ಒಂದು ವರ್ಷ ಮುಚ್ಚಲಿರುವ ರಂಗನಾಥಸ್ವಾಮಿ ದೇವಾಲಯ
ಪುರಾಣ ಪ್ರಸಿದ್ದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯವನ್ನು ಮಾರ್ಚ್ 18ರಿಂದ ಒಂದು ವರ್ಷಕ್ಕೂ ಹೆಚ್ಚುಕಾಲ ಮುಚ್ಚಲಾಗುತ್ತಿದೆ.
ಚಾಮರಾಜನಗರ ಮಾ 5: ಚಾಮರಾಜನಗರ ಜಿಲ್ಲೆ, ಯಳಂದೂರು ತಾಲೂಕಿನ ಪುರಾಣ ಪ್ರಸಿದ್ದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯವನ್ನು ಮಾರ್ಚ್ 18ರಿಂದ ಒಂದು ವರ್ಷಕ್ಕೂ ಹೆಚ್ಚುಕಾಲ ಮುಚ್ಚಲಾಗುತ್ತಿದೆ.
ಸುಮಾರು ಐದು ಶತಮಾನಗಳ ಇತಿಹಾಸವಿರುವ ನಾಡಿನ ಪ್ರಸಿದ್ದ ಧಾರ್ಮಿಕ ಕೇಂದ್ರ ಬಿಳಿಗಿರಿರಂಗನ ಬೆಟ್ಟದ ರಂಗನಾಥಸ್ವಾಮಿ ದೇವಾಲಯವನ್ನು ಜೀರ್ಣೋದ್ದಾರಕ್ಕಾಗಿ ಕನಿಷ್ಠ ಒಂದು ವರ್ಷ ಮುಚ್ಚಲಾಗುತ್ತಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. (ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ)

ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯ ಇದಾಗಿದ್ದು, ಪುರಾತತ್ವ ಇಲಾಖೆಯಿಂದ 240 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿರುವ ಹಿನ್ನಲೆಯಲ್ಲಿ, ಗರ್ಭಗುಡಿ ಒಂದನ್ನು ಬಿಟ್ಟು ದೇವಾಲಯಕ್ಕೆ ಹೊಸ ರೂಪ ತರುವ ಕೆಲಸ ಆರಂಭವಾಗಲಿದೆ.
ಮೂಲ ದೇವರು ಇರುವ ಗರ್ಭಗುಡಿಯನ್ನು ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಗಿದೆ. ಮಾರ್ಚ್ ಹದಿನೈದರಿಂದ ಮೂರು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ಇದಾದ ನಂತರ ಒಂದು ವರ್ಷ ಬೆಟ್ಟದಲ್ಲಿ ಯಾವುದೇ ಜಾತ್ರೆ ಅಥವಾ ಯಾವುದೇ ರೀತಿಯಾದ ಧಾರ್ಮಿಕ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.












Click it and Unblock the Notifications