Get Updates
Get notified of breaking news, exclusive insights, and must-see stories!

'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು...

Recommended Video

      Ananth Kumar Demise : ಅನಂತ್ ಕುಮಾರ್ ಬಗ್ಗೆ ನೆನಪುಗಳನ್ನ ಹಂಚಿಕೊಂಡ ಪತ್ರಕರ್ತ ದಿನೇಶ್ ಆಮೀನ್ ಮಟ್ಟು

      ಬೆಂಗಳೂರು, ನವೆಂಬರ್ 12: ಸೋಮವಾರ (ನ.12) ಕೊನೆಯುಸಿರೆಳೆದ ಕೇಂದ್ರ ಸಚಿವ ಅನಂತ ಕುಮಾರ್ ಅವರದು ಎಲ್ಲರೊಂದಿಗೆ ಬೆರೆಯುವ ಸ್ನೇಹಮಯಿ ವ್ಯಕ್ತಿತ್ವ. ಪತ್ರಕರ್ತರೊಂದಿಗಿನ ಅವರ ಒಡನಾಟ ಕೊನೆಯವರೆಗೂ ಉತ್ತಮವಾಗಿತ್ತು.

      ತಮ್ಮ ವಿರುದ್ಧದ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಕ್ರಿಯೆ ನೀಡುತ್ತಿದ್ದರೂ, ಟೀಕಾಕಾರ ಬರಹಗಾರರ ವಿರುದ್ಧ ದ್ವೇಷ ಅಥವಾ ಕೋಪ ಸಾಧಿಸುತ್ತಿರಲಿಲ್ಲ. ಅದರಲ್ಲಿಯೂ ಪತ್ರಕರ್ತರು ಮತ್ತು ಅವರ ಸಂಬಂಧ ಎಂದಿಗೂ ಹದಗೆಟ್ಟಿರಲಿಲ್ಲ. ಕಠಿಣ ಮತ್ತು ನೇರವಾದ ಪ್ರಶ್ನೆಗಳನ್ನು ಕೇಳುತ್ತಿದ್ದ ಪತ್ರಕರ್ತರ ವಿರುದ್ಧವೂ ಅವರು ಸಿಡಿಮಿಡಿಗೊಳ್ಳುತ್ತಿರಲಿಲ್ಲ.

      ಸುದ್ದಿಮಿತ್ರರೊಂದಿಗೆ ಯಾವ ರೀತಿ ಮಾಹಿತಿ ಹಂಚಿಕೊಳ್ಳಬೇಕು, ಯಾವುದನ್ನು ಹಂಚಿಕೊಳ್ಳಬಾರದು ಎಂಬ ಪ್ರಜ್ಞೆ ಅವರಲ್ಲಿತ್ತು. ಪತ್ರಕರ್ತರಿಗೆ ಪಕ್ಷದ ಸುದ್ದಿಯ ಪ್ರಮುಖ ಮೂಲವೂ ಆಗಿದ್ದರು.

      ಜತೆಗೆ ವಿಪರೀತ ಹಾಸ್ಯ ಪ್ರಜ್ಞೆಯೂ ಇತ್ತು. ಸುದ್ದಿಗೋಷ್ಠಿಗಳಲ್ಲಿ ಗಂಭೀರ ವಿಚಾರದ ಕುರಿತು ಮಾತನಾಡಿದರೂ, ಅಲ್ಲಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ, ನಗುವಿನ ವಾತಾವರಣ ಮೂಡಿಸುವ ಕಲೆ ಅವರಲ್ಲಿತ್ತು.

      ವಿರಾಮದ ವೇಳೆಯಲ್ಲಿ 'ಆಫ್ ದಿ ರೆಕಾರ್ಡ್' ವಿಚಾರಗಳನ್ನು ಅವರು ಪತ್ರಕರ್ತರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಅವರನ್ನು ಒಡನಾಡಿದ ಪತ್ರಕರ್ತರು ಅನುಭವಗಳನ್ನು ಹಂಚಿಕೊಂಡಿದ್ದಾರೆ.

      ದೆಹಲಿಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ತಮ್ಮ ಫೇಸ್‌ಬುಕ್ ಪುಟದಲ್ಲಿ ಅನಂತ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಬರೆದಿದ್ದಾರೆ. ಅದರ ಪೂರ್ಣ ಪಠ್ಯ ಇಲ್ಲಿದೆ...

      ಪಕ್ಷಪಾತಿಗಳು!

      ಪಕ್ಷಪಾತಿಗಳು!

      ದೆಹಲಿಯಲ್ಲಿ ಕೆಲಸ‌ ಮಾಡುವ ಬೇರೆಬೇರೆ ರಾಜ್ಯಗಳಿಗೆ ಸೇರಿದ ಪತ್ರಕರ್ತರು ತಮ್ಮ ರಾಜ್ಯಗಳ ಬಗ್ಗೆ ಪಕ್ಷಪಾತಿಗಳಾಗಿರುತ್ತಾರೆ. ಅದೇ ರೀತಿ ಸಂಸದರು ಕೂಡಾ ತಮ್ಮ ರಾಜ್ಯಗಳ ಬಗ್ಗೆ ಪಕ್ಷಪಾತಿಗಳಾಗಿರುತ್ತಾರೆ. ಈ ಎರಡು ಕಡೆಗಳ 'ಪಕ್ಷಪಾತಿಗಳು' ಊಟ-ತಿಂಡಿ-ತೀರ್ಥದ ನೆಪದಲ್ಲಿ ಆಗಾಗ ಒಟ್ಟಾಗುತ್ತಿರುತ್ತಾರೆ.

      ಆ ರೀತಿ ಮೊದಲ‌ ಎನ್‌ಡಿಎ ಸರ್ಕಾರದ ಕಾಲದಲ್ಲಿ ಕರ್ನಾಟಕದ ಪತ್ರಕರ್ತರು ದೆಹಲಿಯಲ್ಲಿ ಆಗಾಗ ಬೈಠಕ್ ನಡೆಸುತ್ತಿದ್ದ ಮನೆಗಳಲ್ಲಿ ಸಚಿವ ಅನಂತ್ ಕುಮಾರ್ ಮನೆಯೂ ಒಂದು.

      ಆಫ್‌ ದಿ ರೆಕಾರ್ಡ್ ಕತೆಗಳು

      ಆಫ್‌ ದಿ ರೆಕಾರ್ಡ್ ಕತೆಗಳು

      ಅನಂತಕುಮಾರ್ ಭಯಂಕರ ಹಾಸ್ಯಪ್ರಜ್ಞೆಯ ಮನುಷ್ಯ. ಬಿಜೆಪಿ-ಆರ್ ಎಸ್ಎಸ್‌ ನಾಯಕರ ಕತೆಗಳನ್ನೆಲ್ಲ ಆಫ್ ದಿ ರೆಕಾರ್ಡ್ ಷರತ್ತು ಹಾಕಿ ಹೇಳುತ್ತಿದ್ದರು. ಜಗನ್ನಾಥ್ ರಾವ್ ಜೋಷಿಯವರ ಬಗ್ಗೆ ಅವರಿಗೆ ವಿಪರೀತ ಅಭಿಮಾನ. ಅವರ ಬಗ್ಗೆ ಗಂಟೆಗಟ್ಟಳೆ ಮಾತನಾಡುತ್ತಿದ್ದರು. 'ಅಧಿಕಾರದ ಕುರ್ಚಿ ಸಿಗಬೇಕಾದರೆ ಅದೃಷ್ಟದ ಗೆರೆಗಳು ಹಣೆಯಲ್ಲಲ್ಲ ಕೂರುವ ಮುಕುಳಿ ಮೇಲೆ ಬರೆದಿರಬೇಕು ತಮ್ಮಾ' ಎಂದು ಜೋಷಿಯವರು ಹೇಳುತ್ತಿದ್ದರಂತೆ. ನಾವೆಲ್ಲ ನಕ್ಕುನಕ್ಕು ಸುಸ್ತು.

      ಗಂಭೀರವೂ ಆಗುತ್ತಿದ್ದರು

      ಗಂಭೀರವೂ ಆಗುತ್ತಿದ್ದರು

      ಬಿ.ಎಸ್.ಯಡಿಯೂರಪ್ಪನವರ ಬಗ್ಗೆ‌ ಮಾತು‌ ಬಂದಾಗ ಅಸಹಜವೆಂಬಂತೆ ಗಂಭೀರವಾಗಿರುತ್ತಿದ್ದರು. ಬಹಳ‌ ಸಲ ಯಡಿಯೂರಪ್ಪನವರು ಟೀಕೆ-ಗೇಲಿ ಮಾಡಿದರೂ ಅನಂತಕುಮಾರ್ ಹಲ್ಲು ತೋರಿಸಿ ನಕ್ಕು ಸುಮ್ಮನಾಗುತ್ತಿದ್ದರು.

      ಕಾವೇರಿ ವಿಚಾರದಲ್ಲಿ ಕೆಲಸ

      ಕಾವೇರಿ ವಿಚಾರದಲ್ಲಿ ಕೆಲಸ

      ವಾಜಪೇಯಿ ಕಾಲದಲ್ಲಿನ ಕಾವೇರಿ ವಿವಾದ ಭುಗಿಲೆದ್ದಾಗ‌ ಕರ್ನಾಟಕದ ಪರವಾಗಿ ಅನಂತಕುಮಾರ್, ದೇವೇಗೌಡರ ಜತೆ ಸೇರಿಕೊಂಡು ತೆರೆಯಮರೆಯಲ್ಲಿ‌ ಕೆಲಸ ಮಾಡಿದ್ದರು. ಆ ಕಾಲದಲ್ಲಿ‌ ಅವರು ನಮಗೆಲ್ಲ‌ ಒಳ್ಳೆಯ ಸುದ್ದಿಮೂಲ.

      ನೀಲಿ ಕಣ್ಣಿನ ಹುಡುಗ

      ನೀಲಿ ಕಣ್ಣಿನ ಹುಡುಗ

      ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಫಲಾನುಭವಿ ಅನಂತಕುಮಾರ್ ರಾಜ್ಯದಲ್ಲಿದ್ದ ಪಕ್ಷದ ಹಿರಿ-ಕಿರಿಯರನ್ನೆಲ್ಲ ಪಕ್ಕಕ್ಕೆ ಸರಿಸಿ ಅಧಿಕಾರದ ಏಣಿಯಲ್ಲಿ‌ ಸರ್ರನೆ ಮೇಲೇರಿದವರು. ಆ ಕಾಲದಲ್ಲಿ‌ ಅಡ್ವಾಣಿಯವರ ಕಣ್ಣಿಗೆ ಬಿದ್ದಿದ್ದ ಅನಂತಕುಮಾರ್, ಅವರ ನೀಲಿಕಣ್ಣಿನ ಹುಡುಗ ಎಂದೇ ಜನಪ್ರಿಯರಾಗಿದ್ದರು.

      ಸಿಎಂ ಆಗುವ ವಿಶ್ವಾಸ

      ಸಿಎಂ ಆಗುವ ವಿಶ್ವಾಸ

      ರಾಜಕೀಯ‌ವಾಗಿ ಅನಂತಕುಮಾರ್ ಬೆಳವಣಿಗೆಯಲ್ಲಿ‌ ಅಡ್ವಾಣಿ ಆಶೀರ್ವಾದದ ಪಾಲು‌ ದೊಡ್ಡದು ಬಹುಶಃ. ಇದೇ ಕಾರಣಕ್ಕೆ ಮೋದಿ ಕಾಲದ ಪ್ರಾರಂಭದ‌ ದಿನಗಳಲ್ಲಿ ನಿರ್ಲಕ್ಷ್ಯಕ್ಕೀಡಾದರು. ತಕ್ಷಣ ಸುಧಾರಿಸಿಕೊಂಡು ಗುರುನಿಷ್ಠೆಯಿಂದ ಅಂತರ ಕಾಯ್ದುಕೊಂಡು ಚಾಣಾಕ್ಷತನದಿಂದ ಮೋದಿ-ಶಾ ಸಂಬಂಧವನ್ನೂ ಸರಿಪಡಿಸಿಕೊಂಡರು.

      ರಾಜಕೀಯವಾಗಿ ಮಹತ್ವಾಕಾಂಕ್ಷಿಯಾಗಿದ್ದ ಅನಂತಕುಮಾರ್ ಅವರಿಗೆ ರಾಜ್ಯದ‌ ಮುಖ್ಯಮಂತ್ರಿಯಾಗುವ ಆಸೆ ಮಾತ್ರವಲ್ಲ ವಿಶ್ವಾಸವೂ ಇತ್ತು. ಯಾರಿಗೆ ಗೊತ್ತು? ಆಗುತ್ತಿದ್ದರೋ ಏನೋ? ಇನ್ನೆಲ್ಲಿ?

      ಅಟಲ್, ಅಡ್ವಾಣಿ ಸಾಲಿನಲ್ಲಿ...

      ಅಟಲ್, ಅಡ್ವಾಣಿ ಸಾಲಿನಲ್ಲಿ...

      ಸಾಮಾನ್ಯವಾಗಿ‌ ಸಂಪುಟ ಸಭೆಯಲ್ಲಿ‌ ಇಂಗ್ಲೀಷ್ ಅಕ್ಷರಗಳಿಗೆ‌ ಅನುಗುಣವಾಗಿ‌ ಸಚಿವರು ಕೂರುತ್ತಾರೆ ‌(ಈಗ ಗೊತ್ತಿಲ್ಲ). ಈ ಕಾರಣದಿಂದಾಗಿ A ಯಿಂದ ಪ್ರಾರಂಭವಾಗುವ ತಮ್ಮ‌ ಹೆಸರಿನಿಂದಾಗಿ ಸಂಪುಟ ಸಭೆಯಲ್ಲಿ‌ Atal, Adwani ನಂತರ ಅವರಿಗೆ ಕೂರುವ ಅವಕಾಶ ಇತ್ತು. ಅವರು ಸಂಪುಟ ಸಚಿವರಾಗಿದ್ದಾಗ ಪತ್ರಿಕೆಗೆ ಬಿಡುಗಡೆ‌ ಮಾಡಿದ್ದ ಮೊದಲ ಸರ್ಕಾರಿ‌ ಪ್ರಕಟಣೆಯಲ್ಲಿಯೂ ಅವರ ಹೆಸರು‌ ಅನುಕ್ರಮವಾಗಿ ಹೀಗೆಯೇ ಇತ್ತು.‌

      "ಈ ವಿಷಯ ಗೊತ್ತಿಲ್ಲದ ಜನ ಅಟಲ್, ಅಡ್ವಾಣಿ ನಂತರದ ಪವರ್‌ಪುಲ್ ಮನುಷ್ಯ ನಾನೇ ಎಂದು ಹೇಳುತ್ತಿದ್ದಾರೆ‌ ಗೊತ್ತಾ , ಹೆಸರಿನಲ್ಲಿಯೂ ನಾನು ಎಷ್ಟೊಂದು ಅದೃಷ್ಟಶಾಲಿ" ಎಂದು‌ ಒಮ್ಮೆ ಹೇಳಿ‌ ನಕ್ಕಿದ್ದು ನೆನಪಾಗುತ್ತಿದೆ. ಈ ಅದೃಷ್ಟ‌ ಸಾವಿನ ವಿರುದ್ಧದ ಹೋರಾಟದಲ್ಲಿ ಮಾತ್ರ ಅವರ ನೆರವಿಗೆ ಬರಲಿಲ್ಲ. Miss you.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+