Deve Gowda, HD Kumaraswamy ಭೇಟಿಯಾದ ಪಂಚಮಸಾಲಿ ಪೀಠದ ಸ್ವಾಮೀಜಿ: ಕುತೂಹಲ ಮೂಡಿಸಿದ ಬೆಳವಣಿಗೆ- ಇಲ್ಲಿದೆ ಮಾಹಿತಿ
ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಅವರು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶನಿವಾರ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು, ಮಾರ್ಚ್ 18: ಕರ್ನಾಟಕ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶನಿವಾರ ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 'ಲಿಂಗಾಯತರ ಪ್ರಬಲ ಪಂಗಡವಾಗಿರುವ ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಇಂದು ಭೇಟಿಯಾದರು' ಎಂದು ತಿಳಿಸಿದೆ. ಇದರೊಂದಿಗೆ ಪೋಟೊಗಳನ್ನೂ ಹಂಚಿಕೊಂಡಿದೆ.

'ದೇಶದ ಕಾನೂನು, ಆಡಳಿತದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳು ಹಾಗೂ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ವಿಷಯಗಳಲ್ಲಿ ಅಪಾರವಾದ ಅನುಭವವಿರುವ ದೇವೇಗೌಡರು, ಪಂಚಮಸಾಲಿ ಸಮುದಾಯ ಮೀಸಲಾತಿ ಪಡೆಯಲು ಇರುವ ಸವಾಲುಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ' ಎಂದು ಜೆಡಿಎಸ್ ತಿಳಿಸಿದೆ.
'ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿಯ ವರ್ಗೀಕರಣ ಮಾಡಿ, ಹಿಂದುಳಿದ ವರ್ಗಗಳ ಆಯೋಗದಿಂದ ಅಂತಿಮ ವರದಿಗೆ ಕಾಯುತ್ತಿದೆ. ಯಾವ ವೈಜ್ಞಾನಿಕ ತಳಹದಿ ಇಲ್ಲದೆ, ಜನರಿಗೆ ಮಂಕುಬೂದಿ ಎರಚಲು ಈ ರೀತಿಯ ಅಸಂಬದ್ಧ ವರ್ಗೀಕರಣವನ್ನು ಸರ್ಕಾರ ಮಾಡಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು' ಎಂದೂ ಜೆಡಿಎಸ್ ತಿಳಿಸಿದೆ.
'ಸರ್ಕಾರದ ಈ ನಿರ್ಧಾರ ಹೊರಬಿದ್ದ ನಂತರ ಜಯಮೃತ್ಯುಂಜಯ ಸ್ವಾಮೀಜಿ ಅವರು ಅಸಮಾಧಾನ ಹೊರಹಾಕಿ, ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದಿದ್ದರು. ಈಗ ಈ ಎಲ್ಲ ಗಂಭೀರ ವಿಷಯಗಳನ್ನು ದೇವೇಗೌಡರೊಂದಿಗೆ ಚರ್ಚಿಸಲಾಗಿದೆ' ಎಂದೂ ಜನತಾದಳ ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ, 'ಕೂಡಲಸಂಗಮದ ಶ್ರೀ ಪಂಚಮಸಾಲಿ ಗುರುಪೀಠದ ಶ್ರೀ ಶ್ರೀ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳವರು ಇಂದು ಬೆಳಗ್ಗೆ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪರಮಪೂಜ್ಯರ ಜತೆ ವಿವಿಧ ವಿಷಗಳ ಬಗ್ಗೆ ಚರ್ಚೆ ನಡೆಸಲಾಯಿತು' ಎಂದೂ ತಿಳಿಸಿದ್ದಾರೆ.
ಹಾಲಿನ ಪ್ರೋತ್ಸಾಹ ಧನ ಬಾಕಿ: ಜೆಡಿಎಸ್ ಆಕ್ರೋಶ
'ಮಾನಗೆಟ್ಟ ರಾಜ್ಯ ಬಿಜೆಪಿ ಸರ್ಕಾರ ರೈತ ವಿರೋಧಿ ಎಂಬುದಕ್ಕೆ ಅದರ ನಡಾವಳಿಗಳೆ ಸಾಕ್ಷಿ. ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ನೀಡುವ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ. ಐದು ತಿಂಗಳಿಂದ ಹಾಲು ಉತ್ಪಾದಕರಿಗೆ ಕೊಡಬೇಕಿರುವ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ ಸರ್ಕಾರ. ಸಕಾಲದಲ್ಲಿ ಹಣ ಬರದೆ, ರೈತರು ಕಂಗಾಲಾಗಿದ್ದಾರೆ' ಎಂದು ಜೆಡಿಎಸ್ ತಿಳಿಸಿದೆ.
'ಸಿಎಂ ಬಸವರಾಜ ಬೊಮ್ಮಾಯಿಯವರೆ, ನಿಮಗೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ ಈ ಕಡೆ ಗಮನಹರಿಸಿ. ಚರ್ಮ ಗಂಟು ರೋಗ, ದುಬಾರಿಯಾಗಿರುವ ಪಶು ಆಹಾರ ಹೀಗೇ ಹಲವು ಗಹನವಾದ ಕಾರಣಗಳಿಂದ ಹಾಲಿನ ಉತ್ಪಾದನೆಯೇ ಕಡಿಮೆಯಾಗಿದೆ. ಇಂತ ಸಂದರ್ಭದಲ್ಲಿ ಐದು ತಿಂಗಳಿಂದ ಹಣ ಬಾಕಿ ಉಳಿಸಿಕೊಂಡರೆ ರೈತರು ಬದುಕುವುದು ಹೇಗೆ?' ಎಂದು ಪ್ರಶ್ನಿಸಿದೆ.
'ಅಲ್ಪ ಮೊತ್ತದ ಪ್ರೋತ್ಸಾಹ ಧನವನ್ನು ಸರಿಯಾದ ಸಮಯಕ್ಕೆ ನೀಡಲು ಆಗದಷ್ಟು ನಿಷ್ಕ್ರಿಯವಾಗಿದೆ ರಾಜ್ಯ ಬಿಜೆಪಿ ಸರ್ಕಾರ. ಹೀಗೆ ಆದರೆ, ಹೈನೋದ್ಯಮ ಬೆಳೆಯುವುದರಲಿ, ಈಗ ಅದರಲ್ಲಿ ತೊಡಗಿರುವ ರೈತರೇ ದೂರ ಸರಿಯಲಿದ್ದಾರೆ. ರಾಜ್ಯದ ಸುಮಾರು 24 ಲಕ್ಷ ಜನರ ಆರ್ಥಿಕತೆಯ ಪ್ರಶ್ನೆ ಇದು' ಎಂದೂ ಟ್ವೀಟ್ ಮಾಡಿದೆ.












Click it and Unblock the Notifications