11 ಲಕ್ಷದೊಂದಿಗೆ ಮನೆಬಿಟ್ಟಿದ್ದ ಯುವಕ ವಾಪಸ್!

ಆದರೆ 'ಯಾಕಪ್ಪಾ ಮಗನೆ ಹೀಗೆ ಮಾಡಿದೆ?' ಎಂದು ಅಪ್ಪ ಕೇಳಿದ್ದಕ್ಕೆ ಮುನಿಸಿಕೊಂಡಿದ್ದ ಮಗ 'ಮತ್ತೆ ನೀನು ನನ್ನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೆ. ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ' ಎಂದು ಅಲವತ್ತುಕೊಂಡಿದ್ದಾನೆ.
'ಸರಿ ಎಲ್ಲಿಗೆ ಹೊರಟುಹೋಗಿದ್ದೆ?' ಎಂದು ಕೇಳಿದ್ದಕ್ಕೆ '11 ಲಕ್ಷ ರೂಪಾಯಿ ತೆಗೆದುಕೊಂಡು ಹುಬ್ಬಳ್ಳಿಗೆ ಹೊರಟುಹೋಗಿದ್ದೆ. ಅಲ್ಲಿ ಮೂರು ದಿನ ಇದ್ದು, ಬೆಂಗಳೂರಿಗೆ ವಾಪಸಾಗಿದ್ದೆ. 11 ಲಕ್ಷ ರೂಪಾಯಿಯಲ್ಲಿ 2,000 ಮಾತ್ರ ಖರ್ಚು ಮಾಡಿದ್ದೇನೆ' ಎಂದು ರೆವೆನ್ಯೂ ಇನ್ಸ್ ಪೆಕ್ಟರ್ ಅಪ್ಪಾಜಿ ಗೌಡ ಅವರ ಪುತ್ರ ಶಶಿಕುಮಾರ್ ಹೇಳಿದ್ದಾನೆ. ಪೋಷಕರು ಮಗನ ಭಾವನೆಗಳಿಗೆ ಇನ್ನಾದರೂ ಕಿವಿ ಕೊಡುತ್ತಾರಾ?
ಹಿಂದಿನ ಸುದ್ದಿ: ರಾಜಧಾನಿಯಲ್ಲಿ ಎರಡು ದಿನಗಳ ಹಿಂದೆ ಹೈಪ್ರೊಫೈಲ್ ಅಪಹರಣ ನಡೆದಿದೆ. ಆದರೆ ಇಂದಿಗೂ ಅಪಹೃತನಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವೂ ಸಿಕ್ಕಿಲ್ಲ.
ಮೊನ್ನೆ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬೆಂಗಳೂರು ದಕ್ಷಿಣ ತಾಲೂಕು ವಿಭಾಗದ ರೆವೆನ್ಯೂ ಇನ್ಸ್ ಪೆಕ್ಟರ್ ಅಪ್ಪಾಜಿ ಗೌಡ ಅವರ ಪುತ್ರ ಶಶಿಕುಮಾರ್ ಅಪಹೃತನಾದ ವ್ಯಕ್ತಿ.
ಈ ಸಂಬಂಧ ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಕ್ಷಿಣ ವಿಭಾಗದ ಡಿಸಿಪಿ ಎಚ್ಎಸ್ ರೇವಣ್ಣ ನೇತೃತ್ವದ ತಂಡ 22 ವರ್ಷದ ಶಶಿಕುಮಾರ್ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದೆ.
ಗಮನಾರ್ಹವೆಂದರೆ ರೆವೆನ್ಯೂ ಇನ್ಸ್ ಪೆಕ್ಟರ್ ಪುತ್ರ ಶಶಿಕುಮಾರ್ ಅಪಹರಣಕ್ಕೀಡಾದ ಸಂದರ್ಭದಲ್ಲಿ ಆತನ ಬಳಿ 11 ಲಕ್ಷ ರೂಪಾಯಿ ನಗದು ಸಹ ಇತ್ತು.
ಏನಾಯ್ತೆಂದರೆ ಶಶಿಕುಮಾರ ತನ್ನ ದೊಡ್ಡಪ್ಪ ಪುಟ್ಟಸ್ವಾಮಿ ಜತೆಗೂಡಿ ಕನಕಪುರ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಗೆ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾನೆ. ಅಲ್ಲಿಂದ ಬ್ಯಾಂಕಿಗೆ ತೆರಳಿ ತಮ್ಮೊಂದಿಗಿದ್ದ 11 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡುವುದು ಅವರ ಉದ್ದೇಶವಾಗಿತ್ತು.
ಆದರೆ ತಾಲೂಕು ಕಚೇರಿಗೆ ಬಂದಾಗ ದೊಡ್ಡಪ್ಪ ಪುಟ್ಟಸ್ವಾಮಿಯನ್ನು ಕಾರಿಂದ ಕೆಳಗಿಳಿಸಿದ ಶಶಿಕುಮಾರ 'ಒಳಗೆ ಹೋಗಿ ನಿಮ್ಮ ತಮ್ಮ ಅಪ್ಪಾಜಿ ಗೌಡರನ್ನು (ತನ್ನ ತಂದೆ) ಮಾತನಾಡಿಸಿಕೊಂಡು ಬಾ. ನಾನು ಇಲ್ಲೇ ಕಾರಿನಲ್ಲಿರುತ್ತೇನೆ' ಎಂದು ದೊಡ್ಡಪ್ಪನನ್ನು ಒಳಗೆ ಕಳುಹಿಸಿದ್ದಾನೆ.
ಮುಂದಿನದೇ ಇಂಟರೆಸ್ಟಿಂಗ್... ಒಳ ಹೋದ ಪುಟ್ಟಸ್ವಾಮಿ ಹೆಚ್ಚು ಕಾಲ ತೆಗೆದುಕೊಳ್ಳದೆ ಮತ್ತೆ ಕಾರು ನಿಲ್ಲಿಸಿದ್ದ ಜಾಗಕ್ಕೆ ಬರುತ್ತಾರೆ. ಆದರೆ ಅಲ್ಲಿ ಕಾರೂ ಇಲ್ಲ, ಶಶಿಕುಮಾರನೂ ಇಲ್ಲ, ಜತೆಗೆ 11 ಲಕ್ಷ ರೂಪಾಯಿ ನಗದು ಸಹ ಇಲ್ಲವಾಗಿದೆ.
ಆತಂಕ/ಅನುಮಾನಗೊಂಡ ದೊಡ್ಡಪ್ಪ ಪುಟ್ಟಸ್ವಾಮಿ ತಕ್ಷಣ ಕುಮಾರಸ್ವಾಮಿ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಶಿಕುಮಾರ ಮತ್ತು ಅವನ ಜತೆಗಿದ್ದ 11 ಲಕ್ಷ ರೂಪಾಯಿಗಾಗಿ ಜಾಲಾತೊಡಗಿದ್ದಾರೆ.
ಇದೇ ವೇಳೆ, ಶಶಿಕುಮಾರನ ಸ್ವಿಫ್ಟ್ ಕಾರು ಗುರುವಾರ ಮಧ್ಯರಾತ್ರಿ ರಾಜರಾಜೇಶ್ವರಿ ನಗರದಲ್ಲಿ ಪತ್ತೆಯಾಗಿದೆ. ಆದರೆ ಕಾರಿನಲ್ಲಿ ಶಶಿಕುಮಾರನೂ ಇಲ್ಲ, 11 ಲಕ್ಷ ನಗದೂ ಇರಲಿಲ್ಲ. ಬದಲಿಗೆ ಶಶಿಕುಮಾರನ ಮೊಬೈಲ್ ಫೋನ್ ಸಿಕ್ಕಿದೆ.
college dropout ಹುಡುಗ ಏನಾದ?:
ಮುಂದೇ ಏನೂ ಸುಳಿವು ಸಿಕ್ಕಿಲ್ಲ. ಶಶಿಕುಮಾರನನ್ನು ಅಪಹರಿಸಿದ್ದು ಯಾರು, ಯಾತಕ್ಕಾಗಿ, 11 ಲಕ್ಷ ನಗದು ಏನಾಯ್ತು? ಅಥವಾ ಯುವ ಶಶಿಕುಮಾರನೇ ಅಪಹರಣದ ನಾಟಕವಾಡಿದ್ದಾನಾ? ಎಲ್ಲಿಗೆ ಹೋದ ಶಶಿಕುಮಾರ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಪ್ಪಾಜಿ ಗೌಡರ ಸ್ವಂತ ಊರಾದ ಮದ್ದೂರಿಗೂ ಪೊಲೀಸ ತಂಡ ತೆರಳಿದೆ. ಆದರೆ ಯಾವುದೇ ಸುಳಿವು ಲಭಿಸಿಲ್ಲ.












Click it and Unblock the Notifications