ಚಾಮರಾಜನಗರ ಕೋಳಿ ಕಾಳಗಕ್ಕೆ ಬಂದು ಜೈಲು ಸೇರಿದ್ರು
ಚಾಮರಾಜನಗರ,ಜನವರಿ,18: ನಿಷೇಧ ಲೆಕ್ಕಿಸದೆ ಕೋಳಿ ಕಾಳಗದಲ್ಲಿ ತೊಡಗಿದ ಕೊಳ್ಳೇಗಾಲ ತಾಲೂಕಿನ ಹನೂರು ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಪುದು ರಾಮಾಪುರದ ಕೆಲವು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಳಿಕಾಳಗದಲ್ಲಿ ಭಾಗವಹಿಸಿದ ತಮಿಳುನಾಡಿನ ಈರೋಡ್ ಜಿಲ್ಲೆಯ ನಾತಮೇಡು ಗ್ರಾಮದ ಮಾರಿಮುತ್ತು, ಮುರುಗೇಶ್, ಸೋಲೆಗೌಂಡರ್, ಮಾರಿಮುತ್ತು, ವಿಜಯ್ ಕುಮಾರ್, ಸೆಂದಿಲ್, ಸತೀಶ್, ಚಿನ್ನಸ್ವಾಮಿ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ಗೋವಿಂದರಾಜು ಮತ್ತು ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದು, ಬಂಧಿತರಿಂದ 5 ಕೋಳಿ, 4500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.[ಜಲ್ಲಿಕಟ್ಟು ,ಅಪಾಯಕಾರಿ ರೋಮಾಂಚನಕಾರಿ]
ಸಂಕ್ರಾಂತಿ ಹಬ್ಬ ಮುಗಿದ ನಂತರ ಸತತ ಎರಡು ದಿನಗಳು ಕೋಳಿ ಕಾಳಗ ನಡೆಯುತ್ತದೆ. ಈ ವರ್ಷವೂ ವಿವಿಧೆಡೆಯಿಂದ ಕೋಳಿಗಳನ್ನು ತಂದು ಕಾದಾಟ ನಡೆಸಿ ಅವುಗಳಿಂದ ಹಣ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದ ಕಾರಣ ಪ್ರತಿವರ್ಷದಂತೆ ಈ ಬಾರಿಯೂ ನಿಷೇಧ ಹೇರಲಾಗಿತ್ತು, ಆದರೂ ನಿಷೇಧ ಲೆಕ್ಕಿಸದೆ ಪುದು ರಾಮಾಪುರದಲ್ಲಿ ಕೋಳಿಕಾಳಗದಲ್ಲಿ ಪಾಲ್ಗೊಂಡಿದ್ದರು.[ಹುಲಿ, ಮೇಕೆಯ ಹಾಡು..."ಯೇ ದೋಸತಿ ಹಮ್ ನಹಿ ಛೋಡೆಂಗೆ"]
ಕೋಳಿಗಳ ಕಾಲಿಗೆ ಚೂರಿ (ಬ್ಲೇಡ್) ಕಟ್ಟಿ ಕಾಳಗಕ್ಕೆ ಬಿಡಲಾಗುತ್ತದೆ. ಎರಡು ಕೋಳಿಗಳ ಮೇಲೆ ಹಣ ಕಟ್ಟಲಾಗುತ್ತದೆ. ಈ ಜೂಜಾಟದಲ್ಲಿ ಭಾಗವಹಿಸಿ ಕೆಲವರು ಜೇಬು ತುಂಬಿಸಿಕೊಂಡರೆ ಮತ್ತೆ ಕೆಲವರು ಜೇಬು ಖಾಲಿ ಮಾಡಿಕೊಂಡು ತೆರಳುತ್ತಾರೆ. ಇಂತಹ ಜೂಜಾಟವನ್ನು ನಿಷೇಧಿಸಬೇಕೆಂದು ಸಾರ್ವಜನಿಕರಿಂದ ಒತ್ತಾಯ ಬಂದ ಕಾರಣ ಪೊಲೀಸರು ಕಾಳಗದ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.