ಬಿಜೆಪಿ ಬಣ ಬಡಿದಾಟ ದೆಹಲಿಗೆ ಶಿಫ್ಟ್: ಹೈಕಮಾಂಡ್ ಮುಂದೆ ಆ ಬೇಡಿಕೆ ಇಟ್ಟ ಯತ್ನಾಳ್ ಟೀಂ
ಬೆಂಗಳೂರು, ಫೆಬ್ರವರಿ 04: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ ವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸುವ ಕುರಿತು ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ಕರ್ನಾಟಕ ಬಿಜೆಪಿ ಭಿನ್ನಮತ ದೆಹಲಿ ಅಂಗಳ ತಲುಪಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ವಿರೋಧಿ ಸುತ್ತಿರುವ ಖಾಯಂ ಭಿನ್ನಮತೀಯರು ವರಿಷ್ಠರ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ. ಬಿ ವೈ ವಿಜಯೇಂದ್ರ ವಿರೋಧ ಬಣ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರಬಂಗಾರಪ್ಪ, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ, ಚಂದ್ರಪ್ಪ, ಸಂಸದ ಕೆ.ಸುಧಾಕರ್ ಸೇರಿದಂತೆ ಮತ್ತಿತರರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ.

ಬಿಜೆಪಿ ಪಾಳಯದಲ್ಲಿ ಆದ ಬೆಳವಣಿಗೆಗಳ ಕುರಿತು ಹೈಕಮಾಂಡ್ ಈಗಾಗಲೇ ಎಂಟ್ರಿಯಾಗಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಮುಂದೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಣ ಹಲವು ಬೇಡಿಕೆಯನ್ನ ಇಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ರಾಜ್ಯಾಧ್ಯಕ್ಷ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ಇದರ ಜೊತೆಗೆ 23 ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆಯನ್ನ ರದ್ದು ಮಾಡಬೇಕೆಂಬ ಒತ್ತಡ ಹಾಕಿಲಿದ್ದಾರೆ. ಅಲ್ಲದೇ, ರಾಜ್ಯಾಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಒತ್ತಡ ಹಾಗೂ ವಿಜಯೇಂದ್ರರನ್ನ ಪಟ್ಟದಿಂದ ಇಳಿಸಬೇಕು ಬೇಡಿಕೆಯನ್ನ ಹೈಕಮಾಂಡ್ ಮುಂದೆ ಇಡಲಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಣ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದು, ಎರಡ್ಮೂರು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ.
ಇನ್ನೂ ದೆಹಲಿಗೆ ಹೋಗುವ ಕುರಿತು ವಿಜಯಪುರದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ನಾಳೆ ನಾನು ಮತ್ತು ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಬಿಎಸ್ವೈ ಹಾಗೂ ಆತನ ಮಗನ ಕರ್ಮಕಾಂಡಗಳ ಬಗ್ಗೆ ವಿವರಣೆ ನೀಡುತ್ತೇವೆ. ಹೈಕಮಾಂಡ್ಗೆ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಮಹಾಭ್ರಷ್ಟ ಕುಟುಂಬ ಬೇಕಾ, ಪಕ್ಷದ ಕಾರ್ಯಕರ್ತರು ಬೇಕಾ? ಬಿಜೆಪಿಯಲ್ಲಿ ಕುಟುಂಬಶಾಹಿ ಕೊನೆಗೊಳ್ಳಬೇಕು . ಭ್ರಷ್ಟಾಚಾರಿ ಕುಟುಂಬವನ್ನು ರಾಜ್ಯದಿಂದ ಕಿತ್ತೊಗೆಯಬೇಕು. ಹಿಂದುತ್ವ ಇರುವಂತಹ ವ್ಯಕ್ತಿಗಳ ಕೈಯಲ್ಲಿ ನಾಯಕತ್ವ ಇರಬೇಕು ಎಂದು ಹೇಳಿದ್ದಾರೆ.
ಮತ್ತೆ ರಾಜ್ಯಾಧ್ಯಕ್ಷನಾಗುವ ವಿಶ್ವಾಸವನ್ನ ಬಿ ವೈ ವಿಜಯೇಂದ್ರ ಅವರು ಹೇಳಿರುವ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಠೇವಣಿ ಕಳೆದುಕೊಳ್ಳುವವನು ಕೂಡ ನಾನೇ ಗೆಲ್ಲುತ್ತೇನೆ ಅಂತಾನೆ. ಹೊಳೆನರಸೀಪುರದಲ್ಲಿ ಒಬ್ಬ 500 ಮತಗಳಲ್ಲಿ ಸೋತೆ ಎಂದಿದ್ದ. ನಂತರ ನೋಡಿದಾಗ ಅವನು ಪಡೆದಿದ್ದು ಕೇವಲ 500 ಮತಗಳು. ಈಗ ಹೈಕಮಾಂಡ್ನಲ್ಲಿ ಮೂರು ವಿಷಯಗಳು ಸ್ಪಷ್ಟವಾಗಬೇಕು. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ದೆಹಲಿಗೆ ತೆರಳುವ ನಿಯೋಗ ದೊಡ್ಡದಿದೆ. ವಿಜಯೇಂದ್ರ ಮುಂದುವರಿಸಿದರೆ ಹೀನಾಯ ಸ್ಥಿತಿ ಎಂದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications