ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ?
ಬೆಳಗಾವಿ, ಡಿಸೆಂಬರ್ 08: ಬೆಳಗಾವಿ ಅಧಿವೇಶನ ಡಿಸೆಂಬರ್ 11 ರಿಂದ ಪ್ರಾರಂಭವಾಗಲಿದೆ. ಇದರ ಬೆನ್ನಲ್ಲೇ ಬೆಳಗಾವಿಗೆ ಕರ್ನಾಟಕದ ಎರಡನೇ ರಾಜಧಾನಿ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ಎದ್ದಿದೆ.
ಮೂಲಗಳ ಪ್ರಕಾರ ಬೆಳಗಾವಿಯನ್ನು ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಘೋಷಿಸಲು ಕುಮಾರಸ್ವಾಮಿ ಅವರಿಗೆ ಬಹಳವೇ ಒಲವಿದೆ. ಆದರೆ ಇದಕ್ಕೆ ಅವರ ಮಿತ್ರ ರಾಜಕಾರಣಿಗಳು ತಲೆದೂಗುತ್ತಿಲ್ಲ ಎನ್ನಲಾಗಿದೆ. ಸಂಪುಟ ಸದಸ್ಯರನ್ನು ಒಪ್ಪಿಸುವ ಕಾರ್ಯದಲ್ಲಿ ಸಿಎಂ ನಿರತರಾಗಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿರ್ಧಾರ ಕುಮಾರಸ್ವಾಮಿ ಅವರದ್ದೇ ಆಗಿತ್ತು, ಬೆಳಗಾವಿಯ ಸುವರ್ಣಸೌಧದ ಆದದ್ದು ಅವರದ್ದೇ ಅವಧಿಯಲ್ಲಿ. ಹಾಗಾಗಿ ಈ ಮಹತ್ವದ ನಿರ್ಧಾರವೂ ಕುಮಾರಸ್ವಾಮಿ ಅವರಿಂದ ಆಗಲಿ ಎಂಬುದು ಉತ್ತರ ಕರ್ನಾಟಕ ಮಂದಿಯ ಆಶಯ.

ಅಧಿವೇಶನದಲ್ಲಿ ಘೋಷಣೆ?
ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಲಿದೆ ಅಥವಾ ಘೋಷಣೆಯೇ ಆಗಿಬಿಡವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಭಾಗದ ವಿರೋಧಿ ಎಂಬ ಹುಯಿಲು ಕೆಲವು ತಿಂಗಳುಗಳ ಹಿಂದೆ ಎದ್ದಿತ್ತು. ಈಗಲೂ ಅದು ಗುಪ್ತಗಾಮಿನಿಯಾಗಿದೆ. ಅದನ್ನು ಹೋಗಲಾಡಿಸಲು ಕುಮಾರಸ್ವಾಮಿ ಅವರು ಈ ನಿರ್ಧಾರ ತಳೆದರೆ ಅಚ್ಚರಿ ಇಲ್ಲ.

ಉತ್ತರ ಕರ್ನಾಟಕಕ್ಕೆ ಮನ್ನಣೆ
ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಿದರೆ ಉತ್ತರ ಕರ್ನಾಟಕ್ಕೆ ಮನ್ನಣೆ ನೀಡಿದಂತಾಗುತ್ತದೆ. ವರ್ಷದ ಕೆಲವು ತಿಂಗಳು ಬೆಳಗಾವಿಯಿಂದಲೇ ನಡೆದರೆ ಸರ್ಕಾರದ ಕೇಂದ್ರ ಭಾಗದ ಆಸುಪಾಸಿನ ಇರುವ ಜನರಿಗೆ ಸವಲತ್ತುಗಳು ಸುಲಭವಾಗಿ ತಲುಪುತ್ತವೆ. ಇದು ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗುತ್ತದೆ.

ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ
ಸರ್ಕಾರದ ಕೇಂದ್ರ ಸ್ಥಾನ ಬೆಂಗಳೂರು ವಿಪರೀತ ಒತ್ತಡಕ್ಕೆ ಒಳಗಾಗಿದೆ. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಬಹುತೇಕ ಸರ್ಕಾರಿ ಕಚೇರಿಗಳು ಇಲ್ಲಿಯೇ ಇದ್ದು, ಉತ್ತರ ಕರ್ನಾಟಕದಿಂದ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯೂ ಆಗಲಿದೆ.

ಎರಡನೇ ರಾಜಧಾನಿಗೆ ಕಾನೂನು ಮಾನ್ಯತೆ?
ಎರಡನೇ ರಾಜಧಾನಿಗೆ ಕಾನೂನು ಮಾನ್ಯತೆ ಇರುವುದಿಲ್ಲ. ಆದರೆ ರಾಜ್ಯ ಸರ್ಕಾರ ತನಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಬೆಳಗಾವಿಗೆ ಮೂಲಭೂತ ಸೌಕರ್ಯ ಹೆಚ್ಚಿಸಿ ಎರಡನೇ ರಾಜಧಾನಿಯನ್ನಾಗಿ ಮಾಡಬಹುದು. ಮಹಾರಾಷ್ಟ್ರ ರಾಜ್ಯವು ಮುಂಬೈ ರಾಜಧಾನಿ ಆಗಿದ್ದರೂ ಸಹ ನಾಗಪುರವನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡಿದೆ.

ಎಂಇಎಸ್ಗೆ ಪಾಠ
ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಿದರೆ ಎಂಇಎಸ್ಗೆ ಭಾರಿ ಹಿನ್ನಡೆ ಆಗಲಿದೆ. ಅದರ ಆಟಾಪೋಠ ಬೆಳಗಾವಿಯಲ್ಲಿ ಕಡಿಮೆ ಆಗಲಿದೆ.












Click it and Unblock the Notifications