ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ
ಬೆಂಗಳೂರು, ಸೆಪ್ಟೆಂಬರ್ 6: ರಾಜಧಾನಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ವಿಪರೀತವಾಗಿದೆ. ಜತೆಗೆ ದಾವಣಗೆರೆ, ಕಲಬುರ್ಗಿ ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿನ ಗಾಳಿಯೂ ಪಿಎಂ10ರ ಕಣಗಳು ಮಿತಿಗಿಂತ (60 ಯುಜಿ ಅಥವಾ ಎಂ3) ಮೀರಿ ದಾಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಗುರುತಿಸಿದೆ.
ಈ ನಗರಗಳು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುತ್ತಿದೆ. ಗಾಳಿ ವಿಷವಾಗಿ ಮಾರ್ಪಟ್ಟು ಅಪಾಯಕಾರಿಯಾಗಿ ಪರಿಣಮಿಸಿವೆ. ವಾಯುಮಾಲಿನ್ಯವನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಆಗಸ್ಟ್ನಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್ಪಿಸಿಬಿ) ಸಿಪಿಸಿಬಿ ಸೂಚನೆ ನೀಡಿತ್ತು.
ಆದರೆ, ಆಗಸ್ಟ್ ಮುಗಿದು ವಾರ ಕಳೆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಇದುವರೆಗೂ ಕ್ರಿಯಾ ಯೋಜನೆ ಸಲ್ಲಿಸಿಲ್ಲ ಎನ್ನುವುದು ಬಹಿರಂಗವಾಗಿದೆ.

ಕ್ರಿಯಾಯೋಜನೆಯೇ ಸಲ್ಲಿಕೆಯಾಗಿಲ್ಲ
ಪರಿಸರವನ್ನು ರಕ್ಷಿಸಲು ನಮ್ಮ ನಿಷ್ಕ್ರಿಯತೆಯ ಕಾರಣದಿಂದ ಬೆಂಗಳೂರು ವಾಸಕ್ಕೆ ಅಯೋಗ್ಯ ಎನಿಸಿಕೊಳ್ಳುವಂತಾಗಬಾರದು. ಕರ್ನಾಟಕದಲ್ಲಿ ನಾಲ್ಕು ನಗರಗಳನ್ನು ವಾಯುಮಾಲಿನ್ಯ ಪೀಡಿತ ಎಂದು ಗುರುತಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಕೇಳಿದಂತೆ ವಾಯುಮಾಲಿನ್ಯವನ್ನು ನಿಯಂತ್ರಿಸಲು ಯಾವ ನಗರವೂ ಕ್ರಿಯಾಯೋಜನೆಯ ಕರಡನ್ನು ಸಲ್ಲಿಸಿಲ್ಲ ಎನ್ನುತ್ತಾರೆ ಗ್ರೀನ್ಪೀಸ್ ಇಂಡಿಯಾದ ಹೋರಾಟಗಾರ ಸುನಿಲ್ ದಹಿಯಾ.

ಎಚ್ಚರಿಕೆಯ ಗಂಟೆ
'ವಾಯುಮಾಲಿನ್ಯ ಉತ್ತರ ಭಾರತ ಅಥವಾ ದೆಹಲಿಯ ಸಮಸ್ಯೆ ಮಾತ್ರವಲ್ಲ. ಇದು ಬೆಂಗಳೂರು ಮತ್ತು ದಕ್ಷಿಣ ಭಾರತದ ಇತರೆ ನಗರ ಕೇಂದ್ರಗಳು ಎಚ್ಚೆತ್ತು ತಮ್ಮ ಆದ್ಯತೆಗಳತ್ತ ಗಮನಹರಿಸಬೇಕಾದ ಸಮಯ.
ಇದು ಎಚ್ಚರಿಕೆಯ ಗಂಟೆಯಾಗಿದೆ. ತೀರಾ ತಡವಾಗುವ ಮುನ್ನ ಸ್ಥಳೀಯ ಸರ್ಕಾರಗಳು ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ನಮ್ಮ ನಿಷ್ಕ್ರಿಯತೆಗೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಪ್ರತಿ ದಿನ ಕಳೆಯುವಾಗಲೂ ನಾವು ನಮ್ಮ ಆರೋಗ್ಯವನ್ನು, ನಮ್ಮ ಭವಿಷ್ಯದ ಪೀಳಿಗೆಯನ್ನು ಅಪಾಯದಲ್ಲಿ ಇರಿಸುತ್ತಿದ್ದೇವೆ' ಎಂದು ಸುನಿಲ್ ಹೇಳುತ್ತಾರೆ.

ನಾಲ್ಕಲ್ಲ, ಹತ್ತು ನಗರಗಳು
ಕೇಂದ್ರ ಸರ್ಕಾರ ನಾಲ್ಕ ನಗರಗಳನ್ನು ಗುರುತಿಸಿದ್ದರೂ, ರಾಜ್ಯದ ಹತ್ತು ನಗರಗಳಲ್ಲಿ ಪಿಎಂ10 ವಾರ್ಷಿಕ ಸರಾಸರಿ ಪ್ರಮಾಣ ಮಿತಿಗಿಂತಲೂ ಅಧಿಕವಾಗಿದೆ ಎಂದು ಗ್ರೀನ್ಪೀಸ್ನ ಏರ್ಪೋಕ್ಯಾಲಿಪ್ಸ್-2 ವರದಿ ಹೇಳುತ್ತದೆ.

ಕೆಎಸ್ಪಿಸಿಬಿ ಮತ್ತು ಬಿಬಿಎಂಪಿ ನಿರ್ಲಕ್ಷ್ಯ
'ವಾಯುಮಾಲಿನ್ಯವನ್ನು ನಿಯಂತ್ರಿಸುವ ವಿಚಾರದಲ್ಲಿ ಕೆಎಸ್ಪಿಸಿಬಿ ಮತ್ತು ಬಿಬಿಎಂಪಿಗಳೆರಡೂ ಗಂಭೀರವಾಗಿ ಚಿಂತನೆ ನಡೆಸದೆ ಇರುವುದು ದುಃಖದ ಸಂಗತಿ ಎನ್ನುತ್ತಾರೆ ಜಾತ್ಕಾ ಡಾಟ್ ಆರ್ಗ್ನಲ್ಲಿ ವಾಯುಮಾಲಿನ್ಯದ ವಿರುದ್ಧ ಆಂದೋಲನ ನಡೆಸುತ್ತಿರುವ ಶಿಖಾ ಕುಮಾರ್.

ಕಣ್ಣೆದುರೇ ಇವೆ ಸಾಕ್ಷ್ಯ
ಬೆಂಗಳೂರಿನಲ್ಲಿ ವಾಹನಗಳಿಂದ ಬರುವ ಹೊಗೆ, ಕಟ್ಟಡ ನಿರ್ಮಾಣದ ದೂಳು, ತ್ಯಾಜ್ಯವನ್ನು ಸುಡುವುದರಿಂದ ಮಾಲಿನ್ಯದ ಮಟ್ಟ ಗಣನೀಯವಾಗಿ ಹೆಚ್ಚುತ್ತಿರುವುದಕ್ಕೆ ಪುರಾವೆಗಳು ನಮ್ಮ ಎದುರಿಗೇ ಇವೆ. ತ್ಯಾಜ್ಯವನ್ನು ಸುಟ್ಟರೆ ದಂಡ ವಿಧಿಸುವುದಾಗಿ ಬಿಬಿಎಂಪಿ ಎರಡು ವರ್ಷದ ಹಿಂದೆ ಆದೇಶ ಹೊರಡಿಸಿತ್ತು. ಆದರೆ, ಅದು ಇಂದಿಗೂ ಜಾರಿಯಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ಬೆಂಗಳೂರಿಗೆ ಕಾದಿದೆ ಅಪಾಯ
ವಾಯುಮಾಲಿನ್ಯದ ತೀವ್ರತೆ ವಿಚಾರ ಬಂದಾಗ ಉತ್ತರ ಭಾರತದ ದೆಹಲಿ, ವಾರಾಣಸಿಯಂತಹ ಕೆಲವು ನಗರಗಳ ಬಗ್ಗೆ ಮಾತ್ರ ನಾವು ಮಾತನಾಡುತ್ತಿದ್ದೇವೆ. ಆದರೆ, ಬೆಂಗಳೂರು ಇನ್ನು ಎಷ್ಟು ಕಾಲ ಹೀಗೆಯೇ ಉಳಿಯಬಹುದು ಎಂಬುದು ನಮ್ಮೆದುರಿಗಿನ ಪ್ರಶ್ನೆಯಾಗಿದೆ ಎಂದು ಶಿಖಾ ಹೇಳುತ್ತಾರೆ.
|
1.1 ಮಿಲಿಯನ್ ಅಕಾಲಿಕ ಸಾವು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಾಗತಿಕವಾಗಿ ಪ್ರತಿ ವರ್ಷ ವಾಯುಮಾಲಿನ್ಯದಿಂದಲೇ 7 ಮಿಲಿಯನ್ ಅಕಾಲಿಕ ಸಾವುಗಳು ಸಂಭವಿಸುತ್ತಿವೆ. 2016ರಲ್ಲಿ ಭಾರತದಲ್ಲಿ ದೂಳು ಮತ್ತು ಓಜೋನ್ ಮಾಲಿನ್ಯದಿಂದ 1.1 ಮಿಲಿಯನ್ ಅಕಾಲಿಕ ಸಾವುಗಳುಂಟಾಗಿವೆ.












Click it and Unblock the Notifications