸಿದರು. ಹಾವೇರಿ ಶಾಸಕ ನೆಹರು ಓಲೇಕಾರ್ ಯಾವ ಆರೋಪ ಬೇಕಾದರೂ ಮಾಡಲಿ. ದಾಖಲೆ ಸಹಿತ ಅವರು ತಾವು ಮಾಡಿದ 1,500 ಕೋಟಿ ಆರೋಪವನ್ನು ಸಾಬೀತು ಮಾಡಲಿ. ಕೇವಲ ಹೇಳಿಕೆ ಬೇಡ. ದಾಖಲೆಗಳು ಇದ್ದರೆ ಸಲ್ಲಿಸಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಲ್ಲ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಕಾಂಗ್ರೆಸ್ ನವರಿಗೆ 60ರಿಂದ 65 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಈಗ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿ ಕೊರತೆ ಇದೆ. ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಿಎಂ ಬೊಮ್ಮಾಯಿ ಮೇಲೆ ಓಲೇಕಾರ್ ಗಂಭೀರ ಆರೋಪ
ಸ್ವಕ್ಷೇತ್ರ ಹಾವೇರಿಯ ಟಿಕೆಟ್ ಕೈತಪ್ಪಿದ್ದಕ್ಕೆ ಶಾಸಕ ನೆಹರೂ ಓಲೆಕಾರ್ ಆಕ್ರೋಶಗೊಂಡಿದ್ದಾರೆ. ನನಗೆ ಟಿಕೆಟ್ ಕೆತಪ್ಪಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲಾದ್ಯಕ್ಷ ಸಿದ್ದರಾಜ್ ಅವರು ಕಾರಣ. ವೈಯಕ್ತಿಕವಾಗಿ ದ್ವೇಷ ಸಾಧಿಸಲು ಬಂದಿದ್ದ ಅವರು ನನ್ನ ಬೆಳವಣಿಗೆ ನೋಡಲಾಗದೇ ಹೀಗೆಇ ಟಿಕೆಟ್ ತಪ್ಪುವುಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಸದ್ಯ ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ಪಡೆದ ಬಿಜೆಪಿ ಅಭ್ಯರ್ಥಿ (ಗೋವಿಂದಪ್ಪ ದ್ಯಾಮಣ್ಣನವರ) ಅವರು ಎಂದು ಕೂಡ ಸಾರ್ವಜನಿಕರ ಜೊತೆ ಬೆರತಿಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡಿದನ್ನು ನೋಡಿಯೇ ಇಲ್ಲ ಎಂದು ಶಾಸಕರು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಇವರನ್ನು ಬಳಸಿಕೊಂಡಿದ್ದಾರೆ. ಇನ್ನು ಹಾವೇರಿ ಜಿಲ್ಲಾದ್ಯಕ್ಷ ಸಿದ್ದರಾಜ್ ಅವರು ಸಹ ಕಾರಣ ಎಂದಿದ್ದಾರೆ.
ಸಾಲದೆಂಬಂತೆ ಮುಖ್ಯಮಂತ್ರಿಗಳ ವಿರುದ್ಧ ಏಕವಚನದಲ್ಲೇ ಮಾತನಾಡಿದ ಅವರು, 1,500 ಕೋಟಿ ರೂಪಾಯಿ ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು ಆರೋಪವನ್ನು ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.












Click it and Unblock the Notifications