K Sudhakar: ಚುನಾವಣಾ ಗೆಲುವಿಗೆ ಮದ್ಯ, ಬಾಡೂಟದ ಮೂಲಕ ಧನ್ಯವಾದ ಹೇಳಿದ್ರಾ ಸಂಸದ ಸುಧಾಕರ್!?
ಬೆಂಗಳೂರು, ಜುಲೈ. 08: ನೂತನವಾಗಿ ಆಯ್ಕೆಯಾಗಿರುವ ಚಿಕ್ಕಬಳ್ಳಾಪುರ ಬಿಜೆಪಿ ಲೋಕಸಭಾ ಸದಸ್ಯ ಡಾ.ಕೆ.ಸುಧಾಕರ್ ಭಾನುವಾರ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನೆಲಮಂಗಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಮದ್ಯ, ಬಾಡೂಟ ನೀಡಲಾಗಿದೆ.
ಉಚಿತವಾಗಿ ನೀಡುತ್ತಿದ್ದ ಮದ್ಯಕ್ಕಾಗಿ ಜನ ಹರಸಾಹಸ ಪಟ್ಟಿದ್ದು, ಕಾರ್ಯಕ್ರಮ ಗೊಂದಲದ ಗೂಡಾಯಿತು. ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಸುಮ್ಮನಾಗಬೇಕಾಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಕಾರ್ಯಕ್ರಮದಲ್ಲಿ ಬಾಡೂಟ, ಬಿಯರ್ ಮತ್ತು ಗಟ್ಟಿಯಾದ ಮದ್ಯದ ಪ್ಯಾಕೆಟ್ಗಳನ್ನು ನೀಡಲಾಗುತ್ತಿತ್ತು. ಸಂಘಟಕರು 10,000 ರಿಂದ 15,000 ಜನಸಂದಣಿಯನ್ನು ನಿರೀಕ್ಷಿಸಿದ್ದರು, ಆದರೆ 60,000 ಕ್ಕೂ ಹೆಚ್ಚು ಜನರು ಕೃತಜ್ಞತಾ ಸಮಾರಂಭಕ್ಕೆ ಬಂದ ಕಾರಣ, ಜನಸಂದಣಿಯನ್ನು ನಿಯಂತ್ರಿಸುವುದು ಅಸಾಧ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನಿಷ್ಠ ಭವಿಷ್ಯದಲ್ಲಿ ಅಬಕಾರಿ ಇಲಾಖೆ ಇಂತಹ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪರವಾನಗಿ ನೀಡಬಾರದು ಎಂದು ಸೂಚಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಅವರು, ಅಬಕಾರಿ ಇಲಾಖೆ ಅನುಮತಿ ನೀಡಿದ್ದು, ಬಂದೋಬಸ್ತ್ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ, ಇದರಲ್ಲಿ ಪೊಲೀಸ್ ಇಲಾಖೆಯ ತಪ್ಪಿಲ್ಲ, ಅನುಮತಿ ನೀಡುವ ಜವಾಬ್ದಾರಿ ಅಬಕಾರಿ ಇಲಾಖೆಯ ಮೇಲಿದೆ ಎಂದಿದ್ದಾರೆ.

ಆದರೆ ಅಬಕಾರಿ ಉಪ ಆಯೋಗದ ನಾಗೇಶ್ ಕುಮಾರ್ ಅವರನ್ನು ಉಲ್ಲೇಖಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, "ಆಯೋಜಕರು ಅನುಮತಿಗಾಗಿ ನೆಲಮಂಗಲ ಡಿವೈಎಸ್ಪಿ ಮುಂದೆ ಅರ್ಜಿ ಸಲ್ಲಿಸಿದರು. 11,500 ರೂ ಶುಲ್ಕವನ್ನು ಪಾವತಿಸಿದರು, ನಂತರ ನಾವು ಒಂದು ದಿನದ ಪರವಾನಗಿಯನ್ನು ನೀಡಿದ್ದೇವೆ" ಎಂದಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಶಾಸಕ ನಾಗರಾಜು, ಜೆಡಿಎಸ್ನ ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ ಭಾಗವಹಿಸಿದ್ದರು.
ಇತ್ತ, ಚಿಕ್ಕಬಳ್ಳಾಪುರ ಸಂಸದ ಕೆ ಸುಧಾಕರ್ ಅವರು, "ನನಗೆ ಮದ್ಯ ವಿತರಣೆಯ ಬಗ್ಗೆ ತಿಳಿದಿಲ್ಲ ಮತ್ತು ನಾನು ಅಂತಹ ವಿಷಯಗಳನ್ನು ಪ್ರೋತ್ಸಾಹಿಸುವುದಿಲ್ಲ. ಭಾಗವಹಿಸುವವರು ಎಲ್ಲೋ ಮದ್ಯವನ್ನು ಖರೀದಿಸಿದ್ದಾರೆ ಮತ್ತು ಅದನ್ನು ಸ್ಥಳದಲ್ಲಿ ಕುಡಿದಿದ್ದಾರೆ" ಎಂದು ಹೇಳಿ ವಿಷಯದಿಂದ ಜಾರಿಕೊಂಡಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪರದ ಸಂಸದರ ಕಚೇರಿಯಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, "ಈ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ಘಟನೆ ಬಗ್ಗೆ ತಿಳಿಯಿತು. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಮ್ಮದೇ ಕಾರ್ಯಕರ್ತರು ಮದ್ಯ ಹಂಚಿಕೆ ಮಾಡಿದ್ರೆ ಅದು ತಪ್ಪು. 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ" ಎಂದಿದ್ದಾರೆ.
ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ....
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 7, 2024
ರಾಜ್ಯ ಡೆಂಗಿ ಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ ? ಇದೇನಾ ನಿಮ್ಮ ಸಂಸ್ಕ್ರತಿ ?@DrSudhakar_ @BJP4Karnataka pic.twitter.com/RK67AQhFxx
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಟೀಕೆ ಮಾಡಿದ್ದಾರೆ. "ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ.... ರಾಜ್ಯ ಡೆಂಗಿ ಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ ? ಇದೇನಾ ನಿಮ್ಮ ಸಂಸ್ಕೃತಿ.. ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications