ಎಎಪಿಯಿಂದ ಲಂಚಮುಕ್ತ ಕರ್ನಾಟಕ ಅಭಿಯಾನ
ಬೆಂಗಳೂರು, ಅಕ್ಟೋಬರ್ 08 : ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ 'ಲಂಚಮುಕ್ತ ಕರ್ನಾಟಕ' ಎಂಬ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 13 ರಿಂದ 17ರ ತನಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಲಿದೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದರು. 'ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಆಡಳಿತವನ್ನು ನೋಡಿ ಜನರು ಕಾಂಗ್ರೆಸ್ಗೆ ಮತ ನೀಡಿದ್ದರು. ಆದರೆ, ದುರದೃಷ್ಟದ ವಿಷಯವೆಂದರೆ ಈ ಸರ್ಕಾರ ಭ್ರಷ್ಟಾಚಾರವನ್ನು ನಿಯಂತ್ರಿಸಲು ವಿಫಲವಾಗಿದೆ' ಎಂದು ಅವರು ದೂರಿದರು. [ನೂರು ರೂ. ಲಂಚಪಡೆದವನಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ]

'ಇಡೀ ದೇಶಕ್ಕೆ ಮಾದರಿಯಾಗಿದ್ದ ನಮ್ಮ ರಾಜ್ಯದ ಲೋಕಾಯುಕ್ತ ಸಂಸ್ಥೆ ಇಂದು ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಲೋಕಾಯುಕ್ತರು ರಜೆ ಪಡೆದುಕೊಂಡು ಹೋಗಿದ್ದಾರೆ. ಒಂದು ಉಪಲೋಕಾಯುಕ್ತ ಹುದ್ದೆ ಇನ್ನೂ ಖಾಲಿ ಇದೆ. ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಲ್ಲಿ ಲಂಚವಿಲ್ಲದೆ ಕೆಲಸವಾಗುತ್ತಿಲ್ಲ' ಎಂದು ಅವರು ಆರೋಪಿಸಿದರು. ['ಸರ್ಕಾರ ಲೋಕಾಯುಕ್ತರನ್ನು ರಕ್ಷಿಸುತ್ತಿರುವುದೇಕೆ?']
'ನಮ್ಮ ಪಕ್ಷದ ಕಚೇರಿಗೆ ಮತ್ತು ಕಾರ್ಯಕರ್ತರಿಗೆ ರಾಜ್ಯದ ವಿವಿಧ ಭಾಗಗಳಿಂದ ಲಂಚ ಮತ್ತು ಭ್ರಷ್ಟಾಚಾರದ ವಿಚಾರವಾಗಿ ಕರೆಗಳು ಬರುತ್ತಿರುತ್ತವೆ. ಸ್ಥಳೀಯ ಲೋಕಾಯುಕ್ತಕ್ಕೆ ತಿಳಿಸಿ ಎಂದರೆ ಲೋಕಾಯುಕ್ತ ಎಲ್ಲಿದೆ? ಎಂದು ಪ್ರಶ್ನೆ ಮಾಡುತ್ತಾರೆ' ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.
ಏನಿದು ಅಭಿಯಾನ? : 'ಹೀಗೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ 'ಲಂಚಮುಕ್ತ ಕರ್ನಾಟಕ' ಅಭಿಯಾನವನ್ನು ಆರಂಭಿಸುತ್ತಿದೆ. ಎಲ್ಲೆಲ್ಲಿ ಸರ್ಕಾರಿ ಅಧಿಕಾರಿಗಳು ನ್ಯಾಯಬದ್ಧ ಕೆಲಸ ಮಾಡಿಕೊಡಲು ಜನಸಾಮಾನ್ಯರನ್ನು ಲಂಚದ ಹೆಸರಿನಲ್ಲಿ ಸುಲಿಗೆ ಮಾಡುವ ದೂರುಗಳು ಬರುತ್ತವೆಯೋ ಅಲ್ಲಿ, ನಮ್ಮ ಪಕ್ಷದ ಕಾರ್ಯಕರ್ತರು ಹೋಗಿ ಲಂಚ ಕೇಳಿದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ವಿವರಣೆ ಕೇಳುವ ಮತ್ತು ಲಂಚವಿಲ್ಲದೆ ಕೆಲಸ ಆಗುವ ರೀತಿಯಲ್ಲಿ ಪ್ರಯತ್ನ ಮಾಡಲಿದ್ದಾರೆ'.
ಅಕ್ಟೋಬರ್ 13ರ ಮಂಗಳವಾರದಿಂದ 17ರ ತನಕ 'ಲಂಚಮುಕ್ತ ಬೆಂಗಳೂರು ಸಪ್ತಾಹ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರು ನಗರದ ಆಯ್ದ ನೋಂದಣಾಧಿಕಾರಿಗಳ ಕಚೇರಿ ಮತ್ತು ಆರ್ಟಿಓ ಕಛೇರಿಗಳ ಬಳಿ ತೆರಳಿ ಅಂದು ಕಛೇರಿಗಳಲ್ಲಿ ಲಂಚ, ಕಿರುಕುಳಗಳಿಲ್ಲದ ರೀತಿಯಲ್ಲಿ ಕೆಲಸ ಮಾಡಿಕೊಡುವಂತೆ ನೋಡಿಕೊಳ್ಳಲಿದೆ ಎಂದರು.
ಇದು ಯಾವುದೇ ಸರ್ಕಾರಿ ಅಧಿಕಾರಿಗಳ ವಿರುದ್ಧವಾಗಲಿ, ಒಂದು ರಾಜಕೀಯ ಪಕ್ಷದ ವಿರುದ್ಧವಾಗಲಿ ಮಾಡುತ್ತಿರುವ ಚಳವಳಿ ಅಲ್ಲ. ಇದು ಒಟ್ಟಾರೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಆಮ್ ಆದ್ಮಿ ಪಕ್ಷ ಜನರೊಂದಿಗೆ ಸೇರಿ ಮಾಡುತ್ತಿರುವ ಸಂಘಟಿತ ಹೋರಾಟವಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.












Click it and Unblock the Notifications