ಸಂಕ್ರಾತಿ ಮುನ್ನಾದಿನ ಕಬ್ಬಿನಡಿ ಸಿಲುಕಿ 9 ಸಾವು
ಬಾಗಲಕೋಟೆ, ಜ.13 : ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ 9 ಜನರು ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೊದಲಬಾಗಿಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಬಾಗಲಕೋಟೆಯ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ 20 ಟನ್ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಸಂತೆಗೆ ಬಂದಿದ್ದ ಜನರ ಮೇಲೆ ಉರುಳಿ ಬಿದ್ದ ಪರಿಣಾಮ, 20ಕ್ಕೂ ಹೆಚ್ಚು ಜನರು ಕಬ್ಬಿನಡಿ ಸಿಲುಕಿದ್ದರು. ಇವರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಜಮಖಂಡಿಯಲ್ಲಿರುವ ರೇಣುಕಾ ಸಕ್ಕರೆ ಕಾರ್ಖನೆಗೆ ಟ್ರ್ಯಾಕ್ಟರ್ ನಲ್ಲಿ ಕಬ್ಬು ಸಾಗಿಸಲಾಗುತ್ತಿತ್ತು. ತೊದಲಬಾಗಿ ಸಮೀಪ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ತೊದಲಬಾಗಿಯಲ್ಲಿ ಸೋಮವಾರ ಸಂತೆ ನಡೆಯುತ್ತಿತ್ತು. ಟ್ರ್ಯಾಕ್ಟರ್ ಸಂತೆಗೆ ಬಂದ ಜನರ ಮೇಲೆಯೇ ಉರುಳಿ ಬಿದ್ದಿದೆ. ಇದರಿಂದ ಸಂತೆಗೆ ಬಂದ ಜನರು ಕಬ್ಬಿನಡಿ ಸಿಲುಕಿದರು.
ಸ್ಥಳಕ್ಕೆ ಆಗಮಿಸಿದ ಸಾವಳಗಿ ಠಾಣೆ ಪೊಲೀಸರು ತಕ್ಷಣ ಕಬ್ಬನ್ನು ತೆರವುಗೊಳಿಸಿ ಜನರನ್ನು ರಕ್ಷಿಸುವ ಕಾರ್ಯಚರಣೆಯನ್ನು 2 ಜೆಸಿಬಿಗಳ ಸಹಾಯದಿಂದ ಕೈಗೊಂಡರು. ಕಾರ್ಯಾಚರಣೆ ಮುಗಿಯವು ವೇಳೆಗಾಗಲೇ ಕಬ್ಬಿನಡಿ ಸಿಲುಕಿದ್ದ 9 ಮಂದಿ ಸಾವನ್ನಪ್ಪಿದ್ದರು.6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟವರ ಹೆಸರುಗಳು : ಚೇತನ, ಗಂಗಾ, ಸಂಗವ್ವ(40), ಮಲ್ಲಪ್ಪ, ಮೊಹಮದ್ ಅಫ್ಜಲ್, ಯಲ್ಲಪ್ಪ ಭಜಂತ್ರಿ ಮುಂತಾದವರು.












Click it and Unblock the Notifications