ಸೈನಿಕರೂ ತಪ್ಪು ಮಾಡಿರಬಹುದು: ಅಮ್ನೆಸ್ಟಿಗೆ ರಾಜ್ಯದಲ್ಲಿ ರೆಡ್ ಕಾರ್ಪೆಟ್
ಬೆಂಗಳೂರು, ಆಗಸ್ಟ್ 21: ಸಿದ್ದರಾಮಯ್ಯ ಸರಕಾರದ ವಿವಾದಾತ್ಮಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಗೃಹ ಸಚಿವ ಪರಮೇಶ್ವರ್ ನೀಡುತ್ತಿರುವ ಹೇಳಿಕೆಗಳು ಅವರ ವೃತ್ತಿ ಬದುಕಿನ ಜ್ಞಾನವನ್ನೇ ಪ್ರಶ್ನಿಸುವಂತಿದೆ.
ವಿಶ್ವದ ಹಲವು ರಾಷ್ಟಗಳು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯನ್ನು ನಿರ್ಬಂಧಿಸಿದ್ದರೂ, ಅಮ್ನೆಸ್ಟಿಗೆ ದೇಶದ್ರೋಹದ ಇತಿಹಾಸವಿಲ್ಲ, ಆ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ತಪ್ಪೇನಿಲ್ಲ, ಸೈನಿಕರದ್ದೂ ತಪ್ಪಿರಬಹುದು ಎಂದು ಸರಕಾರದ ಕ್ರಮವನ್ನು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. (ಎಬಿವಿಪಿ ಧರಣಿಗೆ ನಿವೃತ್ತ ಸೈನಿಕರ ಬೆಂಬಲ)
ದೇಶ ವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸಬೇಕೆಂದು ಎಬಿವಿಪಿ, ನಿವೃತ್ತ ಸೈನಿಕರು, ಆರ್ ಎಸ್ ಎಸ್, ಸಿಟಿಜನ್ ಫಾರ್ ಡೆಮೊಕ್ರಾಸಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಬಿಜೆಪಿ ಕುಮ್ಮುಕ್ಕು ನೀಡುತ್ತಿದೆ ಎಂದು ರಾಜ್ಯ ಸರಕಾರ ಅಮ್ನೆಸ್ಟಿ ಪರವಾಗಿ ನಿಂತಂತಿದೆ.
ವಿಶ್ವದ ವಿವಿದೆಡೆ ನಡೆಯುವ ಪ್ರತಿಭಟನೆಗಳನ್ನು ತನ್ನ ಕಣ್ಣಿನ ನೇರಕ್ಕೆ ವರದಿ ಮಾಡುತ್ತದೆ ಎನ್ನುವ ಆರೋಪ ಹೊತ್ತಿರುವ ಅಮ್ನೆಸ್ಟಿ ಸಂಸ್ಥೆಯನ್ನು ಅಮೆರಿಕ, ಚೀನಾ, ರಷ್ಯಾ ಮುಂತಾದ ದೇಶಗಳು ಈಗಾಗಲೇ ನಿರ್ಬಂಧಿಸಿವೆ.
ಅಮ್ನೆಸ್ಟಿ ವಿರುದ್ದ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಅಮ್ನೆಸ್ಟಿ ವಿರುದ್ದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಅಮ್ನೆಸ್ಟಿ ಘಟನೆ ನಡೆದ ಕೂಡಲೇ ಆ ಸಂಘಟನೆಯ ವಿರುದ್ದ ಕಿಡಿಕಾರಿದ್ದ ಪರಮೇಶ್ವರ್, ಈಗ ಆ ಸಂಸ್ಥೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮುಂದೆ ಓದಿ..
ಆರ್ ಅಶೋಕ್ ಹೇಳಿಕೆ
ಅಮ್ನೆಸ್ಟಿ ವಿಚಾರದಲ್ಲಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಗೆ ಸೈನಿಕರು ಮತ್ತು ದೇಶದ್ರೋಹಿಗಳ ನಡುವೆ ವ್ಯತ್ಯಾಸವೇನು ಎನ್ನುವುದು ತಿಳಿದಿಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವರಲ್ಲಿ ದೂರು ನೀಡುವುದಾಗಿ ಮಾಜಿ ಗೃಹ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಪರಮೇಶ್ವರ್
ಕಾಶ್ಮೀರದಲ್ಲಿ ಸೈನಿಕರೂ ತಪ್ಪು ಮಾಡಿರಬಹುದು. ನೋವುಂಡವರಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲು ಅಮ್ನೆಸ್ಟಿ ವೇದಿಕೆ ರೂಪಿಸಿದೆ, ಇದರಲ್ಲಿ ತಪ್ಪೇನಿದೆ. ಪ್ರತಿಭಟನೆ ನಡೆಸುತ್ತಿರುವ ಎಬಿವಿಪಿ ಹಿನ್ನಲೆ ಎಲ್ಲರಿಗೂ ಗೊತ್ತಿದೆ ಎಂದು ಪರಮೇಶ್ವರ್ ಅಮ್ನೆಸ್ಟಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ದೇಶ ವಿರೋಧಿ ಕೂಗು
ಶನಿವಾರ (ಆ 13) ಯುನೈಟೆಡ್ ಥಿಯಾಲಜಿಕಲ್ ಕಾಲೇಜಿನಲ್ಲಿ ಅಮ್ನೆಸ್ಟಿ 'ಬ್ರೋಕನ್ ಫ್ಯಾಮಿಲೀಸ್'ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕೆಲವು ದೇಶದ್ರೋಹಿಗಳು 'ಜಾನ್ ಸೇ ಲೇಂಗೆ ಆಜಾದಿ, ಕಾಶ್ಮೀರ್ ಸೇ ಲೇಂಗೆ ಆಜಾದಿ' ಮುಂತಾದ ಘೋಷಣೆಗಳನ್ನು ಕೂಗಿದ್ದರು.
ಸಿದ್ದರಾಮಯ್ಯ
ಈ ವಿಚಾರದಲ್ಲಿ ಎಬಿವಿಪಿಯನ್ನು ಮುಂದಕ್ಕೆ ಬಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ. ಸಮಾಜದ ಶಾಂತಿ ಕದಡುವುದು ಬಿಜೆಪಿ ಮತ್ತು ಸಂಘ ಪರಿವಾರದ ಕೆಲಸ. ಅಮ್ನೆಸ್ಟಿ ವಿಚಾರದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ - ಸಿದ್ದರಾಮಯ್ಯ.
ಯಡಿಯೂರಪ್ಪ
ದೇಶ ವಿರೋಧಿ ಘೋಷಣೆ ಕೂಗಿದವರನ್ನು ರಕ್ಷಿಸುವ ಕೆಲಸಕ್ಕೆ ಸರಕಾರ ಮುಂದಾಗಿದೆ. ಸಿದ್ದರಾಮಯ್ಯನವರ ಹಠಮಾರಿ ನಿರ್ಧಾರ ಇಂದು ನಿನ್ನೆಯದಲ್ಲ. ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಿಲ್ಲಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಿದೆ - ಯಡಿಯೂರಪ್ಪ.
ಅಮ್ನೆಸ್ಟಿ
ಒಂದು ವೇಳೆ ಸಾಕ್ಷಿ ಸಮೇತ ಆರೋಪಿಗಳನ್ನು ಬಂಧಿಸಿದರೂ, ಕೋರ್ಟಿಗೆ ದೋಷಾರೋಪ ಪಟ್ಟಿಸಲು ರಾಜ್ಯ ಸರಕಾರ ಅನುಮತಿ ನೀಡಬೇಕಾಗಿದೆ. ಹಾಗಾಗಿ, ಇಲ್ಲಿ ರಾಜ್ಯ ಸರಕಾರ ಅಮ್ನೆಸ್ಟಿ ರಕ್ಷಣೆಗೆ ಮುಂದಾಗುವ ಸಾಧ್ಯತೆಯಿಲ್ಲದಿಲ್ಲ.