ಹಳೆ ಹುಲಿಗಳ ಮುಖಾಮುಖಿಗೆ ಸಾಕ್ಷಿಯಾಗಲಿರುವ ಕ್ಷೇತ್ರಗಳು
ಬೆಂಗಳೂರು, ಮಾ.27 : ಲೋಕಸಭೆ ಚುನಾವಣೆ ಕಣ ರಂಗೇರಿದೆ, ಕಣದಲ್ಲಿರುವ ಅಭ್ಯರ್ಥಿಗಳು ಕದನಕ್ಕೆ ಸಜ್ಜಾಗಿದ್ದಾರೆ. 2009ರ ಚುನಾವಣೆ ಮತ್ತು ಉಪ ಚುನಾವಣೆಯಲ್ಲಿ ಮುಖಾಮುಖಿಯಾದ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿಯೂ ಪರಸ್ಪರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಹಳೆ ಹುಲಿಗಳ ಕಾಳಗದಲ್ಲಿ ಗೆಲುವು ಯಾರಿಗೆ ಎಂದು ಮತದಾರ ಪ್ರಭು ನಿರ್ಧರಿಸಬೇಕು.
ತುಮಕೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಚಿಕ್ಕೋಡಿ ಸೇರಿದಂತೆ ರಾಜ್ಯದ 8 ಲೋಕಸಭಾ ಕ್ಷೇತಗಳಲ್ಲಿ 2009ರ ಚುನಾವಣೆಯಲ್ಲಿ ಮುಖಾಮುಖಿಯಾದ ಅಭ್ಯರ್ಥಿಗಳು ಈ ಬಾರಿ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಗೆದ್ದ ಉತ್ಸಾಹದಲ್ಲಿ ಕೆಲವರಿದ್ದರೆ, ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಕೆಲವರು ಕಾರ್ಯತಂತ್ರ ರೂಪಿಸಿದ್ದಾರೆ. ಹಳೆ ಹುಲಿಯ ಮುಖಾಮುಖಿಯಾದ ಕ್ಷೇತ್ರಗಳು (ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ)

ಜನಾರ್ದನ ಪೂಜಾರಿ v/s ಕಟೀಲ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಚುನಾವಣೆ ಕಾವು ಹೆಚ್ಚಾಗಿದೆ. 2009ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲುಂಡಿದ್ದ ಹಿರಿಯ ನಾಯಕ ಜನಾರ್ದನ ಪೂಜಾರಿ ಮತ್ತು ಬಿಜೆಪಿಯಿಂದ ಸ್ಪರ್ಧಿಸಿ ಜಯಸಾಧಿಸಿದ್ದ ನಳೀನ್ ಕುಮಾರ್ ಕಟೀಲ್ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ 4 ಬಾರಿ ಗೆದ್ದು ಒಂದು ಬಾರಿ ಕೇಂದ್ರದ ಸಚಿವರಾಗಿದ್ದ ಪೂಜಾರಿ ಎದುರು ಕಟೀಲ್ ಗೆಲ್ಲವುದಿಲ್ಲ ಎಂಬ ಮಾತಿತ್ತು. ಆದರೆ, ಕಳೆದ ಬಾರಿ ಪೂಜಾರಿಗೆ ಸೋಲಿನ ರುಚಿ ತೋರಿಸಿದ್ದ ಕಟೀಲ್ ಈ ಬಾರಿಯು ಗೆಲುವಿನ ವಿಶ್ವಾಸದಲ್ಲಿದ್ದಾರೆ.

ದಾವಣಗೆರೆಯಲ್ಲಿ ಸಿದ್ದೇಶ್, ಮಲ್ಲಿಕಾರ್ಜುನ್ ಪೈಪೋಟಿ
2014ರ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಹಳೆ ಹುಲಿಗಳು ಅಖಾಡಕ್ಕೆ ಇಳಿದಿವೆ. 2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜಿ.ಎಂ.ಸಿದ್ದೇಶ್ವರ್ ಮತ್ತು ಸೋಲು ಅನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ ಈ ಚುನಾವಣೆಯಲ್ಲಿಯೂ ಗೆಲುವಿಗಾಗಿ ಪೈಪೋಟಿ ಆರಂಭಿಸಿದ್ದಾರೆ. ಮೋದಿ ಅಲೆಯಲ್ಲಿ ಸಿದ್ದೇಶ್ವರ್ ತೇಲುತ್ತಿದ್ದರೆ ಹಾಲಿ ಶಾಸಕರಾಗಿರುವ ಮಲ್ಲಿಕಾರ್ಜುನ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳಿಂದ ಈ ಬಾರಿ ಗೆಲುವು ನಮ್ಮದೇ ಎಂದು ಪುನಃ ಅಖಾಡಕ್ಕೆ ಇಳಿದಿದ್ದಾರೆ.

ಚಾಮರಾಜನಗರದಲ್ಲಿ ಮೂವರು ಹಳೆ ಹುಲಿಗಳು
ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ 2009ರಲ್ಲಿ ಕದನಕ್ಕಿಳಿದಿದ್ದ ಮೂರು ಪಕ್ಷಗಳ ಬದ್ಧ ವೈರಿಗಳೇ 2014ರ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಈ ಬಾರಿ ಯಾರು ಗೆದ್ದು ಮೀಸೆ ತಿರುವುತ್ತಾರೆ ಎಂದು ಕಾದು ನೋಡಬೇಕು. 2009ರಲ್ಲಿ ಬಿಜೆಪಿಯಿಂದ ಎ.ಆರ್.ಕೃಷ್ಣಮೂರ್ತಿ, ಕಾಂಗ್ರೆಸ್ನಿಂದ ಆರ್.ಕೆ.ಧೃವನಾರಾಯಣ, ಜೆಡಿಎಸ್ ಪಕ್ಷದಿಂದ ಕೋಟೆ ಶಿವಣ್ಣ ಅಖಾಡಕ್ಕೆ ಇಳಿದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಉಂಟಾಗಿ ಕೊನೆಗೆ ಕಾಂಗ್ರೆಸ್ ನ ಧೃವನಾರಾಯಣ ಜಯಗಳಿಸಿದ್ದರು. ಈ ಬಾರಿ ಮತ್ತೊಮ್ಮೆ ಮೂವರು ಅಭ್ಯರ್ಥಿಗಳು ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಗೆಲುವು ಯಾರಿಗೆ?

ತುಮಕೂರಿನಲ್ಲಿ ಕೋಟೆ ಕಟ್ಟೋದ್ಯಾರು?
ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆ ತುಮಕೂರಿನಲ್ಲಿ ಹಳೆ ವೈರಿಗಳೇ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. 2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಜಿ.ಎಸ್.ಬಸವರಾಜು ಮತ್ತು ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಬಸವರಾಜುಗೆ ಪೈಪೋಟಿ ನೀಡಿದ್ದ ಎಸ್.ಪಿ.ಮುದ್ದಹನುಮೇಗೌಡ ಈ ಬಾರಿ ಕಾಂಗ್ರೆಸ್ ಕೈ ಹಿಡಿದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಸ್ಪರ್ಧೆಗೆ ಇಳಿದಿದ್ದು ಹಳೆ ಹುಲಿಗಳ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಉಪ ಚುನಾವಣೆಯ ಫಲಿತಾಂಶ ಪುನಃ ಬರುತ್ತಾ?
ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ನಿಂದ ಸಿ.ಎಸ್.ಪುಟ್ಟರಾಜು ಹಾಗೂ ಕಾಂಗ್ರೆಸ್ ಪಕ್ಷದಿಂದ ರಮ್ಯಾ ಕಣಕ್ಕಿಳಿದ್ದಾರೆ. ಈ ಇಬ್ಬರು ನಾಯಕರು ಆಗಸ್ಟ್ ನಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ರಮ್ಯಾ ಜೆಡಿಎಸ್ ಭದ್ರಕೋಟೆಯನ್ನು ಗೆದ್ದು ಸಂಸತ್ ಪ್ರವೇಶಿಸಿದ್ದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿಯೂ ಇಲ್ಲಿ ರಮ್ಯಾ ಮತ್ತು ಪುಟ್ಟರಾಜು ಅಭ್ಯರ್ಥಿಗಳು. ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ ಈ ಬಾರಿ ಶಿವಲಿಂಗಯ್ಯ ಅವರನ್ನು ಕಣಕ್ಕಿಳಿಸಿದೆ. ಆದ್ದರಿಂದ ರಮ್ಯಾ, ಪುಟ್ಟರಾಜು ನಡುವೆ ಮತ್ತೊಬ್ಬ ಅಭ್ಯರ್ಥಿಯು ಕಣಕ್ಕೆ ಇಳಿಸಿದ್ದಾರೆ.

ಹಾವೇರಿಯಲ್ಲಿ ಗೆಲುವು ಯಾರಿಗೆ?
2009ರಲ್ಲಿ ಮೊದಲ ಬಾರಿ ಚುನಾವಣೆ ಎದುರಿಸಿದ ಬಿಜೆಪಿಯ ಶಿವಕುಮಾರ ಉದಾಸಿ, ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮ್ಮದ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಹಾವೇರಿ ಕ್ಷೇತ್ರದಲ್ಲಿ ಈ ಬಾರಿ ಪುನಃ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾಗಿದ್ದು, ಈ ಬಾರಿ ಯಾರಿಗೆ ಗೆಲುವು ಎಂದು ಕಾದು ನೋಡಬೇಕು.

ಕೇಂದ್ರ ಸಚಿವ ಖರ್ಗೆಗೆ ಸವಾಲು
ಗುಲ್ಬರ್ಗ ಕ್ಷೇತ್ರದಲ್ಲಿಯೂ ಹಳೆ ಹುಲಿಗಳು ಮತ್ತೊಮ್ಮೆ ಅಖಾಡಕ್ಕಿ ಇಳಿದಿವೆ. 2009ರ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯ ರೇವುನಾಯಕ್ ಬೆಳಮಗಿ ಈ ಬಾರಿಯು ಮುಖಾಮುಖಿಯಾಗಿದ್ದಾರೆ. ಈ ಬಾರಿ ಕೇಂದ್ರ ಸಚಿವರಿಗೆ ಸೋಲಿನ ರುಚಿ ತೋರಿಸಲು ಬೆಳಮಗಿ ಸಜ್ಜಾಗಿದ್ದಾರೆ.

ಚಿಕ್ಕೋಡಿಯಲ್ಲಿ ಹುಕ್ಕೇರಿ v/s ಕತ್ತಿ
ಚಿಕ್ಕೋಡಿಯಲ್ಲಿ ಎರಡು ಪ್ರತಿಷ್ಠಿತ ಕುಟುಂಬಗಳು ಅಖಾಡಕ್ಕಿಳಿದಿವೆ. ಬಿಜೆಪಿಯಿಂದ ರಮೇಶ್ಕತ್ತಿ ಹಾಗೂ ಕಾಂಗ್ರೆಸ್ನಿಂದ ಸಚಿವ ಪ್ರಕಾಶ್ ಹುಕ್ಕೇರಿ ಕಣಕ್ಕಿಳಿದಿದ್ದಾರೆ. ಇಬ್ಬರು 2009ರ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದರು. ಮತ್ತೊಮ್ಮೆ ಪರಸ್ಪರ ಎದುರಾಳಿಗಳಾಗಿದ್ದಾರೆ. ಹುಕ್ಕೇರಿ ಈ ಬಾರಿ ಗೆಲುವಿನ ನಗೆ ಬೀರಿ ಮೀಸೆ ತಿರುವುತ್ತಾರೆಯೇ ಕಾದು ನೋಡಬೇಕು.












Click it and Unblock the Notifications