ಕೊಪ್ಪಳ : ನವ ಬೃಂದಾವನ ಗಡ್ಡೆ ಪೂಜೆ ವಿವಾದಕ್ಕೆ ತೆರೆ?
ಕೊಪ್ಪಳ, ಡಿಸೆಂಬರ್ 10 : ಆನೆಗೊಂದಿಯ ನವ ಬೃಂದಾವನ ಗಡ್ಡೆಯಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಒಂದೂವರೆ ದಿನದ ಆರಾಧನೆ ಮುಕ್ತಾಯಗೊಳಿಸಿ, ಉತ್ತರಾದಿಮಠಕ್ಕೆ ಆರಾಧನೆ ಮಾಡಲು ಅವಕಾಶ ನೀಡಿದ್ದಾರೆ. ಇದರಿಂದಾಗಿ ಪೂಜೆ ವಿವಾದ ಸದ್ಯಕ್ಕೆ .ಬಗೆಹರಿದಿದೆ
ಬುಧವಾರ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ಉತ್ತರಾದಿಮಠದವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಪಾರ ಶಿಷ್ಯರೊಂದಿಗೆ ಆಗಮಿಸಿದ ಶ್ರೀ ಸುಬುಧೇಂದ್ರ ತೀರ್ಥರು ಆರಾಧನೆ ಪೂಜೆ ಸಲ್ಲಿಸಿದರು. ಇದರಿಂದ ಅಸಮಾಧಾನಗೊಂಡ ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥರು ಶಿಷ್ಯರೊಂದಿಗೆ ನಿರ್ಗಮಿಸಿದರು. [ರಾಯರ ಮಠದ ಪೂಜೆ ವಿವಾದ ಡಿ.10ಕ್ಕೆ ತೀರ್ಪು]

ಇದರಿಂದಾಗಿ ಪೂಜೆ ಸಲ್ಲಿಸುವ ಕುರಿತು ಗೊಂದಲ ಉಂಟಾಗಿ ಸರಣಿ ಸಂಧಾನಸಭೆಗಳು ನಡೆದವು. ವಾತಾವರಣ ವಿಕೋಪಕ್ಕೆ ಹೋದಾಗ ಪೊಲೀಸರ ಮಧ್ಯಪ್ರವೇಶವಾಯಿತು. ಆದರೂ ಪೂಜೆ ವಿವಾದ ಬಗೆಹರಿಯಲಿಲ್ಲ. ಗಂಗಾವತಿ ಸಿವಿಲ್ ಕೋರ್ಟ್ನಲ್ಲಿಯೂ ಈ ಕುರಿತು ಅರ್ಜಿ ಸಲ್ಲಿಕೆಯಾಗಿದ್ದು, ತೀರ್ಪು ಇಂದು ಪ್ರಕಟಗೊಳ್ಳಲಿದೆ. [ಮಂತ್ರಾಲಯ ಮಠದಲ್ಲಿ ಅತೃಪ್ತಿಯ ಕಿಡಿ, ರಾಘವೇಂದ್ರ!]
ಆರಾಧನೆ ಮುಕ್ತಾಯ : ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಒಂದೂವರೆ ದಿನದ ಆರಾಧನೆಯನ್ನು ಗುರುವಾರ ಮುಕ್ತಾಯಗೊಳಿಸಿದ್ದು, ಉತ್ತರಾದಿಮಠದವರು ಆರಾಧನೆ ಮಾಡಲು ಅವಕಾಶ ನೀಡಿದ್ದಾರೆ.
ಆರಾಧನೆ ಪೂರ್ಣಗೊಂಡ ಬಳಿಕ ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥರು 'ನಮಗೆ ಮೂರು ದಿನಗಳ ಕಾಲ ಆರಾಧನೆ ಮಾಡುವ ಅವಕಾಶವಿತ್ತು. ಆದರೆ, ಉತ್ತರಾದಿಮಠಕ್ಕೆ ಅವಕಾಶ ನೀಡಲು ಆರಾಧನೆ ಮುಗಿಸಿದ್ದೇವೆ' ಎಂದು ಹೇಳಿದರು.
'ನವ ಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸುವ ವಿವಾದ ಶೀಘ್ರವೇ ಬಗೆಹರಿಯುವ ವಿಶ್ವಾಸವಿದೆ. ವಿವಾದ ಬಗೆಹರಿಸಲು ಮಾತುಕತೆ ನಡೆಯುತ್ತಿದೆ. ಇಬ್ಬರು ಒಟ್ಟಾಗಿ ಆರಾಧನೆ ನಡೆಸುವ ವಿಶ್ವಾಸವಿದೆ' ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.
ನವಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಆರಾಧನೆ ಸಮಯದಲ್ಲಿ ರಕ್ಷಣೆ ನೀಡಬೇಕು ಎಂದು ಕೋರಿ ಉತ್ತರಾದಿಮಠದವರು ಗಂಗಾವತಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್, ಇಂದು ತೀರ್ಪು ಪ್ರಕಟಿಸಲಿದೆ.












Click it and Unblock the Notifications