Cauvery Dispute: ಕಾವೇರಿ ನಮ್ಮವಳು ಬೆಂಗಳೂರಿಗರೇ ಎದ್ದೇಳಿ!
ಕಾವೇರಿ ಕೇವಲ ನದಿ ಅಲ್ಲ ಕೋಟ್ಯಂತರ ಕನ್ನಡಿಗರ ಜೀವ ಕಾಪಾಡುವ ದೇವತೆ. ಕನ್ನಡ ನಾಡು ಮಾತ್ರವಲ್ಲ, ನಮ್ಮ ನೆರೆಯ ತಮಿಳುನಾಡು ಕೂಡ ಕಾವೇರಿ ನದಿಯನ್ನೇ ನಂಬಿದೆ ಹಾಗೂ ನಂಬಿ ಬದುಕುತ್ತಿದೆ. ಆದರೆ ಕೃಷಿ ಉದ್ದೇಶಕ್ಕೆ ಹೆಚ್ಚಿನ ಪ್ರಮಾಣದ ನೀರು ಬಳಸಿ, ಇದೀಗ ಕನ್ನಡ ನಾಡಿನ ಕುಡಿಯುವ ನೀರಿಗೂ ಕೈಹಾಕಿದೆ. ಹಾಗಾದರೆ ಈ ಸಮಯದಲ್ಲಿ ಬೆಂಗಳೂರಿನ ಪರಭಾಷಿಕರು ಸೈಲೆಂಟ್ ಆಗಿರೋದು ಸರಿನಾ? ಬನ್ನಿ ತಿಳಿಯೋಣ.
ಬೆಂಗಳೂರು ಅದೆಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ, ಕಳೆದ 15 ವರ್ಷಗಳ ಹಿಂದೆ ಹಳ್ಳಿ ಮತ್ತು ಕಾಡಿನ ರೂಪದಲ್ಲಿದ್ದ ಜಾಗಗಳು ಈಗ ಝಗಮಗಿಸುತ್ತಿವೆ. ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಇವಿಷ್ಟೇ ಅಲ್ಲ ಉತ್ತರ ಭಾರತದ ಪಶ್ಚಿಮ ಬಂಗಾಳವು ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದು ಹತ್ತಾರು ಲಕ್ಷ ಜನ ಬೆಂಗಳೂರಲ್ಲಿ ನೆಲೆಸಿದ್ದಾರೆ. ಅದ್ರಲ್ಲೂ ಈಗ ಕಾವೇರಿ ನೀರಿಗಾಗಿ ಕಿರಿಕ್ ಶುರುವಾಗಿರುವ ತಮಿಳುನಾಡಿನ ನೆಲದಿಂದಲೂ ಲಕ್ಷಾಂತರ ತಮಿಳು ಭಾಷಿಗರು ಬೆಂಗಳೂರಲ್ಲಿ ನೆಲೆಸಿದ್ದಾರೆ. ಆದರೆ ಇವರು ಈಗ ಸುಮ್ಮನೆ ಇರುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನ ಜನ ಕೇಳುತ್ತಿದ್ದಾರೆ.

ಭಾಷೆ ಮರೆತು ಹೋರಾಡಿ ಬೆಂಗಳೂರಿಗರೇ!
ಬೆಂಗಳೂರು ಕರ್ನಾಟಕದ ರಾಜಧಾನಿ ಆಗಿದ್ದರೂ, ಹತ್ತಾರು ಭಾಷೆ ಮಾತಾಡುವ ಜನರು ನಮ್ಮಲ್ಲಿದ್ದಾರೆ. ಅದರಲ್ಲೂ 40-50 ವರ್ಷದಿಂದ ಕರ್ನಾಟಕದಲ್ಲಿ ಮುಖ್ಯವಾಗಿ ರಾಜಧಾನಿ ಬೆಂಗಳೂರಲ್ಲೇ ಲಕ್ಷಾಂತರ ತಮಿಳು ಭಾಷಿಗರು ವಾಸ ಮಾಡ್ತಿದ್ದಾರೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಇದನ್ನ ಅರ್ಥ ಮಾಡಿಕೊಳ್ಳದೆ ನೀರಿಗೆ ಕಿರಿಕ್ ತೆಗೆದಿದೆ. ಕನ್ನಡ-ತಮಿಳು ಭಾಷಿಕರು ಸಹೋದರರ ರೀತಿ ಬಾಳುವಾಗ ಮತ್ತೆ ಕೊಳ್ಳಿ ಇಡುವ ಕೆಲಸ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ದಕ್ಷಿಣ ಭಾರತದ ಒಗ್ಗಟ್ಟಿನ ಬಗ್ಗೆ ಸದಾ ಭಾಷಣ ಮಾಡುವ ನೆರೆಯ ತಮಿಳುನಾಡು ರಾಜಕಾರಣಿಗಳು, ಇದೀಗ ಕಾವೇರಿ ಕಿರಿಕ್ ಮೂಲಕ ಒಗ್ಗಟ್ಟು ಹೊಡೆದು ಹೋಗುವುದನ್ನು ನೋಡಿ ಸುಮ್ಮನಿದ್ದಾರೆ. ಅದರಲ್ಲೂ ಉತ್ತರ ಭಾರತದ ಮಂದಿಗೆ ಕನ್ನಡ & ತಮಿಳುನಾಡು ರಾಜ್ಯಗಳ ಕಾವೇರಿ ನೀರಿನ ಕಿತ್ತಾಟವು ಸೋಜಿಗದಂತೆ ಕಾಣುತ್ತಿದೆ. ಅವರಿಗೆ ಪರಿಸ್ಥಿತಿ ಅರ್ಥ ಆಗುತ್ತಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಏಕೆಂದರೆ ಬರೀ ಹಿಮನದಿಗಳ ತಾಣವಾದ ಉತ್ತರ ಭಾರತದಲ್ಲಿ ವರ್ಷದ 365 ದಿನವೂ ನೀರು ಸಿಗುತ್ತದೆ. ಆದರೆ ದಕ್ಷಿಣ ಭಾರತದ ಪರಿಸ್ಥಿತಿ ಹೀಗೆ ಇಲ್ಲವಲ್ಲ, ಮಳೆಯನ್ನೇ ನಂಬಿ ಬದುಕಬೇಕು.
ಇಲ್ಲಿನ ನೀರು ಬೇಕು.. ಉಸಿರು ಎತ್ತಲ್ಲ!
ಬೇರೆ ಎಲ್ಲಾ ವಿಚಾರ ಪಕ್ಕಕ್ಕೆ ಇಡಿ, ಮಾತು ಎತ್ತಿದರೆ ಬೆಂಗಳೂರು ಹಾಗೂ ಬೆಂಗಳೂರಿಗರ ಮೇಲೆ ಆರೋಪ ಮಾಡುವ ಉತ್ತರ ಭಾರತ ಮೂಲದ ಬೆಂಗಳೂರು ನಿವಾಸಿಗಳು ಕಾವೇರಿ ವಿಚಾರದಲ್ಲಿ ಸೈಲೆಂಟ್ ಏಕೆ? ಸಣ್ಣಪುಟ್ಟ ವಿಚಾರಕ್ಕೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಇವರು, ಈಗ ಬೆಂಗಳೂರಿಗೆ ನೀರು ಪೂರೈಸುವ ಕೆಆರ್ಎಸ್ ಡ್ಯಾಂ ಖಾಲಿ ಆಗುತ್ತಿದ್ದರೂ ಸೈಲೆಂಟ್ ಆಗಿದ್ದಾರೆ ಏಕೆ? ಎಂಬ ಪ್ರಶ್ನೆ ಮೂಡಿದೆ.

ಕನ್ನಡ ನಾಡಿನ ರೈತರು ಬೀದಿಗೆ
ಅದರಲ್ಲೂ ಪಶ್ಚಿಮ ಬಂಗಾಳ, ದೆಹಲಿಯ ಅತಿಹೆಚ್ಚು ಜನ ಬೆಂಗಳೂರಿನಲ್ಲಿ ವಾಸವಿದ್ದು, ಯಾರೂ ಉಸಿರು ಬಿಡುತ್ತಿಲ್ಲ. ಅಕಸ್ಮಾತ್ ಜೋರಾಗಿ ಮಳೆ ಬಂತು ಅಂತಾ ಹೇಳಿ, ಆಗ ಬೆಂಗಳೂರು ಮುಳುಗುತ್ತಿದೆ ಎಂಬ ಮೇಮೆ ಪೋಸ್ಟ್ ಮಾಡಿ ನಕ್ಕುಬಿಡುತ್ತಾರೆ. ಜೋರಾಗಿ ಮಳೆ ಬಂದರೆ ಬೆಂಗಳೂರು ಮಾತ್ರವಲ್ಲ, ಲಂಡನ್ ಕೂಡ ಮುಳುಗಿ ಹೋಗುತ್ತದೆ ಎಂಬ ಸತ್ಯ ಅವರಿಗೆ ಗೊತ್ತಿಲ್ಲವೇನೋ ಪಾಪ. ಆದರೆ ಕನ್ನಡ ನಾಡಿನಿಂದ ಇಷ್ಟೆಲ್ಲಾ ಸೌಲಭ್ಯ ಪಡೆಯುವ ಇವರು ಕಾವೇರಿ ವಿಚಾರದಲ್ಲಿ ಉಸಿರು ಬಿಡದಿರುವುದು ಕನ್ನಡಿಗರ ಆಕ್ರೋಶ ಮೊಳಗುವಂತೆ ಮಾಡಿದೆ. ಬೆಂಗಳೂರಿಗೆ ನೀರು ಕೊಟ್ಟು ರೈತರು ಪರದಾಡುವಂತಾಗಿದೆ.
ನೀರು ಬೇಕು, ಮಾತು ಬೇಡ್ವಾ?
ಹೌದು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಪದೇ ಪದೆ ಬೆಂಗಳೂರು ನಿವಾಸಿಗಳ ಮೌನ ಪ್ರಶ್ನೆ ಮಾಡಿದ್ದಾರೆ. ಅದರಲ್ಲೂ ಬೆಂಗಳೂರಿನ ಕನ್ನಡಿಗರನ್ನು ಬಿಟ್ಟು, ಪರಭಾಷಿಕರು ಈ ವಿಚಾರದಲ್ಲಿ ಸೈಲೆಂಟ್ ಆಗಿರೋದು ಯಾಕೆ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಇಲ್ಲಿ ಬೆಂಗಳೂರಲ್ಲಿ ಕಾವೇರಿ ನೀರು ಕುಡಿಯುತ್ತಾ ಇರೋದು ಕನ್ನಡಿಗರು ಮಾತ್ರನಾ? ಹಾಗಾದ್ರೆ ಬೆಂಗಳೂರಿನಲ್ಲಿ ವಾಸ ಇರುವ ಹತ್ತಾರು ಲಕ್ಷ ಪರಭಾಷಿಕರು ಏನು ಬಳಸುತ್ತಾರೆ? ಕಾವೇರಿ ನೀರನ್ನು ಬಿಟ್ಟರೆ ಬೆಂಗಳೂರಿನಲ್ಲಿ ಭೀಕರ ಕ್ಷಾಮವೇ ಸೃಷ್ಟಿಯಾಗುತ್ತದೆ.
ಭಾಷೆ ಮರೆತು ಬೆಂಗಳೂರಿಗಾಗಿ ಹೋರಾಡಿ
ನೀರು ಎಲ್ಲರಿಗೂ ತಾಯಿ, ನೀರು ಇಲ್ಲದೆ ಮನುಷ್ಯ ಬಿಡಿ ಭೂಮಿ ಮೇಲೆ ಯಾವ ಜೀವಿ ಕೂಡ ಬದಕಲು ಆಗದು. ಆದರೆ ಈಗ ತಮಿಳುನಾಡು ಸರ್ಕಾರ ಮಾಡಿಕೊಂಡ ಎಡವಟ್ಟು ಕನ್ನಡ ನಾಡಿನ ಮೇಲೆ ಪರಿಣಾಮ ಉಂಟುಮಾಡಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಬರದ ಕೂಪದಲ್ಲಿ ಪರದಾಡುವ ಸೂಚನೆ ಸಿಕ್ಕಿದೆ. ಹೀಗಾಗಿ ಸಣ್ಣಪುಟ್ಟ ರಸ್ತೆ ವಿಚಾರಗಳಿಗೆ ಮತ್ತು ಮೋರಿ, ಗುಂಡಿಗಳ ವಿಚಾರದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಪರಭಾಷೆ ಹಾಗೂ ಪರ ರಾಜ್ಯದ ಬೆಂಗಳೂರಿಗರು ಕಾವೇರಿಗಾಗಿ ಧ್ವನಿ ಎತ್ತಬೇಕಿದೆ. ಏಕೆಂದರೆ ಕಾವೇರಿ ಕನ್ನಡಿಗರಿಗೆ ಮಾತ್ರ ದೇವರಲ್ಲ, ನಿಮಗೂ ದೇವರು ಅಂತಿದ್ದಾರೆ ಕನ್ನಡಿಗರು.

400 ಟಿಎಂಸಿ ನೀರು ವೇಸ್ಟ್!
ಕಳೆದ ವರ್ಷ ಅಂದರೆ 2022ರ ಮಳೆಗಾಲದಲ್ಲಿ ತಮಿಳುನಾಡಿನ ಜಲಾಶಯಕ್ಕೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಕಾವೇರಿ ನದಿ ನೀರು ಸಮುದ್ರ ಸೇರಿದೆ. ಮುಂಗಾರು ಮಳೆ ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ನೀರನ್ನ ಹೊರಬಿಡಲಾಗಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿ ಆಗಿದೆ. ಇಷ್ಟೆಲ್ಲ ನೀರನ್ನ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರು ಬೇಕು ಅಂತಾ ತಮಿಳುನಾಡು ಸರ್ಕಾರ ಕಿರಿಕ್ ಶುರುಮಾಡಿದೆ.
ಬರದಲ್ಲಿ ಬೆಂದ ಕಾವೇರಿ ಕೊಳ್ಳ
ಕಾವೇರಿ ಕೊಳ್ಳದ ಸ್ಥಿತಿ ಭೀಕರವಾಗಿದ್ರೂ ನೀರು ಬಿಡಲು ತಮಿಳುನಾಡು ಕರ್ನಾಟಕದ ಮೇಲೆ ಒತ್ತಡ ಹೇರಿದೆ. ಸರಿಯಾಗಿ ಮಳೆ ಬಾರದಿದ್ದರೆ ಎಲ್ಲಿಂದ ನೀರು ಬಿಡಲು ಆಗುತ್ತೆ? ಈಗಾಗಲೇ ತಮಿಳುನಾಡು ಸರ್ಕಾರ ಮೆಟ್ಟೂರು ಜಲಾಶಯದಲ್ಲಿದ್ದ ನೀರು ಬೇಕಾಬಿಟ್ಟಿ ಖರ್ಚು ಮಾಡಿದೆ. ಈಗ ನಮ್ಮ ಮೇಲೆ ಒತ್ತಡ ಹಾಕಿ ನೀರು ಕಿತ್ತುಕೊಳ್ಳುತ್ತಿದೆ ಎಂಬ ಆರೋಪ ರಾಜ್ಯದ ರೈತರದ್ದು. ಕಾವೇರಿ ನದಿ ನೀರಿನ ವಿಚಾರಕ್ಕೆ ರೈತರು & ಕನ್ನಡಿಗರು ಮಾತ್ರ ಪ್ರತಿಭಟನೆ ನಡೆಸಬೇಕಾ? ಎಂಬ ಪ್ರಶ್ನೆ ಕೂಡ ರೈತರಿಂದ ಕೇಳಿಬಂದಿದೆ.
ಮಳೆ ಕೊರತೆ ಹೇಗಿದೆ ಗೊತ್ತಾ?
ಈ ವರ್ಷ ಮುಂಗಾರು ಮಳೆ ಶುರುವಾಗಿದ್ದೇ ತಡವಾಗಿತ್ತು. ಹೀಗೆ ಕಾವೇರಿ ಕೊಳ್ಳದ ಭಾಗದಲ್ಲು ದುರ್ಬಲ ಮುಂಗಾರಿನ ಕಾರಣದಿಂದ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಶೇ 42.54ರಷ್ಟು ತಗ್ಗಿದೆ. ಜೂನ್ 1, 2023ರಿಂದ ಆಗಸ್ಟ್ 9, 2023 ತನಕ ಕಾವೇರಿ ಕೊಳ್ಳದ ಅಣೆಕಟ್ಟುಗಳಾದ ಕಬಿನಿ, ಹಾರಂಗಿ, ಹೇಮಾವತಿ & ಕೆಆರ್ಎಸ್ನಲ್ಲಿ ಒಳ ಹರಿವಿನ ಪ್ರಮಾಣ 30 ವರ್ಷ ಸರಾಸರಿಗೆ ಹೋಲಿಸಿದರೆ ಶೇ 42.54ರಷ್ಟು ಇಳಿದಿದೆ. ಇನ್ನು ಸೆಪ್ಟೆಂಬರ್ ತಿಂಗಳು ಅರ್ಧ ಮುಗಿದರೂ ಮಳೆ ಅಬ್ಬರಿಸಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಖಾಲಿ ಖಾಲಿ ಪ್ರದೇಶವೇ ಕಾಣುತ್ತಿದೆ.

ಒಟ್ನಲ್ಲಿ ಕಾವೇರಿ ಯಾರೊಬ್ಬರ ಸ್ವತ್ತು ಅಲ್ಲ ಅಂತಾ ಹೇಳುವವರು ಈಗ ವಾಸ್ತವದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಬೆಂಗಳೂರಿನ ಜನರು ಭಾಷೆ ಮರೆತು ಕಾವೇರಿಗಾಗಿ ಹೋರಾಡಬೇಕು. ಇಲ್ಲವಾದರೆ ಬೇಸಿಗೆ ಹೊತ್ತಿಗೆ ಬೆಂಗಳೂರಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ 4-5 ವರ್ಷ ಸರಿಯಾಗಿ ಮಳೆ ಬಂದು ಸಮಸ್ಯೆ ಆಗಿರಲಿಲ್ಲ. ಆದರೆ ಈ ಬಾರಿ ನೀರಿಗೆ ಪರದಾಟ ಪಕ್ಕಾ. ಬೇಸಿಗೆಯಲ್ಲಿ ನೀರಿಲ್ಲ ಅಂತ ಪರದಾಡುವಾಗ ಪರಭಾಷಿಕರಿಗೆ ಕಾವೇರಿ ನದಿ ನೆನಪಾದರೆ ಕಷ್ಟ. ಹೀಗಾಗಿ ಈಗಲೇ ಅಲರ್ಟ್ ಆಗಿ ಕಾವೇರಿ ನೀರು ಉಳಿಸಿಕೊಳ್ಳಬೇಕಿದೆ.












Click it and Unblock the Notifications