ಟಿಕೆಟ್ ಗಾಗಿ ಈಶ್ವರಪ್ಪ ಹಾಗೂ ಆಯನೂರು ಜಟಾಪಟಿ: ಟಿಕೆಟ್ ಗಾಗಿ ಕ್ಯೂ ನಲ್ಲಿದ್ದೇವೆ ಎಂದು ಮಂಜುನಾಥ್ ಟಾಂಗ್
ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಲೇ ನಿರ್ನಾಮವಾಗುತ್ತಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗ, ಮಾರ್ಚ್22: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಗಾಗಿ ನೇರಾನೇರ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗೆ ಟಿಕೆಟ್ ಕೈ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ.
ಇತ್ತ ಶಿವಮೊಗ್ಗ ಟಿಕೆಟ್ ವಿಚಾರವಾಗಿ ಆಯನೂರು ಮಂಜುನಾಥ್ ಹಾಗೂ ಕೆ ಎಸ್ ಈಶ್ವರಪ್ಪ ನಡುವೆ ಪೈಪೋಟಿ ನಡೆಯುತ್ತಿದೆ. ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿರುವ ಆಯನೂರು ಮಂಜುನಾಥ್ ಅವರು ಟಿಕೆಟ್ ಗಾಗಿ ಲಾಭಿ ನಡೆಸಿದ್ದಾರೆ.

ಇನ್ನೂ ಇಷ್ಟು ದಿನ ಕೆ ಎಸ್ ಈಶ್ವರಪ್ಪ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದ ಆಯನೂರು ಮಂಜುನಾಥ್ ಅವರು ಇದೀಗ ನೇರವಾಗಿ ಕಿಡಿಕಾರಿದ್ದಾರೆ. ನಿಮ್ಮ ಮಗ ಇನ್ನೂ ಚಿಕ್ಕವನಿದ್ದಾನೆ. ನಂತರ ಅವರಿಗೆ ಟಿಕೆಟ್ ಕೊಡಿ. ಸದ್ಯಕ್ಕೆ ಕ್ಯೂನಲ್ಲಿ ನಾವು ಇದ್ದೇವೆ ಎಂದು ಆಯನೂರು ಮಂಜುನಾಥ್ ನೇರವಾಗಿ ಈಶ್ವರಪ್ಪ ಅವರನ್ನು ಗುರಿಯಾಗಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಆಗದಿದ್ದರೆ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಈಶ್ವರಪ್ಪ ಕೇಳಿದ್ದಾರೆ. ಆದರೆ, ಪಕ್ಷದಲ್ಲಿ ನಾವು ಸಾಕಷ್ಟು ಮಂದಿ ಪಕ್ಷಕ್ಕೆ ಸೇವೆ ಸಲ್ಲಿಸಿರುವವರು ಇದ್ದೇವೆ. ಮಗನಿಗೆ ಆ ಮೇಲೆ ಕೊಡಲಿ, ಸಧ್ಯ ನಮಗೆ ಟಿಕೆಟ್ ನೀಡಲಿ ಎಂದು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ.

ಶಿವಮೊಗ್ಗ ನಗರದ ವಿವಿಧೆಡೆ ಹಾಕಲಾದ ಫ್ಲೆಕ್ಸ್ನಲ್ಲಿ ಕುರಿತು ಮಾತನಾಡಿ, ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅದು ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿ ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿಗೆ ಧಕ್ಕೆ ಬರುವ ಯಾವುದೇ ಮಾತುಗಳನ್ನು ಯಾವುದೇ ನಾಯಕರು ಹೇಳಿದರೂ ಅದನ್ನು ಸ್ವೀಕಾರ ಮಾಡಬೇಕೆಂಬ ಬಲವಂತ ನಮಗೆ ಯಾರಿಗೂ ಇಲ್ಲ. ಯಾವುದೋ ಧರ್ಮದ ದೇವರು ಕಿವುಡನೇ, ಕುರುಡನೇ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಮಾತಾಡುವುದು ಬೇಡ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಜವಾಬ್ದಾರಿಯಿಂದ ಮಾತಾಡಬೇಕು ಎಂಬ ನಿರೀಕ್ಷೆ ನನಗೂ ಇದೆ ಎಂದು ಹೇಳಿದರು.
ಚುನಾವಣಾ ವೇಳೆ ಸಾಕಷ್ಟು ಪ್ರಚಾರ ಕಾರ್ಯವನ್ನ ಪಕ್ಷದ ನಾಯಕರು ನಡೆಸುತ್ತಿದ್ದಾರೆ. ಸಂಘಟನೆಯ ಹಿತದೃಷ್ಟಿಯಿಂದ ಈಶ್ವರಪ್ಪ ಹೀಗೆ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಈಶ್ವರಪ್ಪ ಹಾಗೆ ಮಾತಾಡಿದ್ದರೆ ತಿದ್ದಿಕೊಳ್ಳುವುದು ಒಳ್ಳೆಯದು. ಸಣ್ಣ ಘಟನೆ ನಡೆದರೂ ಶಿವಮೊಗ್ಗದಲ್ಲಿ ಏನಾಗುತ್ತದೆ ಎಂಬುದು ಊಹಿಸಿಕೊಳ್ಳಲಿ ಎಂದು ಹೇಳಿದರು.
ಇನ್ನೂ ಬಿಜೆಪಿ ಪಕ್ಷ ತ್ಯಜಿಸಲಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಷ್ಠುರವಾದ ಮಾತನಾಡಿದ ಕೂಡಲೇ ಆಯನೂರು ಮಂಜುನಾಥ್ ಅಲ್ಲಿಗೆ ಹೋಗುತ್ತಾರೆ. ಇಲ್ಲಿಗೆ ಹೋಗುತ್ತಾರೆ ಅನ್ನುತ್ತಾರೆ. ಪಕ್ಷವನ್ನು ಸರಿ ಮಾಡಬೇಕು ಎಂದು ನೈಜ ಬಡಿದಾಟ ಆರಂಭಿಸಿದ್ದೇನೆ. ಅದಕ್ಕೆ ಏನೇನೊ ಅರ್ಥ ಕೊಟ್ಟರೆ ಅದಕ್ಕೆ ನಾನು ಹೊಣೆಗಾರನಲ್ಲ ಎಂದರು.
ನನಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ, ಪಕ್ಷಕ್ಕಾಗಿ ಸಾಕಷ್ಟು ಜನರು ದುಡಿದಿದ್ದಾರೆ, ಪಕ್ಷದಲ್ಲಿ ಸಾಕಷ್ಟು ಜನ ಹಿರಿಯರಿದ್ದಾರೆ ಅವರನ್ನ ಗುರುತಿಸಿ ಪಕ್ಷ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದು ಹೇಳಿದರು.












Click it and Unblock the Notifications