ಬಿಜೆಪಿ ಪ್ರಭಾರಿಗಳ ಪಟ್ಟಿ: ವರಿಷ್ಠರಿಂದ ಅಶೋಕ್, ಶ್ರೀರಾಮುಲುಗೆ ಸ್ಪಷ್ಟ ಸಂದೇಶ ರವಾನೆ
Recommended Video

ಇನ್ನೈದು ತಿಂಗಳಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ವರಿಷ್ಠರು, 28 ಲೋಕಸಭಾ ಕ್ಷೇತ್ರಗಳಿಗೆ ಪ್ರಭಾರಿ ಮತ್ತು ಸಂಚಾಲಕರನ್ನು ನೇಮಿಸಿದೆ. ಜೊತೆಗೆ, ಬಿಡುಗಡೆ ಮಾಡಿರುವ ಪಟ್ಟಿಯ ಮೂಲಕ ರಾಜ್ಯದ ಮುಖಂಡರಿಗೆ ಹಲವು ಸಂದೇಶವನ್ನೂ ರವಾನಿಸಿದೆ.
ರಾಜ್ಯದಲ್ಲಿ, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿರುವುದರಿಂದ, ಮುಂಜಾಗೃತಾ ಕ್ರಮವಾಗಿ, ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದರೂ, ಪಕ್ಷವನ್ನು ಬಲಪಡಿಸಲು ಈಗಿಂದೀಗಲೇ ಬಿಜೆಪಿ ತಯಾರು ನಡೆಸುತ್ತಿದೆ.
ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ನಡುವೆಯೂ, ರಾಜ್ಯದಲ್ಲಿ ಬಿಜೆಪಿ ಪ್ರಭಾರಿಗಳನ್ನು ನೇಮಿಸುವ ಮೂಲಕ, ಮೈತ್ರಿಯಿಂದಾಗಿ, ಮುಂದೆ ಎದುರಾಗಬಹುದಾದ ಕಠಿಣ ಸ್ಪರ್ಧೆಯ ಬಗ್ಗೆ ಅಮಿತ್ ಶಾ, ರಾಜಕೀಯ ಲೆಕ್ಕಾಚಾರ ಹಾಕಿರುವುದು ಸ್ಪಷ್ಟವಾಗುತ್ತಿದೆ.
ಪಟ್ಟಿ ಬಿಡುಗಡೆಯ ಜೊತೆಗೆ, ರಾಜ್ಯದ ಸಂಸದರ ಮೌಲ್ಯಮಾಪನವನ್ನೂ ಅಮಿತ್ ಶಾ ಆರಂಭಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಂಲಾಲ್ ನೇತೃತ್ವದಲ್ಲಿ ಈ ಪ್ರಕ್ರಿಯ ಆರಂಭವಾಗಿದೆ. ಕೆಲವು ಮಾನದಂಡವನ್ನು ವರಿಷ್ಠರು ಇದಕ್ಕಾಗಿ ಸಿದ್ದಪಡಿಸಿದ್ದಾರೆ.
ರಾಂಲಾಲ್ ನೀಡುವ ವರದಿಯನ್ನು ಆಧರಿಸಿ, ಮುಂಬರುವ ಚುನಾವಣೆಗೆ ಟಿಕೆಟ್ ನೀಡಬೇಕೇ, ಬೇಡವೇ ಎಂದು ನಿರ್ಧರಿಸಲಾಗುತ್ತದೆ ಎನ್ನುವ ಮಾಹಿತಿಯಿದೆ. ಪ್ರಭಾರಿ, ಸಂಚಾಲಕರ ಪಟ್ಟಿ ಬಿಡುಗಡೆಯ ಮೂಲಕ, ಅಶೋಕ್ ಮತ್ತು ಶ್ರೀರಾಮುಲುಗೆ ವರಿಷ್ಠರ ಸಂದೇಶ, ಮುಂದೆ ಓದಿ

ಉಪಚುನಾವಣೆಯ ಸೋಲಿನ ಹಿನ್ನಲೆ
ಬಳ್ಳಾರಿ ಕ್ಷೇತ್ರದ ಉಸ್ತುವಾರಿಯಾಗಿದ್ದ ಬಿ ಶ್ರೀರಾಮುಲುಗೆ ಆ ಕ್ಷೇತ್ರದಿಂದ ಕೊಕ್ ನೀಡಲಾಗಿದೆ. ಉಪಚುನಾವಣೆಯ ಸೋಲಿನ ಹಿನ್ನಲೆಯಲ್ಲಿ ಅವರಿಗೆ ಉಸ್ತುವಾರಿ ತಪ್ಪಿಸಲಾಗಿದೆ ಎನ್ನುವ ಮಾಹಿತಿಯಿದೆ. ರಾಮುಲು ಕಳೆದ ಲೋಕಸಭಾ (2014) ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ 85,144 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಎದುರು 2.4ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿತ್ತು.

ಕೊಪ್ಪಳ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ
ಶ್ರೀರಾಮುಲುಗೆ ಬಳ್ಳಾರಿಯಿಂದ ಕೊಕ್ ನೀಡಿ, ಕೊಪ್ಪಳ ಕ್ಷೇತ್ರದ ಉಸ್ತುವಾರಿಯನ್ನು ನೀಡಲಾಗಿದೆ. ಇದಕ್ಕೆ ಬಲವಾದ ಕಾರಣ, ಬಿಜೆಪಿ ವರಿಷ್ಠರಿಗೆ ಇರುವುದೇನಂದರೆ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಮತ್ತು ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯನವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಈ ಕ್ಷೇತ್ರದಿಂದ ಗೆದ್ದಿದ್ದರು.

ಜೆಡಿಎಸ್ ವರಿಷ್ಠ ದೇವೇಗೌಡರೂ ಅದನ್ನೇ ಬಯಸುತ್ತಿದ್ದಾರೆ
ಸಿದ್ದರಾಮಯ್ಯ, ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಉತ್ಸುಕರಾಗಿಲ್ಲದಿದ್ದರೂ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹೇರುವ ಸಾಧ್ಯತೆಯಿದೆ. ರಾಜ್ಯದ ಸಮ್ಮಿಶ್ರ ಸರಕಾರದ ಹಲವು ಮುಖಂಡರಿಗೆ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರೂ ಅದನ್ನೇ ಬಯಸುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, ಸಿದ್ದರಾಮಯ್ಯ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆಯೂ ಸುದ್ದಿ ಚಾಲ್ತಿಯಲ್ಲಿದೆ.

ತೇಜಸ್ವಿನಿ ಅನಂತ್ ಕುಮಾರ್ ಮತ್ತು ಆರ್ ಅಶೋಕ್
ಅನಂತ್ ಕುಮಾರ್ ಅವರ ನಿಧನದ ನಂತರ, ಬಿಜೆಪಿ ಪಾಲಿನ ಭದ್ರಕೋಟೆ, ಬೆಂಗಳೂರು ದಕ್ಷಿಣಕ್ಕೆ ಪಕ್ಷದ ಅಭ್ಯರ್ಥಿಯಾರು ಎನ್ನುವ ಹೆಸರು ಬಂದಾಗ, ತೇಜಸ್ವಿನಿ ಅನಂತ್ ಕುಮಾರ್ ಮತ್ತು ಆರ್ ಅಶೋಕ್ ಅವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು. ಈಗ, ಬೆಂಗಳೂರು ದಕ್ಷಿಣಕ್ಕೆ ಪ್ರಭಾರಿಯನ್ನಾಗಿ ಸುಬ್ಬನರಸಿಂಹ ಮತ್ತು ಸಂಚಾಲಕರಾಗಿ ಆರ್ ಅಶೋಕ್ ಅವರನ್ನು ನೇಮಿಸಲಾಗಿದೆ. ಇದರಿಂದ, ಅಶೋಕ್ ಅವರು ಇಲ್ಲಿಂದ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಕಮ್ಮಿ ಎನ್ನುವ ಸಂದೇಶವನ್ನು ಅಮಿತ್ ಶಾ ರವಾನಿಸಿದ್ದಾರೆ.

ತೇಜಸ್ವಿನಿ ಅನಂತ್ ಕುಮಾರ್, ಬಿಜೆಪಿಯ ಅಭ್ಯರ್ಥಿ
ಬಳ್ಳಾರಿ ಕ್ಷೇತ್ರದ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ನೇಮಿಸಲಾಗಿದೆ. ಕೊಪ್ಪಳದ ಉಸ್ತುವಾರಿಯನ್ನು ನೀಡಿರುವ ರಾಮುಲುಗೆ ನೀಡಿರುವ ಅಮಿತ್ ಶಾ, ಈಗಿಂದೀಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಸೂಚನೆ ನೀಡಿದ್ದಾರೆ. ಬೆಂಗಳೂರು ದಕ್ಷಿಣಕ್ಕೆ ಅಶೋಕ್ ಅವರನ್ನು ಪ್ರಭಾರಿಯನ್ನಾಗಿ ನೇಮಿಸುವ ಮೂಲಕ, ತೇಜಸ್ವಿನಿ ಅನಂತ್ ಕುಮಾರ್, ಬಿಜೆಪಿಯ ಅಭ್ಯರ್ಥಿಯಾದರೂ ಆಗಬಹುದು. ಆ ಮೂಲಕ, ಬಳ್ಳಾರಿಗೆ ಸೀಮಿತವಾಗಿ ರಾಜಕೀಯ ಮಾಡಿಕೊಂಡು ಇರಬೇಡಿ ಎನ್ನುವ ಸಂದೇಶವನ್ನು ರಾಮುಲುಗೆ ರವಾನಿಸಿದಂತಿದೆ.












Click it and Unblock the Notifications