ಮನವಿ ನೀಡಲು ದೆಹಲಿಗೆ ಬಂದ ವೃದ್ಧೆ ಮುನಿಯಮ್ಮಳ ಕಥೆಗೆ ಕಣ್ಣೀರಾದ ಸಿಎಂ
ನವದೆಹಲಿ, ಮೇ 30: ವೃದ್ಧ ಮಹಿಳೆ ಮತ್ತು ಮುಖ್ಯಮಂತ್ರಿ ನಡುವಿನ ಭಾವುಕ ಸನ್ನಿವೇಶಕ್ಕೆ ದೆಹಲಿಯ ಕರ್ನಾಟಕ ಭವನ ಸೋಮವಾರ ಸಾಕ್ಷಿಯಾಯಿತು. ನಾಡಿನ ದೊರೆಯನ್ನು ಭೇಟಿಯಾಗಲಿ ಚಿಕ್ಕಬಳ್ಳಾಪುರದಿಂದ ದೆಹಲಿವರೆಗೆ ಬಂದಿದ್ದ 60 ವರ್ಷದ ಮುನಿಯಮ್ಮನ ಕಥೆ ಸಿದ್ದರಾಮಯ್ಯ ಕಣ್ಣಲ್ಲೂ ನೀರು ತರಿಸಿತು.
ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡಿ ತಾಲೂಕಿನ ವೃದ್ದೆ ಮುನಿಯಮ್ಮ ಜಮೀನು ವ್ಯಾಜ್ಯದಲ್ಲಿ ಸಿಲುಕಿಕೊಂಡಿತ್ತು. ಆಕೆ ಈ ಭೂಮಿಗೆ ಪರ್ಯಾಯವಾಗಿ ಭೂಮಿ ಪಡೆಯಲು ಸತತ ಪ್ರಯತ್ನ ನಡೆಸಿ ವಿಫಲರಾಗಿದ್ದರು. ಅಧಿಕಾರಿಗಳ ಮನೆಗೆ ನಿರಂತರ ಎಡತಾಕಿದರೂ ಮುನಿಯಮ್ಮರಿಗೆ ನ್ಯಾಯ ಸಿಗಲಿಲ್ಲ.

ಕೊನೆಗೆ ಮುಖ್ಯಮಂತ್ರಿಗಳ ಬಳಿ ಹೋದರೆ ನನ್ನ ಸಮಸ್ಯೆಗೆ ಖಂಡಿತ ಪರಿಹಾರ ಸಿಗುವುದೆಂದು ಮನಗಂಡ ಆಕೆ ಮುಖ್ಯಮಂತ್ರಿಯನ್ನು ಭೇಟಿಯಾಗಲು ನಿರ್ಧರಿಸಿದರು. ಆದರೆ ಮುಖ್ಯಮಂತ್ರಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗಲು ಮುನಿಯಮ್ಮರಿಗೆ ಅವಕಾಶ ಸಿಗಲೇ ಇಲ್ಲ.
ಅದು ಹೇಗೋ ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಗೆ ತೆರಳುವ ವಿಷಯವನ್ನು ಮುನಿಯಮ್ಮ ತಿಳಿದುಕೊಂಡರು. ಮಾತ್ರವಲ್ಲ ನವದೆಹಲಿಯಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗಬಹುದು ಎಂದು ನಿರ್ಧರಿಸಿದ ಆಕೆ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿದರು. ಹಿಂದಿ ಗೊತ್ತಿಲ್ಲದ ಆಕೆ ಸುಮಾರು 40 ಜನರ ಬಳಿ ಕರ್ನಾಟಕ ಭವನಕ್ಕೆ ದಾರಿ ಕೇಳಿ ಕೊನೆಗೂ ಕರ್ನಾಟಕ ಭವನ ತಲುಪಿದರು.
ಮುಖ್ಯಮಂತ್ರಿ ಬರುವಾಗ ಸರಿಯಾಗಿ ಕರ್ನಾಟಕ ಭವನದ ಮುಂದೆ ಹಾಜರಾದ ಮುನಿಯಮ್ಮ ಸಿದ್ದರಾಮಯ್ಯ ಜತೆ ಮನವಿ ಪತ್ರದೊಂದಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಮುಂದಾದರು.

ದೆಹಲಿಯ ಕರ್ನಾಟಕ ಭವನದಲ್ಲಿ ತಮ್ಮನ್ನು ಭೇಟಿಯಾಗಲು ಬಂದ ವೃದ್ಧೆಯನ್ನು ನೋಡಿ ಚಕಿತರಾದ ಮುಖ್ಯಮಂತ್ರಿಗಳು ನಿಂತು ಮುನಿಯಮ್ಮರ ಅಹವಾಲಿಗೆ ಕಿವಿಯಾದರು. ಆಕೆಯ ಭೂ ವ್ಯಾಜ್ಯ ಹೋರಾಟದ ದುಖ:ದ ಕಥೆಯನ್ನು ಕೇಳಿ ಅರೆ ಕ್ಷಣ ಮುಖ್ಯಮಂತ್ರಿಗಳೂ ಕಣ್ಣೀರಾದರು.
ತಕ್ಷಣವೇ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರಿಗೆ ಕರೆ ಮಾಡಿ ಆದ್ಯತೆಯ ಮೇಲೆ ಮುನಿಯಮ್ಮ ಅವರ ಸಮಸ್ಯೆ ಬಗೆಹರಿಸಲು ಸೂಚಿಸಿದರು. ನಂತರ ಆಕೆ ಊರಿಗೆ ಹಿಂತಿರುಗಲು ತಮ್ಮ ಪರ್ಸಿನಿಂದಲೇ ಹಣ ತೆಗೆದು ಮುಖ್ಯಮಂತ್ರಿಗಳು ನೀಡಿದರು. ಮುನಿಯಮ್ಮರಿಗೆ ಊಟ-ಉಪಹಾರ ವ್ಯವಸ್ಥೆಗೊಳಿಸಿ ಕರ್ನಾಟಕ ಭವನದಲ್ಲಿ ತಂಗಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಸ್ಪಂದನೆಯಿಂದ ಮೂಕವಿಸ್ಮಿತರಾದ ಮುನಿಯಮ್ಮ ಕಣ್ಣಲ್ಲೂ ನೀರು ಜಿನುಗಿತು; ತೃಪ್ತಿಯ ನಿಟ್ಟುಸಿರು ಬಿಟ್ಟರು. ಎರಡು ಕೈ ಜೋಡಿಸಿ ಮುಖ್ಯಮಂತ್ರಿಗಳಿಗೆ ನಮಿಸಿದರು ಮತ್ತು ಸಿದ್ದರಾಮಯ್ಯ ದೀರ್ಘ ಕಾಲ ಉಳಿಯಲಿ ಎಂದು ಹಾರೈಸಿದರು. ಈ ಸನ್ನಿವೇಶ ಅಲ್ಲಿ ನೆರೆದವರ ಕಣ್ಣಾಲಿಯನ್ನು ತೇವಗೊಳಿಸಿತು.
ಇನ್ನು "ಮುನಿಯಮ್ಮಳ ಸಮಸ್ಯೆ ಬಗೆಹರಿಸಲು, ಆಕೆಯನ್ನು ಭೇಟಿಯಾಗಲು ತಾವು ಎದುರು ನೋಡುತ್ತಿದ್ದೇನೆ. ಅವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಂತೆ ಅವರನ್ನು ಭೇಟಿಯಾಗುತ್ತೇನೆ," ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಕಾನಡೆ 'ನ್ಯೂಸ್18'ಗೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications