ಅಮೂಲ್ ಪರ ವಕಾಲತ್ತು ವಹಿಸಲು ಬಿಜೆಪಿಗರಿಗೆ ಕಮಿಷನ್ ಸಿಗುತ್ತಿದೆಯೇ- ಸಂಚಲನ ಸೃಷ್ಟಿಸಿದ ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಏಪ್ರಿಲ್ 10: ಕರ್ನಾಟಕ ವಿಧಾನಸಭೆ ಚುನಾವಣೆಗೂ ( Karnataka Assembly Election 2023 ) ಮುನ್ನ ಅಮೂಲ್ ( Amul ) ಹಾಗೂ ನಂದಿನಿ ( Nandini ) ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಇದೇ ವೇಳೆ, ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಅಮೂಲ್ ಪರ ವಕಾಲತ್ತು ವಹಿಸುತ್ತಿರುವ ಬಿಜೆಪಿಗರಿಗೆ ಕಮಿಷನ್ ಸಿಗುತ್ತಿದೆಯೇ?' ಎಂದು ಪ್ರಶ್ನಿಸಿದೆ.
'ಕನ್ನಡಿಗರು ಅಮೂಲ್ ವಿರೋಧಿಸಿದರೆ ತಮ್ಮನ್ನೇ ವಿರೋಧಿಸಿದಂತೆ ಬಿಜೆಪಿಗರೇಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ ಬಿಜೆಪಿಗರು ಏಕೆ ಅಮೂಲ್ ಪರ ವಹಿಸಿ ಮಾತಾಡುತ್ತಿದ್ದಾರೆ? ಅಮೂಲ್ ಪರ ವಕಾಲತ್ತು ವಹಿಸಲು ಬಿಜೆಪಿಗರಿಗೆ ಕಮಿಷನ್ ಸಿಗುತ್ತಿದೆಯೇ?' ಎಂದು ಕಾಂಗ್ರೆಸ್ ಕೇಳಿದೆ.

'ಬೇರೆ ಬ್ರಾಂಡ್ ಹಾಲುಗಳಿಗೆ ಇಲ್ಲದ ವಿರೋಧ ಅಮೂಲ್ಗೆ ಏಕೆ ಎಂದು ಮೂಢ ಬಿಜೆಪಿಗರು ಜಾಣಕುರುಡರಂತೆ ಪ್ರಶ್ನಿಸುತ್ತಿದ್ದಾರೆ. ಬೇರೆ ಬ್ರಾಂಡ್ಗಳಿಗೆ ಅಮಿತ್ ಶಾ ಕೃಪಾಕಟಾಕ್ಷ ಇದೆಯೇ? ನಂದಿನಿಯನ್ನು ವಿಲೀನಗೊಳಿಸುತ್ತೇವೆ ಎಂದಿದ್ದು ಅಮೂಲ್ ಜೊತೆಗೆ ಹೊರತು ಬೇರೆ ಬ್ರಾಂಡ್ಗಳೊಂದಿಗೆ ಅಲ್ಲ. ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
'ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದ ರೈತರಿಗೆ ಹೈನುಗಾರಿಕೆ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸುತ್ತದೆ. ಕೆಎಂಎಫ್ ಸಂಸ್ಥೆಯ ಉನ್ನತಿಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ನಂದಿನಿ ಬ್ರಾಂಡ್ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕ್ರಮ ತೆಗೆದುಕೊಳ್ಳುಲಾಗುತ್ತದೆ. ಮುಖ್ಯವಾಗಿ ನಂದಿನಿಯನ್ನು ಗುಜರಾತಿನ ಹಿತಾಸಕ್ತಿಗೆ ಬಲಿ ಕೊಡುವುದನ್ನು ಶತಾಯಗತಾಯ ತಡೆಯುತ್ತೇವೆ. ಇವರ ಮಾತುಗಳಲ್ಲೇ ನಂದಿನಿಯನ್ನು ಮುಳುಗಿಸುವ ಹುನ್ನಾರ ಎದ್ದು ಕಾಣುತ್ತಿದೆ' ಎಂದು ಕಾಂಗ್ರೆಸ್ ಹೇಳಿದೆ.
'ಕನ್ನಡದ ಮೊಸರನ್ನು ಹಿಂದಿಯ ದಹಿ ಮಾಡಿದ್ರಿ, ಕನ್ನಡದ ನಂದಿನಿಯನ್ನು ಉತ್ತರದ ಅಮೂಲ್ ಮಾಡಲು ಹೊರಟಿದ್ದೀರಿ. ಬಸವರಾಜ ಬೊಮ್ಮಾಯಿ ಸಾರ್, ಕನ್ನಡದ ಗೋವುಗಳೂ ಈಗ ಹಿಂದಿ ಕಲಿಯಬೇಕಾ? ಸಿಂಧಿ ಹಸುಗಳಾಗಿದ್ದೆವು, ಈಗ ಹಿಂದಿ ಹಸುಗಳಾಗಬೇಕಾ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

ಇತ್ತೀಚೆಗೆ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಅಥವಾ ಅಮೂಲ್ ಕರ್ನಾಟಕ ಪ್ರವೇಶಿಸುವುದಾಗಿ ಘೋಷಿಸಿದೆ. ಇದು ಕರ್ನಾಟಕದಲ್ಲಿ ಭಾರೀ ರಾಜಕೀಯ ವಿವಾದವನ್ನು ಹುಟ್ಟು ಹಾಕಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿಯ ಕುಮ್ಮಕ್ಕು ಕಾರಣವೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದೆ.
'ಸೇವ್ ನಂದಿನಿ' ಮತ್ತು 'ಗೋ ಬ್ಯಾಕ್ ಅಮೂಲ್' ಹ್ಯಾಶ್ಟ್ಯಾಗ್ಗಳ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆರಂಭವಾಗಿದ್ದು, ಎರಡೂ ಕಡೆಯ ರಾಜಕಾರಣಿಗಳು ವಾದ- ಪ್ರತಿವಾದಗಳಲ್ಲಿ ತೊಡಗಿದ್ದಾರೆ.
ಬಸವರಾಜ ಬೊಮ್ಮಾಯಿ ಸರಕಾರ ರಾಜ್ಯದ ಹೆಮ್ಮೆಯನ್ನು ನಾಶಪಡಿಸಲು ಯತ್ನಿಸುತ್ತಿದೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್ನ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರಕಾರ ಅಮೂಲ್ ಉತ್ಪನ್ನಗಳಿಗೆ ಹಿಂಬಾಗಿಲು ಪ್ರವೇಶ ನೀಡಿದೆ ಎಂದು ಟೀಕಿಸಿದ್ದಾರೆ. ಇದು ಸ್ಥಳೀಯ ಬ್ರ್ಯಾಂಡ್ ನಂದಿನಿಗೆ ತೊಂದರೆ ಸೃಷ್ಟಿಸುತ್ತಿದೆ.

ಏತನ್ಮಧ್ಯೆ, ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೋಟೆಲ್ ಮಾಲೀಕರಿಗೆ ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಲು ಮತ್ತು ಕರ್ನಾಟಕದ ಡೈರಿ ರೈತರನ್ನು ಬೆಂಬಲಿಸಲು ನಂದಿನಿಯನ್ನು ಬಳಸುವಂತೆ ಕೇಳಿಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಅಮೂಲ್ ಉತ್ಪನ್ನಗಳನ್ನು ರಸ್ತೆಗೆ ಎಸೆದು ಪ್ರತಿಭಟನೆ ನಡೆಸಿದ್ದಾರೆ.












Click it and Unblock the Notifications