7ನೇ ವೇತನ ಆಯೋಗ: ಸಮಿತಿಗೆ ಬೇಡಿಕೆ ಸಲ್ಲಿಸಿದ ಕರ್ನಾಟಕ ಸರ್ಕಾರಿ ಸಚಿವಾಲಯದ ನೌಕರರ ಸಂಘ
ಕರ್ನಾಟಕ ಸರ್ಕಾರಿ ಸಚಿವಾಲಯದ ನೌಕರರ ಸಂಘವು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ಅವರು 7ನೇ ವೇತನ ಆಯೋಗದ ಮುಖ್ಯಸ್ಥರಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಪಿ ಬಿ ರಾಮಮೂರ್ತಿ, ನಿವೃತ್ತ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ ವನಹಳ್ಳಿ ಮತ್ತು ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸದಸ್ಯ-ಕಾರ್ಯದರ್ಶಿಗಳಾಗಿದ್ದಾರೆ.
ಶನಿವಾರ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘವು ತಮ್ಮ ಬೇಡಿಕೆಗಳ ವರದಿಯನ್ನು ಸಮಿತಿಗೆ ಸಲ್ಲಿಸಿತು. ಹಲವು ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದ್ದು ಆದಷ್ಟು ಬೇಗನೆ ಅನುಷ್ಠಾನ ಮಾಡುವಂತೆ ಒತ್ತಾಯ ಮಾಡಿದೆ.

ಸಂಘದ ಬೇಡಿಕೆಗಳೇನು?
ಸಂಘದ ಕೆಲವು ಪ್ರಮುಖ ಬೇಡಿಕೆಗಳೆಂದರೆ ಕನಿಷ್ಠ ವೇತನವನ್ನು ಈಗ ಇರುವ 17,000 ರೂ.ಗಳಿಂದ 35,000 ರೂ.ಗೆ ಹೆಚ್ಚಿಸುವುದು, ಕೇಂದ್ರ ಸರ್ಕಾರದಂತೆಯೇ ವಾರದಲ್ಲಿ ಐದು ಕೆಲಸದ ದಿನಗಳು, ಸೆಕ್ರೆಟರಿಯೇಟ್ ನೌಕರರಿಗೆ ಪ್ರತಿ ವರ್ಷ 5% ಹೆಚ್ಚಳ, ಅಧಿವೇಶನ ಭತ್ಯೆಯನ್ನು 500 ರೂಪಾಯಿಗಳಿಂದ 1000 ರೂಪಾಯಿಗೆ ಹೆಚ್ಚಿಸುವುದು ಮತ್ತು 'ಬಂಚಿಂಗ್ ಸಿಸ್ಟಮ್' ಅನ್ನು ಕೈಬಿಟ್ಟು ಮತ್ತು ಹಿರಿತನದ ಆಧಾರದ ಮೇಲೆ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು ಎಂದು ಒತ್ತಾಯ ಮಾಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಕೆಲವು ಶಿಫಾರಸುಗಳೆಂದರೆ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸಾರಿಗೆ ಭತ್ಯೆ ಮತ್ತು ತುಟ್ಟಿ ಭತ್ಯೆ ಕನಿಷ್ಠ 2,800 ರೂಪಾಯಿಗಳಿಗೆ ನಿಗದಿ ಪಡಿಸಲು ಕೇಳಿದೆ.
ಕೇಂದ್ರ ಸರ್ಕಾರದಲ್ಲಿ 20 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದವರಿಗೆ ಪೂರ್ಣ ಪಿಂಚಣಿ ಸೌಲಭ್ಯ ಸಿಗುತ್ತಿದೆ, ಆಯೋಗದ ಗಮನಕ್ಕೆ ತರಲಾಗಿದೆ ಮತ್ತು ಅದೇ ರೀತಿ ರಾಜ್ಯ ಸರ್ಕಾರಿ ನೌಕರರಿಗೂ ಅನುಸರಿಸಬೇಕು ಎಂದು ಒತ್ತಾಯ ಮಾಡಲಾಗಿದೆ.
ಸ್ವಯಂ ನಿವೃತ್ತಿಗಾಗಿ ಕನಿಷ್ಠ ಸೇವಾವಧಿಯನ್ನು ಕಡಿತಗೊಳಿಸುವುದು, ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು ಮತ್ತು ಪೂರ್ಣ ಪಿಂಚಣಿ ಪಡೆಯಲು ನಿಗದಿತ ಸೇವಾವಧಿಯನ್ನು 30 ವರ್ಷದಿಂದ 20 ವರ್ಷಕ್ಕೆ ಇಳಿಸುವುದು ಇತರೆ ಬೇಡಿಕೆಗಳಾಗಿವೆ. ನಿವೃತ್ತ ನೌಕರರಿಗೂ ವೈದ್ಯಕೀಯ ಸೌಲಭ್ಯಗಳನ್ನು ನೀಡುವಂತೆ ಸಂಘವು ಮನವಿ ಮಾಡಿದೆ.
7ನೇ ವೇತನ ಆಯೋಗ ನೌಕರರ ಮನವಿಗಳನ್ನು ಆಲಿಸುತ್ತಿದ್ದು, ವಿಸ್ತೃತವಾದ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಲಿದೆ. ಇದರ ಅನ್ವಯ ನೌಕರರ ವೇತನ ಹೆಚ್ಚಳದ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ.












Click it and Unblock the Notifications