ಎಎಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ದಿಲೀಪ್ ಪಾಂಡೆ ನೇಮಕ
ಬೆಂಗಳೂರು, ಮಾರ್ಚ್, 31: ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಚುನಾವಣಾ ಉಸ್ತುವಾರಿಯಾಗಿ ದೆಹಲಿ ಶಾಸಕ ಹಾಗೂ ದೆಹಲಿಯ ಎಎಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಪಾಂಡೆ ನೇಮಕಗೊಂಡಿದ್ದಾರೆ. ಕರ್ನಾಟಕ ಅಲ್ಲದೆ, ಬಿಹಾರ, ಹಿಮಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಹರ್ಯಾಣ, ಕೇರಳ ಹಾಗೂ ರಾಜಸ್ಥಾನ ರಾಜ್ಯಗಳಿಗೂ ಚುನಾವಣಾ ಉಸ್ತುವಾರಿಗಳನ್ನು ಆಮ್ ಆದ್ಮಿ ಪಕ್ಷ ನೇಮಿಸಿದೆ.
ಉತ್ತರಪ್ರದೇಶ ಮೂಲದವರಾದ ದಿಲೀಪ್ ಪಾಂಡೆಯವರು 2011ರಲ್ಲಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಭಾರತ ಸತ್ಯಾಗ್ರಹದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದರು. ನಂತರ ಅರವಿಂದ್ ಕೇಜ್ರಿವಾಲ್ರವರು ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದಾಗ ಪಕ್ಷಕ್ಕೆ ಸೇರ್ಪಡೆಯಾದರು. 2015ರಲ್ಲಿ ಪಕ್ಷದ ದೆಹಲಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ದಿಲೀಪ್ ಪಾಂಡೆ, ಅದೇ ವರ್ಷ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಬಹುಮತದೊಂದಿಗೆ ಗೆದ್ದಿದ್ದರ ಹಿಂದೆ ಮಹತ್ವದ ಪಾತ್ರವಹಿಸಿದ್ದರು. ಪ್ರಸ್ತುತ ದೆಹಲಿಯ ತಿಮಾರ್ಪುರ ಕ್ಷೇತ್ರದ ಶಾಸಕರಾಗಿ , ದೆಹಲಿ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಎಎಪಿ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹೊಂದಿರುವ ಆಮ್ ಆದ್ಮಿ ಪಾರ್ಟಿಗೆ ಇತರೆ ರಾಜ್ಯಗಳಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಿಲೀಪ್ ಪಾಂಡೆಯವರು ರಾಜ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವುದು ಮಹತ್ವ ಪಡೆದುಕೊಂಡಿದೆ.

ಕರ್ನಾಟಕಕ್ಕೆ ಶಾಸಕ ದಿಲೀಪ್ ಪಾಂಡೆಯನ್ನು ಮತ್ತು ಬಿಹಾರಕ್ಕೆ ಶಾಸಕ ಅಜೇಶ್ ಯಾದವ್ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಿಸಿದೆ. ಶಾಸಕ ಅಜಯ್ ದತ್ ಅವರನ್ನು ಹಿಮಾಚಲ ಪ್ರದೇಶದ ಸಹ-ಚುನಾವಣಾ ಉಸ್ತುವಾರಿಯಾಗಿ ಮತ್ತು ಹಿರಿಯ ನಾಯಕ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಹರಿಯಾಣದ ಸಹ-ಪ್ರಭಾರಿಯಾಗಿ ನೇಮಿಸಲಾಗಿದೆ ಎಂದು ಎಎಪಿ ಪ್ರಕಟಿಸಿದೆ. ರಾಜ್ಯ ಮಟ್ಟದ ತಂಡಗಳನ್ನು ನಿರ್ಮಿಸಲು ಒಂಬತ್ತು ಪ್ರಮುಖ ರಾಜ್ಯಗಳಿಗೆ ಹೊಸ ಪದಾಧಿಕಾರಿಗಳನ್ನು ಘೋಷಿಸಿದ ಒಂದು ವಾರದ ನಂತರ ಈ ಪ್ರಕಟಣೆ ಹೊರ ಬಂದಿದೆ.












Click it and Unblock the Notifications